ಈ ವಾರ ಡಬಲ್ ಎಲಿಮಿನೇಷನ್ -ಬಿಗ್‌ಬಾಸ್ ಮನೆಯಿಂದ ಇಶಾನಿ ಮತ್ತು ಭಾಗ್ಯಶ್ರೀ ಔಟ್

ಈ ವಾರ ಡಬಲ್ ಎಲಿಮಿನೇಷನ್ -ಬಿಗ್‌ಬಾಸ್ ಮನೆಯಿಂದ ಇಶಾನಿ ಮತ್ತು ಭಾಗ್ಯಶ್ರೀ ಔಟ್

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಇಬ್ಬರ ಪಯಣ ಅಂತ್ಯವಾಗಿದೆ. ಶನಿವಾರವೇ ಬಿಗ್‌ಬಾಸ್ ಮನೆಯಲ್ಲಿ ಇಶಾನಿಯ ಜರ್ನಿ ಎಂಡ್ ಆಗಿತ್ತು. ಭಾನುವಾರದ ಎಪಿಸೋಡ್‌ನಲ್ಲಿ ಕಿರುತೆರೆ ನಟಿ ಭಾಗ್ಯಶ್ರೀ ಕೂಡಾ ಮನೆಯಿಂದ ಹೊರನಡೆದಿದ್ದು, ಇವರ ಬಿಗ್‌ಬಾಸ್ ಜರ್ನಿ ಮುಕ್ತಾಯಗೊಂಡಿದೆ.

ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿಯಿಂದ ಗರ್ಭಿಣಿಯಾಗಿದ್ದಾಗಿ ಹೇಳಿಕೆ- ಈ ವಾರ ಎಲಿಮಿನೇಟ್ ಆಗೋದು ಇವರೇ..!

ಬಿಗ್‌ಬಾಸ್ ಮನೆಯಿಂದ ಕಳೆದ ವಾರವೇ ಇಶಾನಿ ಹೊರಗೆ ಹೋಗಬೇಕಿತ್ತು. ಆದರೆ ವರ್ತೂರ್ ಸಂತೋಷ್ ಅವರ ಕಾರಣದಿಂದ ಎಲಿಮಿನೇಷನ್ ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ ಸುದೀಪ್, ನಿಮ್ಮ ಪಯಣ ಬಿಗ್‌ಬಾಸ್ ಮನೆಯಲ್ಲಿ ಮುಗಿಯುತ್ತಿದೆ. ಆಲ್ ದಿ ಬೆಸ್ಟ್ ಎಂದು ಹೇಳಿದರು. ಇಶಾನಿ ಕೂಡಾ ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿ ನಿರ್ಗಮಿಸಿದರು.

ಇಶಾನಿ ಎಲಿಮಿನೇಷನ್ ಬೆನ್ನಲ್ಲೇ ಭಾಗ್ಯಶ್ರೀ ಕೂಡ ಬಿಗ್ ಬಾಸ್ ಮನೆಯಿಂದ ಔಟ್ ಆದರು. ಭಾನುವಾರ ಭಾಗ್ಯ ಅವರ ಆಟ ಅಂತ್ಯವಾಗಿದೆ. ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ಇಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸಖತ್ ಆಗಿ ಭಾಗ್ಯ ಅವರು ಆಟ ಆಡಿದ್ದರು. ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ರೂ, ಭಾಗ್ಯಶ್ರೀ ಅವರು ಬಿಗ್ ಮನೆಗೆ ಕಾಲಿಟ್ಟ ದಿನದಿಂದಲೇ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್‌ಬಾಸ್‌ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು. ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಸುದೀಪ್‌ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡ. ಆದರೆ ಬಿಗ್‌ಬಾಸ್ ಮನೆಯ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು ಬಿಗ್‌ಬಾಸ್. ಅದರ ಮುಂದಿನ ವಾರ ಪ್ರತಾಪ್‌ ಅವರು ಭಾಗ್ಯಶ್ರೀಯನ್ನು ನಾಮಿನೇಷನ್‌ ಪಟ್ಟಿಯಿಂದಲೇ ಪಾರುಮಾಡಿದ್ದರು. ಅದಾದ ಮೇಲೆ, ವರ್ತೂರು ಸಂತೋಷ್‌ ಅವರ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್‌ ನಡೆದಿರಲಿಲ್ಲ. ಈ ವಾರ ಡಬಲ್‌ ಎಲಿಮಿನೇಷನ್‌ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು.

Sulekha