ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಕಾಣಿಕೆಯಿಂದಲೇ 3 ಕೋಟಿ 68 ಲಕ್ಷ ಸಂಗ್ರಹ

ಹಾಸನಾಂಬೆ  ಹುಂಡಿ ಎಣಿಕೆ ಕಾರ್ಯ ಮುಕ್ತಾಯ – ಕಾಣಿಕೆಯಿಂದಲೇ 3  ಕೋಟಿ 68 ಲಕ್ಷ ಸಂಗ್ರಹ

ಹಾಸನದ ಪ್ರಸಿದ್ದ ಹಾಸನಾಂಬೆ ದರ್ಶನ ಮುಕ್ತಾಯವಾಗಿದೆ. ಈಗ ದೇವಾಲಯದ ಹುಂಡಿ ಎಣಿಕೆ ಕಾರ್ಯ ಕೂಡ ನಡೆದಿದೆ. ಹುಂಡಿ ಎಣಿಕೆಯ ವೇಳೆ ಭಕ್ತರು ಕೋಟಿ ಕೋಟಿ ಹಣವನ್ನು ದೇವರಿಗೆ ಸಮರ್ಪಿಸಿರುವುದು ಕಂಡು ಬಂದಿದೆ. ದೇವಾಲಯದ 14 ಹುಂಡಿಗಳಲ್ಲಿ ಸಂಗ್ರಹವಾಗಿದ್ದ ಹಣವನ್ನು 300 ಸಿಬ್ಬಂದಿ ಎಣಿಕೆ ಮಾಡಿದ್ದರು. 14 ಹುಂಡಿಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ 68 ಲಕ್ಷದ 12 ಸಾವಿರದ 275 ರೂಪಾಯಿ ಹಣ ಸಂಗ್ರಹವಾಗಿದೆ. ಇನ್ನೂ ಹುಂಡಿಗಳಲ್ಲಿ 75 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಕೂಡ ಸಂಗ್ರಹವಾಗಿದೆ.

ಇನ್ನೂ ದೇವರ ದರ್ಶನಕ್ಕಾಗಿ 300 ರೂಪಾಯಿ, 1 ಸಾವಿರ ರೂಪಾಯಿ ಟಿಕೆಟ್ ಗಳನ್ನು ಮಾರಾಟ ಮಾಡಲಾಗಿತ್ತು. ಈ ಟಿಕೆಟ್, ಲಾಡು ಪ್ರಸಾದದ ಮಾರಾಟದಿಂದಲೇ 21 ಕೋಟಿ 91 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಹುಂಡಿ ಹಣ ಹಾಗೂ ಟಿಕೆಟ್ ಮಾರಾಟದಿಂದ ಒಟ್ಟಾರೆ 25 ಕೋಟಿ, 62 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಭಕ್ತರಿಗೆ ದರ್ಶನ ಹಾಗೂ ಆದಾಯ ಸಂಗ್ರಹದಲ್ಲೂ ಹಾಸನಾಂಬೆ ಹೊಸ ದಾಖಲೆಯನ್ನು ಬರೆದಿದೆ. 1000, 300 ರೂ ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 22 ಕೋಟಿ ಆದಾಯ ಬಂದಿತ್ತು. ಇನ್ನೂ ಹಾಸನಾಂಬೆ ಹುಂಡಿಯಲ್ಲಿ ವಿದೇಶಿ ಕರೆನ್ಸಿ ನೋಟುಗಳು, ಬ್ಯಾನ್ ಆದ ಹಳೆಯ 500 ರೂಪಾಯಿ ನೋಟುಗಳು , ದೇವರಿಗೆ ಹರಕೆಯ ಪತ್ರಗಳು ಕೂಡ ಸಿಕ್ಕಿವೆ. ದೇವರಿಗೆ ಭಕ್ತರು ನಾನಾ ಪ್ರಾರ್ಥನೆಗಳನ್ನು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ.

Kishor KV