ಬಳೆ, ಮಹಿಳೆ ಬಗ್ಗೆ ಮಾತಲ್ಲಿ ಎಲ್ಲೆ ಮೀರುತ್ತಿದ್ದಾರೆ ವಿನಯ್ ಗೌಡ..! – ಬಿಗ್‌ಬಾಸ್ ಫ್ಯಾಮಿಲಿ ಶೋ ಅಲ್ವಾ? ನಮ್ರತಾ ಬಾಯಿಗೂ ಬೇಕಿದೆಯಾ ಬೀಗ?

ಬಳೆ, ಮಹಿಳೆ ಬಗ್ಗೆ ಮಾತಲ್ಲಿ ಎಲ್ಲೆ ಮೀರುತ್ತಿದ್ದಾರೆ ವಿನಯ್ ಗೌಡ..! – ಬಿಗ್‌ಬಾಸ್ ಫ್ಯಾಮಿಲಿ ಶೋ ಅಲ್ವಾ? ನಮ್ರತಾ ಬಾಯಿಗೂ ಬೇಕಿದೆಯಾ ಬೀಗ?

ಬಿಗ್‌ಬಾಸ್ ಒಂದು ಜನಪ್ರಿಯ ರಿಯಾಲಿಟಿ ಶೋ. ಬಿಗ್‌ಬಾಸ್ ಎಂಬ ದೊಡ್ಮನೆಯಲ್ಲಾಗುವ ಜಗಳ ಇಡೀ ಜಗತ್ತೇ ನೋಡುತ್ತಿರುತ್ತದೆ. ಈ ಸಣ್ಣ ಕಲ್ಪನೆಯೂ ಈಗ ಇರುವ ಸ್ಪರ್ಧಿಗಳಿಗೆ ಇಲ್ವಾ?. ಅದರಲ್ಲೂ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಮಾತು ಎಲ್ಲೇ ಮೀರುತ್ತಿದೆ. ಕುಟುಂಬದವರ ಜೊತೆ ಕುಳಿತು ಏನಾದರೂ ಬಿಗ್‌ಬಾಸ್ ಶೋ ನೋಡಿದರೆ ಎಲ್ಲರಿಗೂ ಮುಜುಗರ ಆಗುತ್ತದೆ. ವಿನಯ್‌ಗೌಡ ಮತ್ತು ನಮ್ರತಾ ಬಾಯಲ್ಲಿ ಬರುವ ಪದಗಳು ಕೇಳಲು ತುಂಬಾ ಕಷ್ಟವಾಗುತ್ತಿದೆ ಎಂಬ ಅಭಿಪ್ರಾಯ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಮರಳಿ ಬಂದ ವರ್ತೂರು ಸಂತೋಷ್ – ಉಳಿದ ಸ್ಪರ್ಧಿಗಳಿಂದ ಇಲ್ಲಿ ಇರಲು ವರ್ತೂರು ಅರ್ಹರಲ್ಲ ಎಂಬ ಅಭಿಪ್ರಾಯ

