ಚಳಿಗೆ ನಡುಗಿದ ರಾಷ್ಟ್ರ ರಾಜಧಾನಿ – ಹೃದಯಾಘಾತ, ರಕ್ತದೊತ್ತಡ ಸಮಸ್ಯೆ ಹೆಚ್ಚಳ
![ಚಳಿಗೆ ನಡುಗಿದ ರಾಷ್ಟ್ರ ರಾಜಧಾನಿ – ಹೃದಯಾಘಾತ, ರಕ್ತದೊತ್ತಡ ಸಮಸ್ಯೆ ಹೆಚ್ಚಳ](https://suddiyaana.com/wp-content/uploads/2023/01/6-cold-wave.jpg)
ನವದೆಹಲಿ: ಇಂದಿನಿಂದ ಜನವರಿ 20 ರವರೆಗೆ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ತೀವ್ರ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಇನ್ನೂ ಆರು ದಿನಗಳಲ್ಲಿ ತೀವ್ರ ಚಳಿ ಇರಲಿದ್ದು, ಎನ್ ಸಿ ಆರ್ ಮತ್ತು ರಾಜಸ್ಥಾನದಲ್ಲಿ ಶೂನ್ಯ ಡಿಗ್ರಿ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: “ರಾಜ್ಯಪಾಲರನ್ನು ಗುಂಡಿಕ್ಕಿ ಕೊಲ್ಲಲು ಉಗ್ರನನ್ನು ಕಳುಹಿಸುತ್ತೇವೆ” –ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ
ದೆಹಲಿಯಲ್ಲಿ ಚಳಿ ವಿಪರೀತವಾಗಿದ್ದು, ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ದೆಹಲಿಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ತುರ್ತು ವಿಭಾಗಗಳಲ್ಲಿ ಮುಂಜಾನೆ ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ದೆಹಲಿಯ ಲೋಕನಾಯಕ್ ಜೈ ಪ್ರಕಾಶ್ (ಎಲ್ಎನ್ಜೆಪಿ) ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಅವರ ಪ್ರಕಾರ, ಶೀತ ಅಲೆಗಳ ಕಾರಣದಿಂದಾಗಿ ಸುಮಾರು ಶೇ. 10ರಿಂದ 15ರಷ್ಟು ಹೆಚ್ಚು ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೀತ ಗಾಳಿಯಿಂದ 50ರಿಂದ 70 ವರ್ಷದವರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಪಾರ್ಶ್ವವಾಯು ರೋಗಿಗಳಲ್ಲಿ 9%ರಷ್ಟು ಏರಿಕೆ ಕಂಡುಬಂದಿದೆ. ಪಾರ್ಶ್ವವಾಯುಗೆ ಒಳಗಾದ ಸುಮಾರು 25% ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ನಿದ್ರೆಯ ಕೊರತೆ, ಕಳಪೆ ಗುಣಮಟ್ಟದ ಆಹಾರ ಮತ್ತು ಅತಿಯಾದ ಮಾನಸಿಕ ಒತ್ತಡದಂತಹ ಜೀವನಶೈಲಿಯಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಡಾ. ಸುರೇಶ್ ಕುಮಾರ್ ಹೇಳಿದ್ದಾರೆ.