ಸಂಸದರ ಐಫೋನ್‌ ಕದ್ದಾಲಿಕೆ ಮಾಡುತ್ತಿದೆಯಾ ಕೇಂದ್ರ? – ಆಪಲ್‌ ಕಂಪನಿ ಹೇಳಿದ್ದೇನು?

ಸಂಸದರ ಐಫೋನ್‌ ಕದ್ದಾಲಿಕೆ ಮಾಡುತ್ತಿದೆಯಾ ಕೇಂದ್ರ? – ಆಪಲ್‌ ಕಂಪನಿ ಹೇಳಿದ್ದೇನು?

ನವದೆಹಲಿ: ಕೇಂದ್ರ ಸರ್ಕಾರ ಸಂಸದರ ಐಫೋನ್‌ಗಳನ್ನು ಹ್ಯಾಕ್‌ ಮಾಡಿ ಕದ್ದಾಲಿಕೆ ಮಾಡುತ್ತಿದೆ. ತಮ್ಮ ಫೋನ್‌ಗಳ ಮೇಲೆ ‘ಸರ್ಕಾರಿ ಪ್ರಾಯೋಜಕತ್ವದ ದಾಳಿ’ ನಡೆಯುತ್ತಿದೆ ಎಂದು ವಿರೋಧ ಪಕ್ಷಗಳ ವಿವಿಧ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಆಪಲ್‌ ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಕಾಂಗ್ರೆಸ್ ನಾಯಕ ಶಶಿ ತರೂರ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಶಿವಸೇನಾದ (ಉದ್ಧವ್ ಬಣ) ಪ್ರಿಯಾಂಕಾ ಚತುರ್ವೇದಿ ಅವರು ತಮ್ಮ ಐ ಫೋನ್‌ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರು ಟಾರ್ಗೆಟ್ ಮಾಡುತ್ತಿರಬಹುದು ಎಂದು ಆಪಲ್ ಕಂಪೆನಿಯಿಂದ ಫೋನ್ ಹಾಗೂ ಇ-ಮೇಲ್‌ಗಳಿಗೆ ಎಚ್ಚರಿಕೆ ಸಂದೇಶ ಬಂದಿರುವುದಾಗಿ ಹೇಳಿದ್ದಾರೆ.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಈ ಸಂದೇಶಗಳ ಬಗ್ಗೆ ಅರಿವಿದೆ. ಐಫೋನ್‌ಗಳಲ್ಲಿ ಬೆದರಿಕೆ ಪತ್ತೆ ಮಾಡುವ ತಂತ್ರಜ್ಞಾನವು ಕೆಲವೊಮ್ಮೆ ಅಸಮಗ್ರ ಹಾಗೂ ಅಪೂರ್ಣವಾಗಿರುತ್ತದೆ ಎಂದಿದೆ.

ಆಪಲ್ ಪ್ರತಿಕ್ರಿಯೆ?

‘ಸರ್ಕಾರಿ ಪ್ರಾಯೋಜಿತ ದಾಳಿಯ ನಿರಂತರ ಪ್ರಯತ್ನ’ವನ್ನು ತಮ್ಮ ವ್ಯವಸ್ಥೆಗಳು ಪತ್ತೆ ಮಾಡಿದರೆ ಈ ನೋಟಿಫಿಕೇಷನ್‌ಗಳು ರವಾನೆಯಾಗುತ್ತವೆ. ‘ಆಲ್ಗರಿದಮ್ ದೋಷ’ದ ಕಾರಣದಿಂದ ಈ ‘ಬೆದರಿಕೆ ಸೂಚನೆಗಳು’ ರವಾನೆಯಾಗಿವೆ ಎಂದು ಐಫೋನ್ ತಯಾರಕ ಆಪಲ್ ತಿಳಿಸಿದೆ. ಈ ಸಮಸ್ಯೆ ಸಂಬಂಧ ಶೀಘ್ರದಲ್ಲಿಯೇ ವಿವರವಾದ ಹೇಳಿಕೆ ನೀಡುವುದಾಗಿ ತಿಳಿಸಿದೆ.

ಇದನ್ನೂ ಓದಿ: ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಮಧ್ಯಂತರ ಜಾಮೀನು ಮಂಜೂರು

ಸಂದೇಶದಲ್ಲಿ ಏನಿದೆ?

“ನೀವು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಂದ ಗುರಿಯಾಗುತ್ತಿದ್ದೀರಿ ಎಂದು ಆಪಲ್‌ಗೆ ಭಾಸವಾಗಿದೆ. ಅವರು ನಿಮ್ಮ ಆಪಲ್ ಐಡಿಗೆ ಸಂಬಂಧಿಸಿದ ಐಫೋನ್‌ಗೆ ದೂರದಿಂದ ಕನ್ನ ಹಾಕಲು ಪ್ರಯತ್ನಿಸುತ್ತಿದ್ದಾರೆ” ಎಂದು ಆಪಲ್‌ನ ಸಂದೇಶ ಹೇಳಿದೆ.

“ಈ ದಾಳಿಕೋರರು ನೀವು ಯಾರು ಅಥವಾ ನೀವು ಏನು ಮಾಡುತ್ತೀರಿ ಎಂಬ ಆಧಾರದಲ್ಲಿ ನಿಮ್ಮನ್ನು ವ್ಯಕ್ತಿಗತವಾಗಿ ಟಾರ್ಗೆಟ್ ಮಾಡುತ್ತಿರುವ ಸಾಧ್ಯತೆ ಇದೆ. ನಿಮ್ಮ ಸಾಧನವು ಸರ್ಕಾರಿ ಪ್ರಾಯೋಜಿತ ದಾಳಿಕೋರನಿಂದ ಹೊಂದಾಣಿಕೆಗೆ ಒಳಪಟ್ಟಿದ್ದರೆ, ನಿಮ್ಮ ಸೂಕ್ಷ್ಮ ಡೇಟಾ, ಸಂಹವನಗಳು ಅಥವಾ ಕ್ಯಾಮೆರಾ ಮತ್ತು ಮೈಕ್ರೋಫೋನ್‌ಗಳನ್ನು ಕದಿಯಲು ಅವರಿಗೆ ಸಾಧ್ಯವಾಗಲಿದೆ. ಇದು ಸುಳ್ಳು ಎಚ್ಚರಿಕೆಯಾಗುವ ಸಾಧ್ಯತೆ ಇದ್ದರೂ, ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ” ಎಂದು ತಿಳಿಸಿದೆ.

ಬಿಜೆಪಿ ಪ್ರತಿಕ್ರಿಯೆ ಏನು?

ತಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕರ ವಿರುದ್ಧ ಹರಿಹಾಯ್ದಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ, ಆಪಲ್‌ನ ಸ್ಪಷ್ಟೀಕರಣ ಬರುವವರೆಗೂ ಕಾಯುವಂತೆ ಮನವಿ ಮಾಡಿದ್ದಾರೆ.

Shwetha M