ಹಿಮಾಚಲ ಪ್ರದೇಶದಲ್ಲಿ ಪಕ್ಷಾಂತರ ಪರ್ವ: ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿಗೆ ಸೇರಿದ 26 ಕಾಂಗ್ರೆಸ್ ನಾಯಕರು

ಹಿಮಾಚಲ ಪ್ರದೇಶದಲ್ಲಿ ಪಕ್ಷಾಂತರ ಪರ್ವ: ಮತದಾನಕ್ಕೆ ಕೆಲವೇ ದಿನಗಳಿರುವಾಗ ಬಿಜೆಪಿಗೆ ಸೇರಿದ 26 ಕಾಂಗ್ರೆಸ್ ನಾಯಕರು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಹಲವು ಭರವಸೆಗಳನ್ನು ಘೋಷಿಸುತ್ತಿವೆ. ಇದರ ನಡುವೆ ಪಕ್ಷಾಂತರ ಪರ್ವವೂ ಆರಂಭವಾಗಿದ್ದು, ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಾದ ಧರ್ಮಪಾಲ್ ಠಾಕೂರ್ ಖಂಡ್  ಸೇರಿ 26  ನಾಯಕರು ಬಿಜೆಪಿಗೆ ಸೇರಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆಗೆ ದಿನಾಂಕ ನಿಗದಿ: ಡಿ. 1 ಹಾಗೂ 5ಕ್ಕೆ ಮತದಾನ

ಹಿಮಾಚಲ ಪ್ರದೇಶದಲ್ಲಿ ಮತದಾನಕ್ಕೆ ಇನ್ನು ನಾಲ್ಕು ದಿನ ಬಾಕಿಯಿದ್ದು, ಕೊನೆಯ ಹಂತದಲ್ಲಿ ನಡೆದಿರುವ ಈ ಬೆಳವಣಿಗೆಯು ಬಿಜೆಪಿಗೆ ಪೂರಕವಾಗಿದ್ದರೆ ಕಾಂಗ್ರೆಸ್​ಗೆ ಆಘಾತಕಾರಿಯಾಗಿದೆ.

ಮುಖ್ಯಮಂತ್ರಿ ಜೈರಾಮ್ ಠಾಕೂರ್ ಮತ್ತು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯ ಉಸ್ತುವಾರಿ ಸುಧಾಮ್ ಸಿಂಗ್ ಸಿಂಗ್ ಸಮಕ್ಷಮದಲ್ಲಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾದರು. ಶಿಮ್ಲಾ ಕ್ಷೇತ್ರದ ಬಿಜೆಪಿ ಉಮೇದುವಾರ ಸಂಜಯ್ ಸೂದ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರನ್ನು ಮುಖ್ಯಮಂತ್ರಿ ಜಯರಾಮ್ ಠಾಕೂರ್ ಬಿಜೆಪಿಗೆ ಸ್ವಾಗತಿಸಿದರು. ‘ಎಲ್ಲರೂ ಜೊತೆಗೂಡಿ ಕೆಲಸ ಮಾಡೋಣ. ಬಿಜೆಪಿಯನ್ನು ಐತಿಹಾಸಿಕ ವಿಜಯದೊಂದಿಗೆ ಮತ್ತೆ ಅಧಿಕಾರಕ್ಕೆ ತರೋಣ’ ಎಂದು ಅವರು ಕರೆ ನೀಡಿದರು.

ಇದಕ್ಕೂ ಮೊದಲು ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ಗೆಲುವಿನ ಬಗ್ಗೆ ತಮಗೆ ಅನುಮಾನವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರಲ್ಲದೇ,  ‘ಹಿಮಾಚಲ ಪ್ರದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಂಬುತ್ತಾರೆ’ ಎಂದು ನಡ್ಡಾ ಹೇಳಿದ್ದರು.

suddiyaana