ಸ್ವಾತಂತ್ರ್ಯ ಸಂಭ್ರಮ, ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಇತಿಹಾಸವೇ ರೋಚಕ

ಸ್ವಾತಂತ್ರ್ಯ ಸಂಭ್ರಮ, ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಿದ್ದ ಹಳೆಯ ಸಂಸತ್ ಭವನದ ಇತಿಹಾಸವೇ ರೋಚಕ

ಕೇಂದ್ರ ಸರ್ಕಾರ ಕರೆದಿರುವ ಸಂಸತ್ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಿದೆ. ಶತಮಾನದ ಇತಿಹಾಸ ಹೊಂದಿರುವ ಹಳೇ ಸಂಸತ್ ಭವನದಲ್ಲಿ ಸೋಮವಾರ ನಡೆದ ಕಲಾಪವೇ ಕೊನೆಯಾಗಿದೆ. ಸ್ವಾತಂತ್ರ್ಯ ಸಂಭ್ರಮ, ಹತ್ತಾರು ಪ್ರಧಾನಿಗಳು, ನೂರಾರು ಮಸೂದೆಗಳು, ಐತಿಹಾಸಿಕ ನಿರ್ಣಯಗಳು, ದಿಗ್ಗಜ ನಾಯಕರ ಸಮರಕ್ಕೆ ಸಾಕ್ಷಿಯಾಗಿದ್ದ ಭವನ ಇನ್ನು ಇತಿಹಾಸದ ಪುಟ ಸೇರಲಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಹಳೇ ಸಂಸತ್ ಕಟ್ಟಡ ಹಲವು ವಿಶೇಷತೆಗಳಿಂದ ಕೂಡಿದೆ.

ಇದನ್ನೂ ಓದಿ : ಹಂಪಿ ಉತ್ಸವ ನವೆಂಬರ್ ಗೆ ಬೇಡ ಫೆಬ್ರವರಿಗೆ ಮಾಡಲು ಸಿಎಂ ಸೂಚನೆ – ಐತಿಹಾಸಿಕ ಸಂಭ್ರಮಕ್ಕೂ ಬರದ ಕಾರ್ಮೋಡ  

ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಅವರಿಂದ ಹಿಡಿದು ಹಾಲಿ ಪ್ರಧಾನಿ ನರೇಂದ್ರ ಮೋದಿವರೆಗೂ ಹಲವು ಪ್ರಧಾನಿಗಳು ಹಳೇ ಸಂಸತ್ ಕಟ್ಟಡದಲ್ಲಿ ಹಲವು ನಿರ್ಣಯಗಳನ್ನ ಕೈಗೊಂಡಿದ್ದಾರೆ. ಆದ್ರೆ ಇನ್ಮೇಲೆ ಹಳೆಯ ಕಟ್ಟಡದಲ್ಲಿ ಕಲಾಪ, ಮಸೂದೆ ಮಂಡನೆ, ಚರ್ಚೆ ಕೇಳುವುದೇ ಇಲ್ಲ. ಹಳೆ ಸಂಸತ್ ಭವನದಲ್ಲಿ ಕಲಾಪ ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್ ಆಗಿದೆ. ಇನ್ನು ಹಳೆಯ ಕಟ್ಟಡ ಹಿಂದೆಯೂ ಕೂಡ ಹಲವು ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಳೆಯ ಕಟ್ಟಡವನ್ನ ಭಾರತದ ಇತಿಹಾಸ ಹಾಗೂ ಅದರ ಪ್ರಜಾಸತ್ತಾತ್ಮಕ ಮೌಲ್ಯಗಳ ಭಂಡಾರ ಎಂದು ಅನೇಕ ತಜ್ಞರು, ಇತಿಹಾಸಕಾರರು ವರ್ಣಿಸಿದ್ದಾರೆ.. ಯಾಕಂದ್ರೆ ಭಾರತವನ್ನ ಆಳುತ್ತಿದ್ದ ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆದ ಭಾರತ, 1947 ರ ಆಗಸ್ಟ್ 15 ರ ಮಧ್ಯರಾತ್ರಿಯ ಸಮಯದಲ್ಲಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತೀಯ ಸಂಸತ್ತಿನಲ್ಲಿ ಭಾರತೀಯ ಸಂವಿಧಾನ ಸಭೆಯ ಮೊದಲು ಸ್ವಾತಂತ್ರ್ಯ ಭಾಷಣ ಮಾಡಿದ್ದರು. ಈ ಭಾಷಣವು ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣ ಎಂದು ಪ್ರಸಿದ್ಧವಾಗಿದೆ. ಮತ್ತು 20 ನೇ ಶತಮಾನದ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ಭಾಷಣಗಳಲ್ಲಿ ಒಂದಾಗಿದೆ

