ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸತತ ಸೋಲು – ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಸತತ ಸೋಲು –  ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

ಐಸಿಸಿ  ಮಹಿಳಾ ವಿಶ್ವಕಪ್‌ನ  ಆರಂಭಿಕ ಎರಡು ಪಂದ್ಯಗಳ ಬಳಿಕ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಸೋಲುಗಳ ನಂತ್ರ   ಭಾರತೀಯ ಮಹಿಳಾ ಕ್ರಿಕೆಟ್ ಟೀಂ ದೇವರ ಮೊರೆ ಹೋಗಿದೆ.  ತಂಡವು ಅಕ್ಟೋಬರ್ 15, 2025 ರಂದು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯಿತು. ಆಟಗಾರ್ತಿಯರು ಬೆಳಗಿನ ಜಾವ ಭಸ್ಮ ಆರತಿಯಲ್ಲಿ ಭಾಗವಹಿಸಿ ನಂದಿ ಸಭಾಂಗಣದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ವೈಜಾಗ್‌ನಲ್ಲಿ ಎದುರಾದ ಸತತ ಮೂರು ವಿಕೆಟ್‌ಗಳ ಸೋಲು ಭಾರತದ ವಿಶ್ವಕಪ್ ಅಭಿಯಾನವನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಆತಿಥೇಯ ತಂಡವು ನಾಲ್ಕು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಗಳಿಸಿ 0.682 ರ ನಿವ್ವಳ ರನ್ ರೇಟ್‌ನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ, ಇನ್ನೂ ಮೂರು ಲೀಗ್ ಹಂತದ ಪಂದ್ಯಗಳು ಬಾಕಿ ಉಳಿದಿವೆ. ಸೆಮಿಫೈನಲ್ ಭರವಸೆಯನ್ನು ಜೀವಂತವಾಗಿಡಬೇಕಾದರೆ ತಂಡಕ್ಕೆ ಉಳಿದ ಪಂದ್ಯಗಳು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಭಾರತ ಮುಂದಿನ ಮೂರು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌ ಮತ್ತು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಭಾರತ ಸೆಮಿಫೈನಲ್ ತಲುಪಬೇಕಿದ್ದರೆ, ಉಳಿದ ಮೂರು ಪಂದ್ಯಗಳನ್ನು ಗೆದ್ದರೆ 10 ಅಂಕಗಳೊಂದಿಗೆ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುತ್ತಾರೆ. ಮೂರರಲ್ಲಿ ಎರಡರಲ್ಲಿ ಗೆದ್ದರೆ, ಆಗ ನಿವ್ವಳ ರನ್ ರೇಟ್‌ ಅವಲಂಬಿಸಿ ಮುನ್ನಡೆ ಸಾಧಿಸಬೇಕು. ಒಂದೊಮ್ಮೆ ಎರಡರಲ್ಲಿ ಸೋತರೆ ಅವರ ಸೆಮಿಫೈನಲ್ ಆಸೆ ಕೊನೆಗೊಳ್ಳುವ ಸಾಧ್ಯತೆಯಿದೆ. ಭಾರತ ತಂಡವು ಮುಂದಿನ ಭಾನುವಾರ ಇಂದೋರ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ, ನಂತರ ನ್ಯೂಜಿಲೆಂಡ್  ಮತ್ತು ಬಾಂಗ್ಲಾದೇಶ ವಿರುದ್ಧ ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಡಲಿದೆ.

Kishor KV