ಮೋದಿಗೆ ನಿಮ್ಮ ಮತಗಳಿಗಾಗಿ ಕುಣಿಯಲು ಹೇಳಿದರೆ, ಅವರು ವೇದಿಕೆ ಮೇಲೆ ಕುಣಿಯುತ್ತಾರೆ – ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಪ್ರಚಾರದ ವೇಳೆ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಮೋದಿ ಅವರು ಚುನಾವಣೆ ಗೆಲ್ಲಲು ಏನನ್ನ ಬೇಕಾದರೂ ಮಾಡುತ್ತಾರೆ ಎಂದು ಆರೋಪಿಸಿದರು.
ಮುಜಾಫರ್ಪುರದಲ್ಲಿ ನಡೆದ ಜಂಟಿ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ನೀವು ನರೇಂದ್ರ ಮೋದಿಯವರನ್ನು ನಿಮ್ಮ ಮತಗಳಿಗಾಗಿ ಕುಣಿಯಲು ಹೇಳಿದರೆ, ಅವರು ವೇದಿಕೆ ಮೇಲೆ ಕುಣಿಯುತ್ತಾರೆ” ಎಂದು ಲೇವಡಿ ಮಾಡಿದರು. ಈ ರ್ಯಾಲಿಯಲ್ಲಿ ಆರ್.ಜೆ.ಡಿ. ನಾಯಕ ಮತ್ತು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಕೂಡ ಉಪಸ್ಥಿತರಿದ್ದರು.
ಇದನ್ನೂ ಓದಿ: ಅತಿ ವೇಗದ ದ್ವಿಶತಕ ಬಾರಿಸಿದರೂ ಪಂದ್ಯ ಶ್ರೇಷ್ಠ ಕೊಡಲಿಲ್ಲ – ಪೃಥ್ವಿ ಶಾ ಡಬಲ್ ಸೆಂಚುರಿಗೆ ಬೆಲೆ ಇಲ್ವಾ?
ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇರುವಾಗ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಯಾವುದೇ ಹಿಂಜರಿಕೆ ಇಲ್ಲದೆ ವಾಗ್ದಾಳಿ ನಡೆಸಿದರು. ಬಿಹಾರದ ಅತಿ ದೊಡ್ಡ ಹಬ್ಬವಾದ ಛತ್ ಪೂಜೆಯನ್ನು ಉಲ್ಲೇಖಿಸಿ, ದೆಹಲಿಯಲ್ಲಿ ಮಾಲಿನ್ಯಗೊಂಡ ಯಮುನಾ ನದಿಯಲ್ಲಿ ಭಕ್ತರು ಪೂಜೆ ಮಾಡುತ್ತಿದ್ದಾಗ, ಪ್ರಧಾನಿ ಅವರು ವಿಶೇಷವಾಗಿ ನಿರ್ಮಿಸಿದ ಕೊಳದಲ್ಲಿ ಸ್ನಾನ ಮಾಡಿದರು ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದರು. “ನರೇಂದ್ರ ಮೋದಿ ತಮ್ಮ ಈಜುಕೊಳದಲ್ಲಿ ಸ್ನಾನ ಮಾಡಲು ಹೋದರು. ಯಮುನಾ ನದಿಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಛತ್ ಪೂಜೆಯೊಂದಿಗೆ ಅವರಿಗೆ ಯಾವುದೇ ಸಂಬಂಧವಿಲ್ಲ. ಅವರಿಗೆ ಬೇಕಾಗಿರುವುದು ನಿಮ್ಮ ಮತ ಮಾತ್ರ ” ಎಂದು ಗಾಂಧಿ ಹೇಳಿದರು.
ಕಳೆದ 20 ವರ್ಷಗಳಿಂದ ಬಿಹಾರದ ಅಧಿಕಾರದಲ್ಲಿದ್ದರೂ ಹಿಂದುಳಿದ ವರ್ಗಗಳಿಗಾಗಿ ಏನನ್ನೂ ಮಾಡಿಲ್ಲ ಎಂದು ನಿತೀಶ್ ಕುಮಾರ್ ಅವರನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ರಾಜ್ಯವನ್ನು ನಿಯಂತ್ರಿಸಲು ಬಿಜೆಪಿ ಜೆ.ಡಿ.ಯು. ನಾಯಕನ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ನೋಡಿರಿ

