ಭಾರತದ ಮೇಲೆ ಇರಾನ್ Vs ಇಸ್ರೇಲ್ ವಾರ್ ಎಫೆಕ್ಟ್
ಪೆಟ್ರೋಲ್ ರೇಟ್ ಎಷ್ಟಾಗಬಹುದು?

ಇಸ್ರೇಲ್ ಇರಾನ್ ಯುದ್ಧದಿಂದ ಭಾರತದಲ್ಲಿ ಆರ್ಥಿಕ ಲೆಕ್ಕಾಚಾರಗಳು ತಲೆಕೆಳಗಾಗುತ್ತಿವೆ. ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಹಾಗೂ ಚಿನ್ನದ ಬೆಲೆ ಬಲು ದುಬಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಅಡುಗೆ ಮನೆಯ ವಸ್ತುಗಳು ಕೈಸುಡಲಿವೆ. ಹೌದು ಇಸ್ರೇಲ್ ಹಾಗೂ ಇರಾನ್ನ ನಡುವೆ ಸಂಘರ್ಷ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಾಗಿದೆ. ಯುದ್ಧೋನ್ಮಾದ ಈ ಎರಡೂ ರಾಷ್ಟ್ರಗಳ ನಡುವೆ ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಭಾರತವು ಪೆಟ್ರೋಲ್ – ಡೀಸೆಲ್ ಹಾಗೂ ಕಚ್ಚಾ ತೈಲಗಳಿಗೆ ಮಧ್ಯಪ್ರಾಚ್ಯವನ್ನೇ ಅವಲಂಬಿಸಿದೆ. ಯುದ್ಧದ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಭಾರತಕ್ಕೂ ಬೆಲೆ ಏರಿಕೆಯ ಬಿಸಿ ಮೂಡುವ ಆತಂಕ ಶುರುವಾಗಿದೆ. ಈ ರಾಷ್ಟ್ರಗಳ ನಡುವೆ ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ಭಾರತಕ್ಕೆ ಎದುರಾಗುವ ಮೊದಲ ತಲೆನೋವು ರಾಜತಾಂತ್ರಿಕವಾಗಿ ಹಾಗೂ ವಾಣಿಜ್ಯವಾಗಿ. ಹೌದು ಈ ಎರಡೂ ವಿಚಾರಗಳಲ್ಲೂ ಭಾರತವು ತಟಸ್ಥ ನಿಲುವನ್ನು ಹೊಂದಿದೆ. ಇಸ್ರೇಲ್ ದೇಶವು ಭಾರತದ ಮಿತ್ರ ಹಾಗೂ ಭಾರತಕ್ಕೆ ಸಂಕಷ್ಟದ ಸಮಯದಲ್ಲಿ ನೆರವು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದೇ ಸಂದರ್ಭದಲ್ಲಿ ಇರಾನ್ನೊಂದಿಗೂ ಭಾರತವು ಸಮಾನ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಇರಾನ್ vs ಇಸ್ರೇಲ್ ನಡುವಿನ ಯುದ್ಧದ ವಿಚಾರದಲ್ಲಿ ಭಾರತವು ತಟಸ್ಥವಾಗಿದೆ. ಯಾವುದೇ ರಾಷ್ಟ್ರದ ಪರವಾಗಿಯೂ ಭಾರತ ಇಲ್ಲ, ವಿರೋಧಿಯೋಲ್ಲ. ಆದ್ರೆ ನಮ್ಮ ಶತ್ರುರಾಷ್ಟ್ರ ಪಾಕಿಸ್ತಾನವು ಇರಾನ್ ಬೆಂಬಲಕ್ಕೆ ಬಂದಿದೆ
ಭಾರತದಲ್ಲಿ ಹೆಚ್ಚಲಿದೆ ಪೆಟ್ರೋಲ್ – ಡೀಸೆಲ್ ಬೆಲೆ
