5 ಗ್ಯಾರಂಟಿಯಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದ ಹೆಚ್‌ಡಿಕೆ – ಹೇಳಿಕೆ ವಿರುದ್ಧ ಕ್ರಮ ಕೈಗೊಂಡ ಮಹಿಳಾ ಆಯೋಗ

5 ಗ್ಯಾರಂಟಿಯಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದ ಹೆಚ್‌ಡಿಕೆ – ಹೇಳಿಕೆ ವಿರುದ್ಧ ಕ್ರಮ ಕೈಗೊಂಡ ಮಹಿಳಾ ಆಯೋಗ

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆರೋಪ – ಪ್ರತ್ಯಾರೋಪ ಹೆಚ್ಚಾಗುತ್ತಲೇ ಇದೆ. ಮಾಜಿ ಸಿಎಂ, ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಹೆಚ್‌ಡಿ ಕುಮಾರಸ್ವಾಮಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಯಿಂದ ಹಳ್ಳಿಯ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೆಚ್‌ಡಿಕೆ  ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಸಂಬಂಧ ಕಾಂಗ್ರೆಸ್​ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ಬೆನ್ನಲ್ಲೇ ಮಹಿಳಾ ಆರೋಗ ಕುಮಾರಸ್ವಾಮಿ ವಿರುದ್ಧ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:ನೀರು ಪೂರೈಕೆ ಮಾಡುವಲ್ಲಿ ವಿಫಲವಾದ ಸರ್ಕಾರ – ಗಂಡ-ಹೆಂಡತಿ ಒಟ್ಟಿಗೆ ಸ್ನಾನ ಮಾಡಿ ಎಂದ ಮೇಯರ್‌ !

ಭಾನುವಾರ ತುಮಕೂರಿನ ತುರುವೇಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರ ಪ್ರಚಾರ ಕಾರ್ಯಕ್ರಮದಲ್ಲಿ ಹೆಚ್‌ಡಿ ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ್ದ ಕುಮಾರಸ್ವಾಮಿ, ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಭರದಲ್ಲಿ ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.  ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಅವರ ಬದುಕು ಏನಾಗುತ್ತದೆ ಎಂಬುವುದನ್ನು ಯೋಚನೆ ಮಾಡಬೇಕಾಗಿದೆ. ನಿಮ್ಮ ಕುಟುಂಬದ ಬದುಕು ಏನಾಗುತ್ತಿದೆ ಎಂಬುವುದನ್ನು ಯೋಚನೆ ಮಾಡಬೇಕಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಕಿಡಿಕಾರಿದ್ದಾರೆ. ಮಹಿಳೆಯನ್ನು ಪಕ್ಷದ ಗುರುತು ಮಾಡಿಕೊಂಡು ಅವರನ್ನೇ ಅವಮಾನಿಸುವ ಏಕೈಕ ಪಕ್ಷ ಎಂದರೆ ಜೆಡಿಎಸ್ ಎಂದು ಕಾಂಗ್ರೆಸ್​ ನಾಯಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೆಚ್​.ಡಿ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಕಾಂಗ್ರೆಸ್​ನ ದೊಡ್ಡ ದೊಡ್ಡ ನಾಯಕರೇ ಮುಗಿ ಬಿದ್ದಿದ್ದು ಈ ಹೇಳಿಕೆಯನ್ನ ಲೋಕಸಭೆ ಚುನಾವಣೆವರೆಗೆ ಜೀವಂತವಾಗಿರಿಸೋಕೆ ಮುಂದಾಗಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರು, ಶಾಸಕರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆಂದು ಹೋದಲ್ಲಿ, ಬಂದಲ್ಲಿ ಕಾರ್ಯಕ್ರಮಗಳಲ್ಲಿ ಹೇಳುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಅವರು ನಾನು ಹೇಳಿದ್ದೆ ಬೇರೆ, ನನ್ನ ಹೇಳಿಕೆಯನ್ನು ವಿರೋಧ ಪಕ್ಷದವರು ತಿರುಚಿದ್ದೇ ಬೇರೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ, ತಮ್ಮ ರಾಜಕೀಯ ಲಾಭಕ್ಕೆ ಕಿಳುಮಟ್ಟದ ಭಾಷೆ ಬಳಸಿ, ಹೆಣ್ಣು ಮಕ್ಕಳ ವೈಯಕ್ತಿಕ ಜೀವನ, ವ್ಯಕ್ತಿತ್ವವನ್ನು ಹಾಳು ಮಾಡಲಾಗ್ತಿದೆ. ಇದು ಆಕ್ಷೇಪಾರ್ಹ ಹೇಳಿಕೆ. ಇದನ್ನ ಮಹಿಳಾ ಆಯೋಗ ಸಹಿಸಲ್ಲ. ಒಂದು ಹೆಣ್ಣನ್ನು ಗುರಿಯಾಗಿಸಿ ತೇಜೋವದೆ ಮಾಡುವ ಅವಶ್ಯಕತೆ ಇಲ್ಲ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ನೋಟಿಸ್ ಕೊಟ್ಟು ವಿವರಣೆ ಕೇಳಲಾಗುವುದು ಎಂದು ಹೇಳಿದ್ದಾರೆ.

Shwetha M