ಭೀಮನ ಅಮಾವಾಸ್ಯೆಗೆ ಗಂಡನಿಗೆ ದೀರ್ಘಾಯಸ್ಸು ಕೋರಲು ದೇವಸ್ಥಾನಕ್ಕೆ ಬಂದ ಪತ್ನಿ – ಹೆಂಡತಿ ಕಣ್ಣೆದುರೇ ಗಂಡನ ಭೀಕರ ಹತ್ಯೆ..!

ಭೀಮನ ಅಮಾವಾಸ್ಯೆಗೆ ಗಂಡನಿಗೆ ದೀರ್ಘಾಯಸ್ಸು ಕೋರಲು ದೇವಸ್ಥಾನಕ್ಕೆ ಬಂದ ಪತ್ನಿ – ಹೆಂಡತಿ ಕಣ್ಣೆದುರೇ ಗಂಡನ ಭೀಕರ ಹತ್ಯೆ..!

ಮದುವೆಯಾಗಿ ಕೇವಲ 5 ತಿಂಗಳು. ಸಂಸಾರದ ಬಂಡಿ ಸುಖವಾಗಿಯೇ ಸಾಗುತ್ತಿತ್ತು. ಹೀಗಿರುವಾಗಲೇ ಸೋಮವಾರ ಭೀಮನ ಅಮಾವಾಸ್ಯೆಯ ಸಂಭ್ರಮ ಬೇರೆ. ಗಂಡನಿಗೆ ಪೂಜೆ ಮಾಡಿ, ಸುಮಂಗಲಿಯಾಗುವ ಆಶೀರ್ವಾದ ಪಡೆಯುವ ಹಂಬಲ. ಜೊತೆಗೆ ಗಂಡನ ದೀರ್ಘಾಯುಷ್ಯಕ್ಕಾಗಿ ಪೂಜೆ ಮಾಡಿ ದೇವರನ್ನು ಕೋರಿಕೊಳ್ಳುವ ಸಂಭ್ರಮ.  ಹೀಗಾಗಿ ಬೆಳಗ್ಗೆ ಬೇಗ ಎದ್ದ ಪತ್ನಿ, ಗಂಡನಿಗೆ ಪೂಜೆ ಮಾಡಲು ಎಲ್ಲಾ ತಯಾರಿ ಮಾಡಿಕೊಂಡಿದ್ದಳು. ಮದುವೆಯಾದ ಮೇಲೆ ಬಂದಿರುವ ಮೊದಲ ಭೀಮನ ಅಮಾವಾಸ್ಯೆ. ಹೀಗಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಲು ಗಂಡನ ಜೊತೆ ರೆಡಿಯಾಗಿ ದೇವಸ್ಥಾನಕ್ಕೆ ಬಂದಿದ್ದಳಷ್ಟೇ.. ಆಗ ನಡೆದಿದ್ದು ಘೋರ ದುರಂತ.

ಇದನ್ನೂ ಓದಿ: ಠಾಣೆಗಳಲ್ಲಿ ದಾಖಲಾಗುತ್ತಿವೆ ಸಾಲು ಸಾಲು ದೂರು – ವನ್ಷಿಕಾ ಹೆಸರಲ್ಲಿ ನಿಶಾ ನರಸಪ್ಪ ವಂಚಿಸಿದ್ದೆಷ್ಟು..?

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಭೀಮನ ಅಮಾವಾಸ್ಯೆ ದಿನವೇ ಘೋರ ಘಟನೆ ನಡೆದಿದೆ. 25 ವರ್ಷದ ಶಂಕರ್ ಜಗಮುತ್ತಿ 5 ತಿಂಗಳ ಹಿಂದಷ್ಟೇ ಪ್ರಿಯಾಂಕ ಎಂಬವರನ್ನು ಮದುವೆಯಾಗಿದ್ದರು. ಗಂಡ ಹೆಂಡತಿ ಇಬ್ಬರೂ ಭೀಮನ ಅಮಾವಾಸ್ಯೆ ಆಗಿದ್ದರಿಂದ ಪೂಜೆ ಸಲ್ಲಿಸಲು ಬನಸಿದ್ದೇಶ್ವರ ದೇವಸ್ಥಾನಕ್ಕೆ ಜೊತೆಯಾಗಿಯೇ ಬಂದಿದ್ದರು. ಇನ್ನೇನು ದೇಗುಲ ಪ್ರವೇಶ ಮಾಡಬೇಕು. ಅಷ್ಟರಲ್ಲಿಯೇ ಕಟುಕರ ರೂಪದಲ್ಲಿ ಬಂದ ದುಷ್ಕರ್ಮಿಗಳು ಶಂಕರ್ ನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ಗಂಡನಿಗೆ ದೀರ್ಘಾಯುಷ್ಯ ಕೋರಲು ದೇವಸ್ಥಾನಕ್ಕೆ ನಗು ನಗುತ್ತಾ ಬಂದಿದ್ದ ಪತ್ನಿ, ಗಂಡನ ಹತ್ಯೆ ನೋಡಿ ಆಘಾತಕ್ಕೊಳಗಾಗಿದ್ದಾಳೆ. ಸ್ಥಳಕ್ಕೆ ಮೂಡಲಗಿ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಗಂಡನಿಗೆ ಪೂಜೆ ಮಾಡಬೇಕು ಎಂದು ಬೆಳಗ್ಗೆಯಿಂದಲೇ ತಯಾರಿ ಮಾಡಿಕೊಂಡಿದ್ದ ಪತ್ನಿಗೆ ತನ್ನ ಕಣ್ಣೆದುರಲ್ಲೇ ಗಂಡನನ್ನು ಬೇರೆಯವರು ಕೊಚ್ಚಿ ಕೊಂದು ಹೋದರೆ ಹೇಗಿರಬೇಡ.. ಇದೇ ಅಲ್ಲವೇ ವಿಧಿ ವಿಪರ್ಯಾಸ.

suddiyaana