ಇಸ್ರೇಲ್ ಇರಾನ್ ಯುದ್ಧದಲ್ಲಿ ಭಾರತವು ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಿದೆ. ಭಾರತದ ವಿದೇಶಾಂಗ ನೀತಿಯು ಎರಡು ದೇಶಗಳ ನಡುವೆ ಸಂಘರ್ಷ ಏರ್ಪಡುವ ವಿಚಾರದಲ್ಲಿ ಮೊದಲಿನಿಂದಲೂ ಹೆಚ್ಚು ಕಾಳಜಿಯ ಹೆಜ್ಜೆಗಳನ್ನು ಇರಿಸಿಕೊಂಡು ಬಂದಿದೆ. ಈಗ ನಡೆಯುತ್ತಿರುವ ಯುದ್ಧವು ಭಾರತದಲ್ಲಿ ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಭಾರತದಲ್ಲಿ ಪೆಟ್ರೋಲ್ – ಡೀಸೆಲ್ ಹಾಗೂ ಚಿನ್ನದ ಬೆಲೆ ಭರ್ಜರಿ ಹೆಚ್ಚಳವಾಗುವ ಆತಂಕವೂ ಮೂಡಿದೆ. ಯುದ್ಧದ ಮುನ್ಸೂಚನೆಯ ಬೆನ್ನಲ್ಲೇ ಕಚ್ಚಾ ತೈಲದ ಬೆಲೆ ಏರಿಕೆ ಕಂಡಿದೆ. ಇಸ್ರೇಲ್ ದೇಶವು ಇರಾನಿನ ತೈಲ ಮತ್ತು ಅನಿಲ ಸೌಲಭ್ಯ ಇರುವ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಈ ಬೆಳವಣಿಗೆಯ ನಂತರ ಜಾಗತಿಕ ತೈಲ ಬೆಲೆ ಭಾರೀ ಹೆಚ್ಚಳ ಕಂಡಿದೆ. ಸೋಮವಾರ ಏಷ್ಯಾದಲ್ಲಿ ಅಂದಾಜು 1 ಪ್ರತಿಶತದಷ್ಟು ಕಚ್ಚಾ ತೈಲ ಬ್ಯಾರೆಲ್ ಬೆಲೆ ಹೆಚ್ಚಳವಾಗಿದೆ. ಇದರಿಂದ ಸಹಜವಾಗಿಯೇ ವಿಶ್ವದಾದ್ಯಂತ ತೈಲೆ ಬೆಲೆ ಹೆಚ್ಚಳವಾಗುತ್ತಿದೆ.
ಇನ್ನು ಇರಾನ್ಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ. ಇರಾನ್ನ ಕಚ್ಚಾ ತೈಲ ಸಂಗ್ರಹ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿದೆ. ಇಸ್ರೇಲ್ನ ದಾಳಿಯು ಈ ಬಾರಿ ಅತ್ಯಂತ ಭೀಕರವಾಗಿತ್ತು. ಇದೀಗ ಇರಾನ್ ಸಹ ಇಸ್ರೇಲ್ನ ಮೇಲೆ ತಿರುಗೇಟು ನೀಡುವುದಕ್ಕೆ ಮುಂದಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ – ಡೀಸೆಲ್ ಹಾಗೂ ಇದರೊಂದಿಗೆ ಹೆಚ್ಚಳವಾಗೋದು ಪಕ್ಕಾ ಎನ್ನಲಾಗುತ್ತಿದೆ.
ರತ ಪ್ರತಿದಿನವೂ 6.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡುತ್ತಿದ್ದು, ಇದರಲ್ಲಿ 90% ವಿದೇಶಗಳಿಂದ ಆಮದಾಗುತ್ತಿದೆ. ಅದರೊಡನೆ, ಭಾರತದ ವಾರ್ಷಿಕ 36 ಮಿಲಿಯನ್ ಟನ್ ಎಲ್ಪಿಜಿಯಲ್ಲಿ 66% ಹಾಗೂ 72 ಬಿಲಿಯನ್ ಕ್ಯೂಬಿಕ್ ಮೀಟರ್ ನೈಸರ್ಗಿಕ ಅನಿಲದ 50% ವಿದೇಶಗಳಿಂದ ಆಮದಾಗುತ್ತಿದೆ. ಹೀಗಾಗಿ ಇಂಧನದ ಬೆಲೆ ಹೆಚ್ಚಳ ಆಗುತ್ತೆ.