ಬಿಗ್‌ಬಾಸ್ ಮನೆಯಲ್ಲಿ ಕೆಲ ಸ್ಪರ್ಧಿಗಳಿಗೆ ಬಾಯಿ ಮತ್ತು ನಾಲಗೆಗೆ ಕಂಟ್ರೋಲ್ ಇಲ್ಲವೇ ಇಲ್ಲ. ಕ್ಯಾಮರಾಗಳಿವೆ.. ಜನ ನೋಡುತ್ತಿರುತ್ತಾರೆ ಎಂಬ ಬಗ್ಗೆ ಕಿಂಚಿತ್ತೂ ಅರಿವಿಲ್ಲವೋ.. ತಾವು ಏನ್ ಮಾಡಿದರೂ ನಡೆಯುತ್ತೆ. ತಾವು ಇರೋದೇ ಹಾಗೆ ಎಂಬ ದುರಹಂಕಾರವೋ.. ಅವರು ಬಳಸುವ ಪದಗಳನ್ನು ಕೇಳಲು ಸಾಧ್ಯವಾಗುವುದೇ ಇಲ್ಲ. ಅದರಲ್ಲೂ ವಿನಯ್ ಗೌಡ ಮಾತಲ್ಲಿ ನಯ, ವಿನಯ ಇಲ್ಲವೇ ಇಲ್ಲ. ಬರೀ ದುರಹಂಕಾರ, ಮಹಿಳೆಯರ ಬಗ್ಗೆ ಕೀಳು ಮಟ್ಟದ ಹೇಳಿಕೆ ಜಾಸ್ತಿಯಾಗಿದೆ. ಅದರಲ್ಲೂ ಒಂದು ವಿಪರ್ಯಾಸವೆಂದರೆ ಸದಾ ವಿನಯ್‌ಗೌಡ ಬಾಲದಂತೆ ಇರುವ ನಮ್ರತಾ ಕೂಡಾ ತಾನೊಬ್ಬಳು ಹೆಣ್ಣು ಅನ್ನೋದು ಮರೆತಂತೆ ಕಾಣುತ್ತದೆ. ಬಳೆಗಳನ್ನು ಹಾಕಿಕೊಂಡವರ ಬಗ್ಗೆ ಎಷ್ಟೇ ಕೆಟ್ಟದಾಗಿ ಮಾತಾಡಿದರೂ ನಮ್ರತಾ ವಿನಯ್ ಗೌಡಗೆ ಸಪೋರ್ಟ್ ಮಾಡುತ್ತಲೇ ಇದ್ದಾಳೆ. ಇದರ ಜೊತೆಗೆ ಮಾತಿನಲ್ಲೂ ನಮ್ರತೆಯನ್ನೇ ಮರೆತುಬಿಟ್ಟಂತೆ ಕಾಣುತ್ತದೆ. ಕಿತ್ತೋದವಳು, ಮೂರು ಬಿಟ್ಟವಳು ಹೀಗೆ ನಾನಾ ರೀತಿಯಲ್ಲಿ ನಮ್ರತಾ ಬಾಯಲ್ಲಿ ಪದಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ. ಈ ಹಿಂದೆ ತನಿಷಾ ಬಗ್ಗೆ ಕಿತ್ತೋದವಳು ಅಂತ ನಮ್ರತಾ ಹೇಳಿದ್ದರು. ತನಿಷಾ ವಿರುದ್ಧ ಕಿರುಚಾಡಿ, ಅರಚಾಡಿ, ಏಕವಚನ ಬಳಸಿ, ಅವಾಚ್ಯ ಶಬ್ದ ಬಳಸಿ ನಮ್ರತಾ ಬೀಪ್ ಹಾಕಿಸಿಕೊಂಡಿದ್ದರು. ಈಗ ಸಂಗೀತಾಗೆ ನಮ್ರತಾ ಮತ್ತೆ ‘’ಕಿತ್ತೋದವಳು’’ ಅಂತ ಹೇಳಿರುವುದು ಎಷ್ಟು ಸರಿ ಎಂದು ಬಿಗ್‌ಬಾಸೇ ಹೇಳಬೇಕು.

ನಟ ವಿನಯ್ ಗೌಡ ಅವರ ಮಾತುಗಳು ಎಲ್ಲೆ ಮೀರುತ್ತಿವೆ. ತಮಗೆ ತಾವೇ ಪ್ರಬಲ ಸ್ಪರ್ಧಿ ಅಂತ ಭಾವಿಸಿ, ತಮಗೆ ಎದುರಾಳಿಯೇ ಇಲ್ಲ ಎಂದುಕೊಂಡು, ತಾವು ಮಾಡಿದ್ದೇ ಸರಿ, ತಾವು ಆಡಿದ್ದೇ ಸರಿ ಎಂಬ ರೀತಿಯಲ್ಲಿ ವಿನಯ್ ಗೌಡ ನಡೆದುಕೊಳ್ಳುತ್ತಿದ್ದಾರೆ. ಸಂಗೀತಾ ನಡುವಿನ ಜಗಳದ ವೇಳೆ ವಿನಯ್ ಗೌಡ ಅವಾಚ್ಯ ಶಬ್ದಗಳನ್ನ ಬಳಸಿ ಬೀಪ್ ಹಾಕಿಸಿಕೊಂಡಿದ್ದರು. ಡ್ರೋನ್ ಪ್ರತಾಪ್ ಜೊತೆಗೆ ತೀರಾ ಕೇವಲವಾಗಿ ವಿನಯ್ ಗೌಡ ಮಾತನಾಡುತ್ತಿದ್ದಾರೆ. ‘’ಮುಚ್ಕೊಂಡ್ ಕೇಳೋ ಲೇ..’’, ‘’ಏಯ್ ತಿಕ್ಲಾ..’’, ‘’ಡಾಕ್ಟರ್ ಹತ್ತಿರ ತಲೆ ಚೆಕ್ ಮಾಡಿಸ್ಕೋ..’’, ‘’ತುಕಾಲಿ ನನ್ಮಗನೇ’’, ‘’ಲೇಡೀಸ್ ಜೊತೆ ಆಟ ಆಡ್ತಾನಾ?’’ ಅಂತೆಲ್ಲಾ ಡ್ರೋನ್ ಪ್ರತಾಪ್ ಬಗ್ಗೆ ವಿನಯ್ ಗೌಡ ಮಾತನಾಡಿದ್ದಾರೆ. ಕಾರ್ತಿಕ್ ಬೆನ್ನ ಹಿಂದೆ ‘ಬಳೆಗಳ ರಾಜ’ ಅಂತ ವಿನಯ್ ಗೌಡ ಲೇವಡಿ ಮಾಡಿದ್ದಾರೆ. ‘ನನ್ ಹೆಂಡತಿಗೆ ಹೇಳಿ ಅವನಿಗೆ ಬಳೆಗಳನ್ನ ತರಿಸಿಕೊಡ್ತೀನಿ’’ ಅಂತಲೂ ವಿನಯ್ ಗೌಡ ಆಡಿಕೊಂಡು ನಕ್ಕಿದ್ದಾರೆ. ವಿನಯ್ ಗೌಡ ಅವರ ಈ ಮಾತುಗಳು ವೀಕ್ಷಕರನ್ನು, ಅದರಲ್ಲೂ ಮಹಿಳೆಯರನ್ನು ಸಿಕ್ಕಾಪಟ್ಟೆ ಕೆರಳಿಸಿದೆ. ವಿನಯ್ ಗೌಡ ಅವರ ಮೆಂಟಾಲಿಟಿ ಹಾಗೂ ಯೋಚನಾ ಶಕ್ತಿ ಬಗ್ಗೆ ವೀಕ್ಷಕರು ಕಟು ಪ್ರಶ್ನೆಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ‘’ಮಹಿಳೆಯರು ಅಂದ್ರೆ ಕೈಲಾಗದೆ ಇರೋರಾ?’’ ಅಂತೆಲ್ಲಾ ಕಾಮೆಂಟ್ ಮಾಡಿ ನೆಟ್ಟಿಗರು ಗರಂ ಆಗಿದ್ದಾರೆ.

