ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ- ವಿಜಯಪುರದಲ್ಲಿ ಸಾಲು ಸಾಲು ದುರಂತ!

ವಿಜಯಪುರ ಜಿಲ್ಲೆಯಲ್ಲಿ ಮನೆ ಕುಸಿದು ಕುಟುಂಬವೊಂದು ಜೀವಂತ ಸಮಾಧಿಯಾದ ಸುದ್ದಿ ಮಾಸುವ ಮುನ್ನವೇ ಮತ್ತೊಂದು ಅವಘಡ ಸಂಭವಿಸಿದೆ. ನಿಡಗುಂದಿ ಪಟ್ಟಣದಲ್ಲಿ ಮನೆಯ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ನಿಡಗುಂದಿ ಪಟ್ಟಣದ ಗೌರೀಶ್ವರ ದೇವಸ್ಥಾನ ಬಳಿ ಇಂದು ನಸುಕಿನಜಾವ ಈ ದುರ್ಘಟನೆ ನಡೆದಿದೆ. ಮಹಾದೇವಿ ವಾರದ (55) ಮೃತ ಮಹಿಳೆ. ಇವರ ಪತಿ ಮನೆಯ ಹೊರಗೆ ಮಲಗಿದ್ದರಿಂದ ಜೀವಾಪಾಯದಿಂದ ಪಾರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ಹಳೆಯ ಮನೆಯ ಮಹಡಿ ನೆನೆದಿತ್ತು. ಮನೆಯಲ್ಲಿ ಮಹಾದೇವಿ ಅವರು ಮಲಗಿದ್ದ ವೇಳೆ ಇಂದು ನಸುಕಿನಜಾವ ಏಕಾಏಕಿ ಮನೆ ಮೇಲ್ಛಾವಣಿ ಕುಸಿದಿದೆ. ಪರಿಣಾಮ ಮಹಿಳೆ ಜೀವಂತ ಸಮಾಧಿಯಾಗಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಶಿವಾನಂದ ಅವರು ಮನೆಯ ಹೊರಗಡೆ ಮಲಗಿದ್ದರಿಂದ ಬದುಕುಳಿದಿದ್ದಾರೆ.
ಇದನ್ನೂ ಓದಿ: ಸಿನಿಮಾ, ಧಾರವಾಹಿಗಳ ಸಂಭಾಷಣೆಕಾರ ನಂದೀಶ್ ಹೃದಯಾಘಾತದಿಂದ ನಿಧನ – ಕಂಬನಿ ಮಿಡಿದ ಚಿತ್ರರಂಗ
ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾದೇವಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನೂ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮೋರಟಗಿಯಲ್ಲಿ ಅಕಾಲಿಕ ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬ ನಾಲ್ವರು ಸಾವನ್ನಪ್ಪಿದ ಘಟನೆ ಕಳೆದ ಶುಕ್ರವಾರವಷ್ಟೇ ಸಂಭವಿಸಿತ್ತು.ಗ್ರಾಮದ ಗುರುನಾಥ ಬಡಿಗೇರ್ (35), ಜ್ಯೋತಿ ಬಡಿಗೇರ (28), ಕಾಳಮ್ಮ ಬಡಿಗೇರ (13), ಕೀರ್ತಿ ಬಡಿಗೇರ (9) ಮೃತಪಟ್ಟಿದ್ದರು. ಇಂದು ಮತ್ತೊಂದು ಅವಘಡ ನಡೆದಿದ್ದು, ಜಿಲ್ಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಆಗಿದೆ.

ನೋಡಿರಿ