ಇರಾನ್ ಇಸ್ರೇಲ್ ಯುದ್ಧ ಈ ಪ್ರದೇಶದಲ್ಲಿ ಭಾರತದ ಕಾರ್ಯತಂತ್ರದ ಆಯಾಮದ ಸಂಬಂಧಗಳ ಮೇಲೂ ಪರಿಣಾಮ ಬೀರಲಿದೆ. ಇಸ್ರೇಲ್ ಜೊತೆಗಿನ ಭಾರತದ ವ್ಯಾಪಾರ ಇರಾನ್ ಜೊತೆಗಿನ ವ್ಯಾಪಾರದ ಮೂರು ಪಟ್ಟಾಗಿದ್ದು, 2023-24ರಲ್ಲಿ 4.5 ಬಿಲಿಯನ್ ಡಾಲರ್ ಮೌಲ್ಯ ಹೊಂದಿತ್ತು. ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ವ್ಯಾಪಾರ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿತ್ತು. ಮುಖ್ಯವಾಗಿ, ಭಾರತ ಇಸ್ರೇಲಿ ಮಿಲಿಟರಿ ಉಪಕರಣಗಳ ಅತಿದೊಡ್ಡ ಗ್ರಾಹಕನಾಗಿದ್ದು, ರಷ್ಯಾ ನಂತರ ಇಸ್ರೇಲ್ ಭಾರತದ ಎರಡನೇ ಅತಿದೊಡ್ಡ ರಕ್ಷಣಾ ಪೂರೈಕೆದಾರನಾಗಿದೆ. ಇಸ್ರೇಲ್ನಿಂದ ಪ್ರಮುಖ ಆಮದುಗಳಲ್ಲಿ ಕ್ಷಿಪಣಿಗಳು, ಡ್ರೋನ್ಗಳು, ರೇಡಾರ್ಗಳು, ಮತ್ತು ಇಲೆಕ್ಟ್ರಾನಿಕ್ ವಾರ್ಫೇರ್ ಉತ್ಪನ್ನಗಳು ಸೇರಿದ್ದು, ಇಸ್ರೇಲ್ ಸಹಯೋಗದೊಡನೆ ಭಾರತದಲ್ಲಿ ಹಲವಾರು ಜಂಟಿ ರಕ್ಷಣಾ ಉತ್ಪಾದನಾ ಉದ್ಯಮಗಳನ್ನು ಮತ್ತು ರಕ್ಷಣಾ ಸ್ಟಾರ್ಟಪ್ಗಳನ್ನು ಆರಂಭಿಸಲಾಗಿದೆ.
