ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ಹೃದಯಾಘಾತ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು, ಬಿಎಂಆರ್‌ಸಿಎಲ್ ವಿರುದ್ಧ ಎಫ್ಐಆರ್

ಮೆಟ್ರೋದಲ್ಲಿ ಸಂಚರಿಸುತ್ತಿದ್ದ ವೇಳೆ ಹೃದಯಾಘಾತ – ಸಿಬ್ಬಂದಿ ನಿರ್ಲಕ್ಷ್ಯಕ್ಕೆ ವ್ಯಕ್ತಿ ಸಾವು, ಬಿಎಂಆರ್‌ಸಿಎಲ್ ವಿರುದ್ಧ ಎಫ್ಐಆರ್

ಬೆಂಗಳೂರಿನ ಟ್ರಾಫಿಕ್ ತಲೆಬಿಸಿಗೆ ಟಾನಿಕ್ ರೀತಿ ಬಂದಿದ್ದು ನಮ್ಮ ಮೆಟ್ರೋ.. ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಮೆಟ್ರೋದಲ್ಲಿ ಪ್ರಯಾಣಿಕರು ಆರಾಮಾಗಿ ಪ್ರಯಾಣ ಮಾಡಬಹುದು. ಟ್ರಾಫಿಕ್ ಜಂಜಾಟವಿಲ್ಲದೆ ಬೇಗನೇ ಅವರ ನಿಲ್ದಾಣಕ್ಕೆ ತಲುಪಬಹುದು. ಆದರೆ, ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ದಿಢೀರ್ ಆರೋಗ್ಯ ಕೈಕೊಟ್ಟರೆ ಏನು ವ್ಯವಸ್ಥೆಯಿದೆ. ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ಯಾವ ರೀತಿ ಕ್ರಮಕೈಗೊಳ್ಳಬಹುದು ಅನ್ನೋ ಚರ್ಚೆ ಈಗ ಶುರುವಾಗಿದೆ. ಯಾಕೆಂದರೆ, ಮೆಟ್ರೋದಲ್ಲಿ ತೀವ್ರವಾಗಿ ಎದೆನೋವು ಕಾಣಿಸಿಕೊಂಡ ವ್ಯಕ್ತಿಯೊಬ್ಬರು ಕೊನೆಗೂ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾರೆ. ಈ ಪ್ರಕರಣವೀಗ ಮೆಟ್ರೋ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.

ಇದನ್ನೂ ಓದಿ: ಡಿಜೆ ಹಳ್ಳಿ-ಕೆಜಿ ಹಳ್ಳಿ ಸೇರಿ ಹಿಂಸಾಚಾರ ಪ್ರಕರಣಗಳ ಮರು ಪರಿಶೀಲಿಸಿ ಹಿಂಪಡೆಯಲು ಗೃಹ ಸಚಿವರ ಸೂಚನೆ

ಜುಲೈ 20ರಂದು ತಿಮ್ಮೇಗೌಡ ಎಂಬುವವರಿಗೆ ಮೆಟ್ರೋದಲ್ಲಿ ಹೃದಯಾಘಾತವಾಗಿದೆ. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ ತಿಮ್ಮೇಗೌಡರು ಸಾವನ್ನಪ್ಪಿದ್ದಾರೆ. ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದ ತಿಮ್ಮೇಗೌಡ(67) ಎಂಬುವವರಿಗೆ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುವ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ಕೊನೆಗೆ ಮೆಟ್ರೋ ರೈಲು ಎಂಜಿ ರಸ್ತೆ ನಿಲ್ದಾಣಕ್ಕೆ ಬಂದಾಗ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು ಮೆಟ್ರೋ ರೈಲಿನಿಂದ ಹೊರಗೆ ಕರೆತಂದು ಫ್ಲಾಟ್ ಫಾರಂ ಮೇಲೆ ಕೂರಿಸಿದ್ದಾರೆ. ಸುಮಾರು ಹದಿನಾಲ್ಕು ನಿಮಿಷಗಳ ಕಾಲ ಫ್ಲಾಟ್ ಫಾರಂನಲ್ಲೇ ತಿಮ್ಮೇಗೌಡರನ್ನು ಹಾಗೇ ಬಿಟ್ಟಿದ್ದಾರೆ. ಅಲ್ಲಿನ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಯಾರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿಲ್ಲ. ಕೆಲ ನಿಮಿಷದ ನಂತರ ತಿಮ್ಮೇಗೌಡರನ್ನು ಇನ್ಫ್ರಾಂಟ್ರಿ ರಸ್ತೆಯ ಸ್ಪರ್ಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸದ ಕಾರಣ ತಿಮ್ಮೇಗೌಡರ ಪ್ರಾಣ ಪಕ್ಷ ಹಾಕಿಹೋಗಿದೆ. ಇಲ್ಲಿ ಮೆಟ್ರೋ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಪ್ರಯಾಣಿಕರಿಗೆ ಆರೋಗ್ಯದಲ್ಲೇನಾದರೂ ಸಮಸ್ಯೆಯಾದರೇ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಸಹಾಯಕ್ಕೆ ಧಾವಿಸಲೂ ಯಾವ ಸಿಬ್ಬಂದಿಯೂ ಮುಂದೆ ಬರುವುದಿಲ್ಲ. ಹೃದಯಾಘಾತವಾಗಿ ನಲವತ್ತು ನಿಮಿಷಗಳು ಕಳೆದ್ರು ಯಾರು ಸಹಾಯಕ್ಕೆ ಬಂದಿಲ್ಲ ಎಂದು ಪ್ರಯಾಣಿಕರೊಬ್ಬರು ಆಕ್ರೋಶ ಹೊರ ಹಾಕಿದ್ದಾರೆ. ಘಟನೆ ಬಳಿಕ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಪೊಲೀಸರು ಬಿಎಂಆರ್‌ಸಿಎಲ್ ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಿದ್ದಾರೆ. ಬಿಎಂಆರ್ಸಿಎಲ್ ಚೀಫ್ ಸೆಕ್ಯುರಿಟಿ ಆಫೀಸರ್ ಸೆಲ್ವಂಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಬೇಜಾಬ್ದಾರಿಯಿಂದ ಸಾವು ಸಂಭವಿಸಿದ್ದು ಸರಿಯಾದ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲು ಮಾಡಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಿಎಂಆರ್‌ಸಿಎಲ್ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿಸಿಲ್ಲ ಬದಲಾಗಿ ಸಾರ್ವಜನಿಕರು ಆಸ್ಪತ್ರೆಗೆ ದಾಖಲು ಮಾಡಿಸಿದ್ದಾರೆ ಎನ್ನಲಾಗಿದೆ.

suddiyaana