ತಳ್ಳೋದು ಪಳ್ಳೋದು ಮಾಡಿದ್ರೆ, ತೆಗ್ದು ಕಪಾಳಕ್ಕೆ ಬಾರಿಸಿಬಿಡಿ ಅಂತ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಗೌಡ ಹೇಳಿರೋದು ಸೆರೆಯಾಗಿದೆ. ಹಾಗೇ, ಮರ್ಯಾದೆ ಇಲ್ಲದಿರುವ ನಿನ್ನಂಥವಳ ಹತ್ತಿರ ನಾನೇನು ಮಾತಾಡೋದು? ಹೋಗೇ..’’ ಅಂತ ಕೀಳಾಗಿ ಸಂಗೀತಾ ಬಗ್ಗೆ ವಿನಯ್ ಗೌಡ ಮಾತಾಡಿದ್ದಾರೆ. ‘’ಗಂಡಸು ತರಹ ಆಡು, ಬಳೆಗಳನ್ನ ಹಾಕೊಂಡು ಹೆಂಗಸು ತರಹ ಆಡೋದಲ್ಲ’’ ಅಂತ ಕಾರ್ತಿಕ್ ಕುರಿತಾಗಿ ವಿನಯ್ ಮತ್ತೆ ಚುಚ್ಚಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮವನ್ನ ಪ್ರತಿ ನಿತ್ಯ ಕೋಟ್ಯಂತರ ಮಂದಿ ಫಾಲೋ ಮಾಡ್ತಾರೆ. ಈ ಶೋ ಇನ್ನೊಬ್ಬರಿಗೆ ಮಾದರಿ ಆಗದೇ ಇದ್ದರೂ ಬೇಡ. ಮನರಂಜನೆಯಾದರೂ ನೀಡಬಹುದಿತ್ತು. ಆದರೆ, ಸ್ಪರ್ಧಿಗಳ ಬಾಯಲ್ಲಿ ಬರುವ ಕೀಳುಮಟ್ಟದ ಪದಗಳನ್ನು ಬಿಗ್‌ಬಾಸ್ ಶೋನಲ್ಲಿ ತೋರಿಸುವುದು ಎಷ್ಟು ಸರಿ. ಜನಪ್ರಿಯ ನಟ, ನಟಿ ಎನಿಸಿಕೊಂಡವರು ಮಹಿಳೆಯರಿಗೆ, ಹೆಂಗಸರಿಗೆ ಕೊಡುವ ಬೆಲೆ ಇದೇನಾ? ಎಂಬ ಪ್ರಶ್ನೆಯನ್ನು ವೀಕ್ಷಕರು ಕೇಳುತ್ತಿದ್ದಾರೆ.

Sulekha