ಡ್ರೈ ಫ್ರೂಟ್ಸ್ ಬೆಲೆ ಕೂಡ ಹೆಚ್ಚಳ
ಇನ್ನು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮಾತ್ರ ಹೆಚ್ಚಳ ಆಗಲ್ಲ. ಡ್ರೈ ಫ್ರೂಟ್ಸ್ ಬೆಲೆ ಕೂಡ ಹೆಚ್ಚಳವಾಗುತ್ತೆ. ಹೌದು ನಮ್ಮ ಮನೆಗಳಲ್ಲಿ ಹಬ್ಬ-ಹರಿದಿನಗಳಲ್ಲಿ, ವಿಶೇಷ ದಿನಗಳಲ್ಲಿ ಬಳಸುವ ಗೋಡಂಬಿ, ಬಾದಾಮಿ, ಪಿಸ್ತಾ, ಒಣ ದ್ರಾಕ್ಷಿ ಮತ್ತು ಅಂಜೂರದಂತಹ ಬಹುತೇಕ ಡ್ರೈ ಫ್ರೂಟ್ಸ್ ಬರುವುದು ಅಫ್ಘಾನಿಸ್ತಾನದಿಂದ. ಈ ಸರಕುಗಳು ಭಾರತಕ್ಕೆ ತಲುಪಲು ಎರಡು ಪ್ರಮುಖ ದಾರಿಗಳಿವೆ. ಒಂದು ಪಾಕಿಸ್ತಾನದ ಮೂಲಕ, ಇನ್ನೊಂದು ಇರಾನ್ ಮೂಲಕ. ಈಗಾಗಲೇ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಕಾರಣದಿಂದ ಪಾಕಿಸ್ತಾನದ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಹಾಗಾಗಿ, ವ್ಯಾಪಾರಿಗಳು ಅನಿವಾರ್ಯವಾಗಿ ಇರಾನ್ ಮಾರ್ಗದ ಮೂಲಕವೇ ಡ್ರೈ ಫ್ರೂಟ್ಸ್ ಅನ್ನು ಭಾರತಕ್ಕೆ ತರಿಸುತ್ತಿದ್ದರು. ಆದರೆ ಈಗ, ಇರಾನ್ ನೇರವಾಗಿ ಯುದ್ಧದಲ್ಲಿ ಭಾಗಿಯಾಗಿರುವುದರಿಂದ ಆ ಮಾರ್ಗವೂ ಅತ್ಯಂತ ಅಪಾಯಕಾರಿಯಾಗಿದೆ. ಯುದ್ಧದ ಕಾರಣದಿಂದ ಸಮುದ್ರದಲ್ಲಿ ಹಡಗುಗಳ ಓಡಾಟಕ್ಕೆ ಅಡ್ಡಿಯಾಗಬಹುದು, ಇರಾನ್ನ ಬಂದರುಗಳು ಮುಚ್ಚಬಹುದು ಅಥವಾ ಸರಕು ಸಾಗಣೆಯ ಮೇಲೆ ನಿರ್ಬಂಧ ಹೇರಬಹುದು. ಹೀಗಾದಾಗ, ಅಫ್ಘಾನಿಸ್ತಾನದಿಂದ ಬರುವ ಡ್ರೈ ಫ್ರೂಟ್ಸ್ಗಳ ಪೂರೈಕೆ ಸಂಪೂರ್ಣವಾಗಿ ನಿಂತುಹೋಗುವ ಅಪಾಯವಿದೆ.
ಈಗಲೇ ಶೇ. 15 ರಿಂದ ಶೇ. 100ರಷ್ಟು ದುಬಾರಿ
ಈಗಾಗಲೇ ಮಾರುಕಟ್ಟೆಯಲ್ಲಿ ಡ್ರೈ ಫ್ರೂಟ್ಸ್ ಬೆಲೆ ಗಗನಕ್ಕೇರಿದೆ. ಪಾಕಿಸ್ತಾನ ಮಾರ್ಗ ಬಂದ್ ಆದ ಕಾರಣ, ಕೆಲವು ಕಡೆ ಶೇ. 15 ರಿಂದ ಶೇ. 100ರಷ್ಟು ದುಬಾರಿಯಾಗಿದೆ. ಒಂದು ವೇಳೆ ಇರಾನ್ ಮಾರ್ಗವೂ ಬಂದ್ ಆದರೆ, ಬೆಲೆಗಳು ಬೆಂಕಿಯಂತಾಗಲಿವೆ. ಆರೋಗ್ಯಕ್ಕಾಗಿ ತಿನ್ನುವ ಬಾದಾಮಿ, ಪಿಸ್ತಾಗಳು ಸಾಮಾನ್ಯರ ಕೈಗೆಟುಕದ ವಸ್ತುವಾಗಬಹುದು. ಭಾರತ ಸರ್ಕಾರವು ಎರಡೂ ದೇಶಗಳ ಜೊತೆ ಮಾತುಕತೆ ನಡೆಸಿ ಶಾಂತಿಗಾಗಿ ಮನವಿ ಮಾಡುತ್ತಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಆದರೆ ವ್ಯಾಪಾರಿಗಳು ಆತಂಕದಲ್ಲಿದ್ದಾರೆ. ಇರಾನ್ ಮಾರ್ಗದ ಮೂಲಕ ಬರುವ ಸರಕುಗಳಿಗೆ ತೆರಿಗೆ ಎಷ್ಟು ಬೀಳುತ್ತದೆ, ಸರಕು ಸುರಕ್ಷಿತವಾಗಿ ಬರುತ್ತದೆಯೇ ಎಂಬ ಗೊಂದಲದಲ್ಲಿದ್ದಾರೆ.
