ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ

ಗ್ರೇಟ್ ಚೇಸರ್ ರಿಂಕು ಸಿಂಗ್..!- ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಭಾರತ

ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ಗೆದ್ದು ಬೀಗಿದೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಕಾಂಗರೂಗಳನ್ನು ಮಣಿಸಿರುವ ಭಾರತ, ಏಕದಿನ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ನಾಯಕ ಸೂರ್ಯಕುಮಾರ್ ಯಾದವ್  ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ಸ್ಫೋಟಕ ಅರ್ಧಶತಕ, ರಿಂಕು ಸಿಂಗ್ ಸೂಪರ್ ಚೇಸಿಂಗ್ ಟೀಮ್ ಇಂಡಿಯಾ ಗೆಲುವಿಗೆ ಕಾರಣವಾಗಿದೆ.

ಇದನ್ನೂ ಓದಿ: ಟೀಂ ಇಂಡಿಯಾದ ಹೊಸ ಕೋಚ್ ಯಾರು? – ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರೀತಾರಾ?

ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಜೋಸ್ ಇಂಗ್ಲಿಸ್ ಅವರ ಸ್ಫೋಟಕ ಶತಕದ ಆಧಾರದ ಮೇಲೆ 209 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಭಾರತ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ನಾಯಕ ಸೂರ್ಯಕುಮಾರ್ ಯಾದವ್-ಇಶಾನ್ ಕಿಶನ್ ಬೊಂಬಾಟ್ ಅರ್ಧಶತಕ ಒಂದು ಕಡೆಯಾದರೆ ರಿಂಕು ಸಿಂಗ್ ಫಿನಿಶಿಂಗ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಜೋಶ್ ಇಂಗ್ಲಿಸ್ 110 ರನ್ ಬಾರಿಸಿದರು. ಗುರಿ ಬೆನ್ನಟ್ಟಿದ ಭಾರತ ಸೂರ್ಯಕುಮಾರ್ ಅವರ 80, ಕಿಶನ್ ಅವರ 58 ಹಾಗೂ ರಿಂಕು ಸಿಂಗ್ ಅವರ ಅಜೇಯ 22 ರನ್‌ಗಳ ನೆರವಿನಿಂದ 19.5 ಓವರ್‌ಗಳಲ್ಲಿ ಗೆದ್ದು ಬೀಗಿತು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ತಂಡದ ಆಟವನ್ನು ಕೊಂಡಾಡಿದರು. ನಮ್ಮ ಆಟಗಾರರು ಆಡಿದ ರೀತಿ ನನಗೆ ತುಂಬಾ ಸಂತೋಷವಾಗಿದೆ. ನಾವು ಒತ್ತಡಕ್ಕೆ ಒಳಗಾಗಿದ್ದೆವು, ಇದರ ನಡುಗೆ ಎಲ್ಲರೂ ಆಡಿದ ಶೈಲಿ ಅದ್ಭುತವಾಗಿದೆ. ಇದು ಹೆಮ್ಮೆಯ ಕ್ಷಣ, ತುಂಬಾ ಹೆಮ್ಮೆಯ ಕ್ಷಣ, ನೀವು ಪ್ರತಿ ಬಾರಿ ಆಡುವಾಗ ಭಾರತವನ್ನು ಪ್ರತಿನಿಧಿಸುವ ಬಗ್ಗೆ ಯೋಚಿಸುತ್ತೀರಿ, ಆದರೆ ಇಲ್ಲಿಗೆ ಬಂದು ಭಾರತದ ನಾಯಕತ್ವ ವಹಿಸುವುದು ದೊಡ್ಡ ಕ್ಷಣವಾಗಿದೆ ಎಂದು ಸೂರ್ಯಕುಮಾರ್ ಹೇಳಿದ್ದಾರೆ. ಸ್ವಲ್ಪ ಇಬ್ಬನಿ ಇರುತ್ತದೆ ಎಂದು ಭಾವಿಸಿದ್ದೆವು, ಆದರೆ ಹಾಗೆ ಆಗಲಿಲ್ಲ. ಇದು ದೊಡ್ಡ ಮೈದಾನವಲ್ಲ ಹೀಗಾಗಿ ಬ್ಯಾಟಿಂಗ್ ಸುಲಭವಾಗುತ್ತದೆ ಎಂದು ನನಗೆ ತಿಳಿದಿತ್ತು. ಆಸ್ಟ್ರೇಲಿಯಾ 230-235 ರನ್ ಹೊಡೆಯಬಹುದು ಎಂದು ಅಂದುಕೊಂಡಿದ್ದೆವು. ಆದರೆ ನಮ್ಮ ಬೌಲರ್‌ಗಳು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿದರು ಎಂದು ಸೂರ್ಯಕುಮಾರ್ ಹೇಳಿದರು. ಐಪಿಎಲ್ ಅಥವಾ ಇತರೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ನಾವು ಅನೇಕ ಬಾರಿ ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ಇಶಾನ್ ಕಿಶನ್ ಎಂಜಾಯ್ ಮಾಡಿಕೊಂಡು ಆಡುತ್ತಾನೆ. ನಾನು ನಾಯಕತ್ವದ ಹೊರೆಯನ್ನು ಡ್ರೆಸ್ಸಿಂಗ್ ರೂಮಿನಲ್ಲಿ ಬಿಟ್ಟು ಬ್ಯಾಟಿಂಗ್ಗೆ ಬಂದಿದ್ದೆ. ನಾನು ನನ್ನ ಶೈಲಿಯ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇನೆ ಎಂಬುದು ಸೂರ್ಯಕುಮಾರ್ ಯಾದವ್ ಮಾತು. ಇಂದಿನ ವಾತಾವರಣವು ಅದ್ಭುತವಾಗಿತ್ತು, ಎಲ್ಲ ಪ್ರೇಕ್ಷಕರಿಗೆ ಧನ್ಯವಾದಗಳು. ರಿಂಕು ಸಿಂಗ್ ಆಟ ನೋಡಲು ತುಂಬಾ ಚೆನ್ನಾಗಿತ್ತು, ಆ ಪರಿಸ್ಥಿತಿ ಅವನಿಗೆ ಹೇಳಿ ಮಾಡಿಸಿದಂತಿತ್ತು. ರಿಂಕು ಶಾಂತ ಸ್ವಭಾವದ ವ್ಯಕ್ತಿ. ಮುಂದಿನ ಪಂದ್ಯಕ್ಕಾಗಿ ಎದುರು ನೋಡುತ್ತೇವೆ ಎಂದು ಪೋಸ್ಟ್ ಮ್ಯಾಚ್‌ನಲ್ಲಿ ಕ್ಯಾಪ್ಟನ್ ಸೂರ್ಯ ಹೇಳಿದ್ದಾರೆ.

Sulekha