ಪ್ರೀತಿಸಿ ಕೈ ಕೊಟ್ಟ ಲವರ್ – ಶಿವಮೊಗ್ಗ KSRTC ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿದ ಯುವಕ

ಪ್ರೀತಿಸಿದ ಯುವತಿ ಹಾಗೂ ಆಕೆಯ ಕುಟುಂಬದವರಿಂದ ಹಲ್ಲೆ ಮತ್ತು ಅವಮಾನಕ್ಕೊಳಗಾಗಿದ್ದ ಯುವಕ ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ವಿಷ ಸೇವಿಸಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಶಿಕಾರಿಪುರ ತಾಲೂಕಿನ ಶಬರೀಶ್ (28) ಮೃತ ದುರ್ದೈವಿ. ಯುವಕನ ಸಾವಿಗೆ ಪ್ರಚೋದನೆ ನೀಡಿದ ಆರೋಪದಡಿ ಐವರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಜೋಕಾಲಿಯಲ್ಲಿ ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಕುಣಿಕೆ ಬಿಗಿದು 9 ವರ್ಷದ ಬಾಲಕಿ ಸಾ*ವು!
ಶಬರೀಶ್ ತೀರ್ಥಹಳ್ಳಿಯಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅವರ ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧವಿತ್ತು ಎಂದು ಆರೋಪಿಸಲಾಗಿದೆ. ಏಪ್ರಿಲ್ 21 ರಂದು ಯುವತಿ ಕರೆ ಮಾಡಿ ಮಾತನಾಡಬೇಕು ಎಂದು ಶಿವಮೊಗ್ಗದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕರೆಸಿಕೊಂಡಿದ್ದಳು. ಅಲ್ಲಿಗೆ ಬಂದಿದ್ದ ಯುವತಿ ಮತ್ತು ಆಕೆಯ ಸಂಬಂಧಿ ಶಬರೀಶ್ ಮೇಲೆ ಹಲ್ಲೆ ನಡೆಸಿ, ಮದುವೆಗೆ ನಿರಾಕರಿಸಿದ್ದಾರೆ. ಅಲ್ಲದೆ ಆತನ ಮೊಬೈಲ್ನಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ ಮನನೊಂದ ಶಬರೀಶ್ ಬಸ್ ನಿಲ್ದಾಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ಅಲ್ಲಿದ್ದವರು ತಕ್ಷಣ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಏಪ್ರಿಲ್ 22ರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಶಬರೀಶ್ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