ಇನ್ನು ಮೂರು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಇದೇ ಕಟ್ಟಡದಲ್ಲಿ ಸ್ಮರಣೀಯ ಭಾಷಣ ಮಾಡಿದ್ದರು. 1996ರಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲದಿದ್ರೂ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಆ ಸಂದರ್ಭದಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದರು. ಆದ್ರೆ ಪ್ರಧಾನಿಯಾಗಿ 13 ದಿನಕ್ಕೆ ಅಂದ್ರೆ ಮೇ 27, 1996 ರಂದು ವಿಶ್ವಾಸ ಮತಕ್ಕಾಗಿ ಲೋಕಸಭೆಯಲ್ಲಿದ್ದರು. ವಿಶ್ವಾಸ ಮತದ ವಿರುದ್ಧ ಸೋತರೂ ಕೂಡ ಪಾಂಡಿತ್ಯಪೂರ್ಣ ಭಾಷಣವನ್ನ ಮಾಡಿದ್ದರು. ಇಂದಿರಾಗಾಂಧಿ, ಲಾಲ್ ಬಹುದ್ದೂರು ಶಾಸ್ತ್ರಿ, ಮನಮೋಹನ್ ಸಿಂಗ್ ಸೇರಿದಂತೆ ಹಲವರು ಹಳೇ ಸಂಸತ್ ಕಟ್ಟಡದಲ್ಲೇ ಕರ್ತವ್ಯ ಸಲ್ಲಿಸಿದ್ದಾರೆ. ಹಿಂದಿನ 13 ಪ್ರಧಾನಮಂತ್ರಿಗಳು ಹಾಗೂ 14ನೇ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಕೂಡ ಇದೇ ಕಟ್ಟಡದಲ್ಲಿ ಹಲವು ಐತಿಹಾಸಿಕ ನಿರ್ಣಯಗಳನ್ನ ಕೈಗೊಂಡಿದ್ದಾರೆ.

ಭಾರತೀಯ ಪ್ರಜಾಪ್ರಭುತ್ವದ ದೇಗುಲ ಎಂದೇ ಗೌರವಿಸಲ್ಪಡುವ ಸಂಸತ್ ಭವನ ಫೆ.12, 1921ರಂದು ಶಂಕುಸ್ಥಾಪನೆ ನೆರವೇರಿ ಆರೇ ವರ್ಷಗಳಲ್ಲಿ ಕಟ್ಟಡ ನಿರ್ಮಾವಾಗಿತ್ತು. 1927, ಫೆ.18ರಂದು ಅಂದಿನ ಗವರ್ನರ್‌ ಜನರಲ್‌ ಲಾರ್ಡ್‌ ಇರ್ವಿನ್‌ ರಿಂದ ಸಂಸತ್‌ ಭವನದ ಉದ್ಘಾಟನೆ ಮಾಡಲಾಗಿತ್ತು. 83 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು, 560 ಅಡಿ ಸಂಸತ್‌ ಭವನದ ಸುತ್ತಳತೆ ಇದೆ. ಚಿನ್ನದ ಬೀಗದ ಕೈ ಬಳಸಿ ಕೌನ್ಸಿಲ್ ಹೌಸ್ ದ್ವಾರವನ್ನು ತೆರೆದಿದ್ದ ಇರ್ವಿನ್. ವೈಸರಾಯ್‌ ಮನೆಯು ರಾಷ್ಟ್ರಪತಿ ಭವನವಾಗಿ ಬದಲಾವಣೆಗೊಂಡಿತ್ತು . ಅಂದಾಜು 6 ಎಕರೆ ವಿಸ್ತೀರ್ಣದಲ್ಲಿರುವ ವಿಶಾಲವಾದ ಸಂಸತ್ ಕಟ್ಟಡ ಇದಾಗಿದ್ದು ಮೊದಲ ಮಹಡಿಯಲ್ಲೇ 114 ಸ್ತಂಭಗಳ ಸಾಲನ್ನು ಹೊಂದಿದೆ. ಇದಿಷ್ಟೇ ಅಲ್ಲದೆ ಹಳೇ ಸಂಸತ್ ಕಟ್ಟಡ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯ ಸಂಭ್ರಮ ಸೇರಿದಂತೆ ಈವರೆಗೂ ದೇಶದ ನಿರ್ಧಾರಗಳಿಗೆ ವೇದಿಕೆಯಾಗಿದೆ.

 

Shantha Kumari