ಸಿಎಂ ಸಿದ್ದರಾಮಯ್ಯರನ್ನ ಬದಲಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಲ್ಲ – ಹೆಚ್‌.ಡಿ ಕುಮಾರಸ್ವಾಮಿ

ಸಿಎಂ ಸಿದ್ದರಾಮಯ್ಯರನ್ನ ಬದಲಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಲ್ಲ – ಹೆಚ್‌.ಡಿ ಕುಮಾರಸ್ವಾಮಿ

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಏಕೆಂದರೆ ಸಿಎಂ ಸಿದ್ದರಾಮಯ್ಯರನ್ನ ಬದಲಿಸುವುದು ಕಾಂಗ್ರೆಸ್ ಪಕ್ಷಕ್ಕೆ ಸುಲಭವಲ್ಲವೆಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನವೆಂಬರ್‌ ಕ್ರಾಂತಿಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಯಾವ ಕಾಂತ್ರಿಯೂ ಆಗಲ್ಲ, ವಾಂತಿಯೂ ಆಗಲ್ಲʼ ಎಂದು ತಿಳಿಸಿದರು.

ಸಿದ್ದರಾಮಯ್ಯ ಈ ಹಿಂದೆ ಜೆಡಿಎಸ್‌ನಲ್ಲಿದ್ದ ಕಾರಣ ನಾನು ಮತ್ತು ನಮ್ಮ ಪಕ್ಷದ ನಾಯಕರು ಅವರ ಸಾಮರ್ಥ್ಯ ಏನೆಂದು ತಿಳಿದಿದ್ದೇವೆ. ಆದರೆ ಇದು ಇತರರಿಗೆ ತಿಳಿದಿಲ್ಲ. ಈ ತಿಂಗಳ 20ರ ನಂತರ ಕೆಲವರು ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಕರೆಯುತ್ತಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿವೆ. ನನಗೆ ಕ್ರಾಂತಿಯಲ್ಲಿ ನಂಬಿಕೆ ಇಲ್ಲ, ಕ್ರಾಂತಿಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ ನನ್ನ ಅಭಿಪ್ರಾಯದಲ್ಲಿ ಯಾವುದೇ ಕ್ರಾಂತಿ ಇರುವುದಿಲ್ಲ ಎಂದು ಎಚ್‌ಡಿಕೆ ತಿಳಿಸಿದರು.

ಇದನ್ನೂ ಓದಿ: ಸುರೇಶ್ ರೈನಾ, ಶಿಖರ್ ಧವನ್‌ಗೆ ಇಡಿ ಬಿಸಿ – 11.4 ಕೋಟಿ ಆಸ್ತಿ ಮುಟ್ಟುಗೋಲು

ರಾಜ್ಯದಲ್ಲಿ ಏನೂ ಆಗುವುದಿಲ್ಲ. ಅವರು (ಸಿದ್ದರಾಮಯ್ಯ) ಮೊದಲು ನಮ್ಮೊಂದಿಗಿದ್ದರು, ಇತರರಿಗೆ ಅವರು ಏನೆಂದು ತಿಳಿದಿಲ್ಲ. ಅವರ ಸಾಮರ್ಥ್ಯ ಏನು ಮತ್ತು ಅವರು ಏನು ಮಾಡಲು ಸಮರ್ಥರಾಗಿದ್ದಾರೆಂದು ನಮಗೆ ಮಾತ್ರ ಗೊತ್ತಿದೆ. ಅವರನ್ನ ತೆಗೆದುಹಾಕುವುದು ಕಾಂಗ್ರೆಸ್‌ಗೆ ಅಷ್ಟು ಸುಲಭವಲ್ಲ. ಅವರ ನಡುವೆ (ಕಾಂಗ್ರೆಸ್‌ನೊಳಗೆ) ಏನೇನು ಚರ್ಚೆಗಳು ನಡೆದಿವೆಯೋ, ಅದಕ್ಕೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಯಾದ ನಂತರ 2006ರಲ್ಲಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಅವರು  ನನ್ನನ್ನ ಯಾವಾಗ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂಬುದರ ಕುರಿತು ಪ್ರತಿದಿನ ದೇವರೊಂದಿಗೆ ಚರ್ಚಿಸುತ್ತಾರೆ. ಇದು ಅವರ ಮತ್ತು ದೇವರ ನಡುವಿನ ವಿಷಯ ಎಂದು ಟೀಕಿಸಿದರು.

Kishor KV