ಪ್ರೀತಿಸಿ ಮದುವೆಯಾದ ಹೆಂಡತಿಯಿದ್ದರೂ ಗಂಡನಿಗೆ ಪರಸ್ತ್ರೀ ಸಂಬಂಧ – ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹೆಂಡತಿಗೆ ಸೈನೈಡ್ ತಿನ್ನಿಸಿ ಹತ್ಯೆ

ಪ್ರೀತಿಸಿ ಮದುವೆಯಾದ ಹೆಂಡತಿಯಿದ್ದರೂ ಗಂಡನಿಗೆ ಪರಸ್ತ್ರೀ ಸಂಬಂಧ – ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಹೆಂಡತಿಗೆ ಸೈನೈಡ್ ತಿನ್ನಿಸಿ ಹತ್ಯೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿತ್ತು. ಮಗಳು ಸತ್ತಿದ್ದಾಳೆ ಎಂದು ಅಳಿಯ ಫೋನ್ ಮಾಡಿ ತಿಳಿಸಿದಾಗಲೇ ಹೆತ್ತವರಿಗೆ ಇದೊಂದು ಕೊಲೆ ಎಂದು ಮನದಟ್ಟಾಗಿತ್ತು. ಅದಕ್ಕೆ ಸರಿಯಾಗಿ ಹೆತ್ತವರು ಬರುವ ಮೊದಲೇ ತರಾತುರಿಯಲ್ಲಿ ಪಾಪಿ ಪತಿ ಅಂತ್ಯಕ್ರಿಯೆಗೂ ಸಿದ್ಧತೆ ನಡೆಸಿದ್ದ. ಮಗಳು ಹೋದಳೆಂದು ದುಃಖಿಸುತ್ತಾ ಇದ್ದರೆ ಮಗಳ ಸಾವಿಗೆ ನ್ಯಾಯ ಸಿಗುವುದಿಲ್ಲ ಎಂದ ದಿಟ್ಟತನ ತೋರಿದ್ದರು ಹೆತ್ತವರು. ಹೀಗಾಗಿ ಮಗಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕು ಎಂದು ಪಟ್ಟು ಹಿಡಿದಿದ್ದರು. ಕೊನೆಗೂ ಅವರ ಸಂದೇಹವೇ ನಿಜವಾಗಿದೆ. ಮಗಳನ್ನು ಅಳಿಯನೇ ಕೊಂದಿದ್ದಾನೆ.