ಭಾರತ ವಲಸೆ ಕಾರ್ಮಿಕರ ಮೇಲೆ ಯುದ್ಧದ ಎಫೆಕ್ಟ್ ?
ಪ್ರಸ್ತುತ 9 ಮಿಲಿಯನ್ ಭಾರತೀಯ ಅರೆ ಕುಶಲ ಮತ್ತು ಕೌಶಲ್ಯ ರಹಿತ ಕಾರ್ಮಿಕರು ಈ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರು ನಿರ್ಮಾಣ ಕಾಮಗಾರಿ, ಮನೆ ಕೆಲಸ, ಮತ್ತು ನಿರ್ವಹಣಾ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇರಳದ 35 ಮಿಲಿಯನ್ ಜನಸಂಖ್ಯೆಯಲ್ಲಿ ಅಂದಾಜು 10% ಈಗಾಗಲೇ ಮಧ್ಯ ಪೂರ್ವದಲ್ಲಿ ಉದ್ಯೋಗ ನಡೆಸುತ್ತಿದ್ದಾರೆ. ಅವರು ಮನೆಗೆ ಕಳುಹಿಸುವ ವಿದೇಶೀ ಹಣ ರವಾನೆ ಕೇರಳದ ಆದಾಯದಲ್ಲಿ 20% ಪಾಲು ಹೊಂದಿದೆ. ಇದು ಲಕ್ಷಾಂತರ ಕುಟುಂಬಗಳಿಗೆ ಬೆಂಬಲ ನೀಡಲು, ಶಿಕ್ಷಣ, ಆರೋಗ್ಯ, ಮತ್ತು ಇತರ ವೆಚ್ಚಗಳನ್ನು ನಿರ್ವಹಿಸಲು ಅನುಕೂಲಕರವಾಗಿದೆ. ಆದ್ರೆ ಯುದ್ಧ ಅವರೆಲ್ಲಾ ವಾಪಾಸ್ ಆದ್ರೆ ಮತ್ತೆ ಇಲ್ಲಿನ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಇದ್ರಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡ್ರೆ. ಇಲ್ಲಿ ಆ ಹಣದಿಂದ ಜೀವನ ನಡೆಸುತ್ತಿದ್ದ ಕುಟುಂಬಗಳು ಬೀದಿಗೆ ಬೀಳಲಿವೆ. ಒಟ್ನಲ್ಲಿ ಈ ಯುದ್ಧ ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ. ಆದರೆ ಅದು ನಿಲ್ಲುವವರೆಗೂ, ಆ ಯುದ್ಧದ ಎಫೆಕ್ಟ್ ನಮ್ಮ ಮೇಲೂ ಆಗುತ್ತೆ. ಡ್ರೈ ಫ್ರೂಟ್ಸ್, ಪೆಟ್ರೋಲ್, ಡೀಸೆಲ್, ವಲಸೆ ಕಾರ್ಮಿಕರ ಮೇಲೆ ಇದ್ರ ಎಫೆಕ್ಟ್ ಬೀಳಲಿದ್ದು, ನಮ್ಮ ಜೇಬು ಸುಡೋದು ಪಕ್ಕಾ.