ಇದನ್ನೂ ಓದಿ: ಪತಿಯ ಪರಸಂಗಕ್ಕೆ ಅಡ್ಡಿಯಾದ ಪತ್ನಿ – ಪ್ರೇಯಸಿಗಾಗಿ ಹೆಂಡತಿಯನ್ನು ಕೊಂದೇ ಬಿಟ್ಟ ಪಾಪಿ ಗಂಡ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಗೃಹಿಣಿ ಶ್ವೇತಾ ಸಾವು ಕೊಲೆ ಅನ್ನೋದನ್ನು ಪಾಪಿ ಪತಿಯೇ ಬಾಯ್ಬಿಟ್ಟಿದ್ದಾನೆ. ಪೊಲೀಸರ ಮುಂದೆ ಹತ್ಯೆಯ ರಹಸ್ಯವನ್ನು ಪತಿ ಬಿಚ್ಚಿಟ್ಟಿದ್ದು, ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ತಾನೇ ಪತ್ನಿಗೆ ರಾಗಿ ಮುದ್ದೆಗೆ ಸೈನೈಡ್ ಬೆರೆಸಿ ನೀಡಿದ್ದು, ಅದನ್ನು ಸೇವಿಸಿ ಪತ್ನಿ ಸಾವನ್ನಪ್ಪಿದ್ದಾಗಿ ಹಂತಕ ಪತಿ ಬಾಯ್ಬಿಟ್ಟಿದ್ದಾನೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾಳೆ ಎಂದು ಈ ರೀತಿ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ. ಹತ್ಯೆಯ ಹಿಂದಿನ ದಿನ ರಾತ್ರಿ ದರ್ಶನ್ ರಾಗಿ ಮುದ್ದೆಗೆ ಸೈನೈಡ್ ಬೆರೆಸಿ ಪತ್ನಿಗೆ ನೀಡಿದ್ದ. ಶ್ವೇತಾ ಸಾವನ್ನಪ್ಪಿದ್ದ ಬಳಿಕ ಕೈಗೆ ಸಿರಿಂಜ್ ಚುಚ್ಚಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ಲ್ಯಾನ್ ಮಾಡಿದ್ದ. ಆದರೆ ಪ್ಲ್ಯಾನ್ ಉಲ್ಟಾ ಆಗುವ ಆತಂಕದಲ್ಲಿ ಪತ್ನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಹೇಳಿ ನಾಟಕವಾಡಿದ್ದಾನೆ. ಶ್ವೇತಾ ಸಂಬಂಧಿಕರು ಬರುವ ಮೊದಲೇ ಅಂತ್ಯಕ್ರಿಯೆಗೆ ಸಿದ್ಧತೆಯೂ ಮಾಡಿದ್ದ. ತಾವು ಬರುವುದಕ್ಕೂ ಮುನ್ನ ಮಗಳ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರಿಂದ ಅನುಮಾನಗೊಂಡ ಶ್ವೇತಾ ಕುಟುಂಬಸ್ಥರು ದರ್ಶನ್ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಿದ್ದರು. ನಂತರ ಶ್ವೇತಾ ಮರಣೋತ್ತರ ಪರೀಕ್ಷೆ ನಡೆಸಿ, ಪ್ರಾಥಮಿಕ ವರದಿಯಲ್ಲಿ ಆಕೆಗೆ ಹೃದಯಾಘಾತ ಆಗಿಲ್ಲ ಎಂಬುದು ಬಹಿರಂಗವಾಗಿದೆ. ವರದಿ ಬಂದ ಬಳಿಕ ದರ್ಶನ್ನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ರಾಗಿ ಮುದ್ದೆಯಲ್ಲಿ ಸೈನೆಡ್ ಬೆರೆಸಿರುವುದಾಗಿ ಸತ್ಯ ಒಪ್ಪಿಕೊಂಡಿದ್ದಾನೆ.

ದರ್ಶನ್ ಬೆಂಗಳೂರಿನ ಕೊಡಿಗೆಹಳ್ಳಿ ಬಳಿ ಟ್ರೂ ಮೆಡಿಕ್ಸ್ ಲ್ಯಾಬ್ ನಡೆಸುತ್ತಿದ್ದ. ಕಾಲೇಜು ದಿನಗಳಿಂದಲೂ ದರ್ಶನ್ ಮತ್ತು ಶ್ವೇತಾ ಪ್ರೀತಿಸುತ್ತಿದ್ದರು. 3 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆಯಲ್ಲಿದ್ದರೂ ದರ್ಶನ್ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ. ಕೆಲ ತಿಂಗಳಿಂದ ಟ್ರೂ ಮೆಡಿಕ್ಸ್ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಜೊತೆ ದರ್ಶನ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ತಿಳಿದ ಶ್ವೇತಾ ತನ್ನ ಗಂಡನ ಜೊತೆ ಸಂಬಂಧ ಬಿಡುವಂತೆ ಆಕೆಗೆ ಕಾಲ್ ಮಾಡಿ ಎಚ್ಚರಿಕೆ ನೀಡಿದ್ದಳು. ಪ್ರೇಯಸಿಗೆ ಪತ್ನಿ ಎಚ್ಚರಿಕೆ ನೀಡಿರುವುದು ತಿಳಿಯುತ್ತಿದ್ದಂತೆ ದರ್ಶನ್ ಆಕೆಯ ಹತ್ಯೆಗೆ ಪ್ಲ್ಯಾನ್ ಮಾಡಿದ್ದ. ಆಕೆಯನ್ನು ಬೆಂಗಳೂರಿನಿಂದ ದೇವವೃಂದ ಗ್ರಾಮಕ್ಕೆ ಕರೆತಂದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Sulekha