37ನೇ ವಸಂತಕ್ಕೆ ಕಾಲಿಟ್ಟ ನಟರಾಕ್ಷಸ ಡಾಲಿ ಧನಂಜಯ್ – ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಶೈಲಿಯ ಭರ್ಜರಿ ಭೋಜನ

37ನೇ ವಸಂತಕ್ಕೆ ಕಾಲಿಟ್ಟ ನಟರಾಕ್ಷಸ ಡಾಲಿ ಧನಂಜಯ್ – ಅಭಿಮಾನಿಗಳಿಗೆ ಉತ್ತರ ಕರ್ನಾಟಕ ಶೈಲಿಯ ಭರ್ಜರಿ ಭೋಜನ

ಪ್ರತಿಭೆ ಅನ್ನೋದು ಯಾರ ಸ್ವತ್ತೂ ಅಲ್ಲ. ಕಠಿಣ ಪರಿಶ್ರಮ ಮತ್ತು ಮಾಡುವ ಕೆಲಸದ ಮೇಲೆ ನಿಷ್ಠೆ ಇದ್ದರೆ ಎಂತಹ ಕೆಲಸವನ್ನೂ ಸಾಧಿಸಿ ತೋರಬಹುದು ಎನ್ನುವುದಕ್ಕೆ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಬೆಸ್ಟ್ ಎಕ್ಸಾಂಪಲ್. ಇಂತಹ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ನಟ ಧನಂಜಯ್ ಗೆ ಇವತ್ತು 37ನೇ ಹುಟ್ಟು ಹಬ್ಬದ ಸಂಭ್ರಮ. ವಿಭಿನ್ನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಧನಂಜಯ ರಂಗಭೂಮಿಯ ಹಿನ್ನಲೆಯಿಂದ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸಾಲು ಸಾಲು ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ.

ಇದನ್ನೂ ಓದಿ : ಮದುವೆಯಾಗಲು ಇಟಲಿಗೆ ಹೋದ ವಧು.. ಮನೆಯಲ್ಲೇ ಬಾಕಿಯಾದ ವರ! – ವಿವಾಹಕ್ಕೆ ಸಾಕು ನಾಯಿಯೇ ಅಡ್ಡಿ!

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಜನಿಸಿದ ಧನಂಜಯ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯಾಗಿ ಬೆಳೆದಿದ್ದಾರೆ. ಧನಂಜಯ್ ಅವರ ಅಭಿಮಾನಿಗಳು ಬಹಳ ಅದ್ದೂರಿಯಾಗಿ ಬರ್ತ್​​ಡೇ ಸೆಲೆಬ್ರೇಟ್​ ಮಾಡುತ್ತಿದ್ದಾರೆ. ಈ ವರ್ಷ ಧನಂಜಯ್​ ಅವರಿಗೆ ಹುಟ್ಟುಹಬ್ಬ ವಿಶೇಷವಾಗಿದೆ. ಏಕೆಂದರೆ, ಕಳೆದ ಕೆಲವು ವರ್ಷಗಳಿಂದ ಅವರಿಗೆ ಜನ್ಮದಿನವನ್ನು ಗ್ರ್ಯಾಂಡ್​ ಆಗಿ ಸೆಲೆಬ್ರೇಟ್​ ಮಾಡಲು ಸಾಧ್ಯವಾಗಿರಲಿಲ್ಲ. ಕೊರೊನಾ ಹಾವಳಿ, ಪುನೀತ್​ ರಾಜ್​ಕುಮಾರ್​ ನಿಧನ ಮುಂತಾದ ಕಾರಣಗಳಿಂದ ಧನಂಜಯ್​ ಅವರು ಬರ್ತ್​ಡೇ (Daali Dhananjay Birthday) ಆಚರಿಸಿಕೊಂಡಿರಲಿಲ್ಲ. ಆದರೆ ಈ ವರ್ಷ ಅಭಿಮಾನಿಗಳ ಜೊತೆ ಸೇರಿ ಅವರು ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂಭ್ರಮದಲ್ಲಿ ಭಾಗಿಯಾದ ಎಲ್ಲ ಅಭಿಮಾನಿಗಳಿಗೆ ವಿಶೇಷವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರಿನ ನಂದಿ ಲಿಂಕ್ಸ್​ ಗ್ರೌಂಡ್​ನಲ್ಲಿ ಡಾಲಿ ಧನಂಜಯ್​ ಅವರ ಬರ್ತ್​ಡೇ ಆಚರಿಸಲಾಗುತ್ತಿದೆ. ಆಗಸ್ಟ್​ 22ರ ಮಧ್ಯರಾತ್ರಿಯಿಂದಲೇ ಸಂಭ್ರಮ ಶುರುವಾಗಿದೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಈ ಸಡಗರದಲ್ಲಿ ಭಾಗಿ ಆಗುತ್ತಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳನ್ನು ಕೂಡ ಮಾಡಲಾಗುತ್ತಿದೆ. ಧನಂಜಯ್​ ಅವರಿಗೆ ಶುಭಕೋರಲು ಬಂದ ಅಭಿಮಾನಿಗಳು ಉತ್ತರ ಕರ್ನಾಟಕ ಮತ್ತು ದಕ್ಷಿಣ ಭಾರತದ ಶೈಲಿಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ರಾಯಚೂರಿನ ಅಭಿಮಾನಿಗಳು ಉತ್ತರ ಕರ್ನಾಟಕದ ಊಟ ವ್ಯವಸ್ಥೆ ಮಾಡಿದ್ದಾರೆ. ಸಿಂಧನೂರಿನಿಂದ ಖಡಕ್ ರೊಟ್ಟಿ ತರಲಾಗಿದೆ. ಎಣ್ಣೆ ಬದನೆಕಾಯಿ, ಪುಂಡೆ ಪಲ್ಯೆ, ಬೂಂದಿ, ಶೇಂಗ ಹಿಂಡಿ, ಮಿರ್ಚಿ ಸೇರಿದಂತೆ ಅನೇಕ ಬಗೆಯ ಖಾದ್ಯಗಳನ್ನು ಬಡಿಸಲಾಗುತ್ತಿದೆ. ಸುಮಾರು ಎರಡು ಸಾವಿರ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಶಿವರಾಜ್ ಪಾಟೀಲ್ ಗುಂಜಳ್ಳಿ ಅವರಿಂದ ಅಭಿಮಾನಿಗಳಿಗೆ ಉತ್ತರ ಕರ್ನಾಟಕದ ಶೈಲಿಯ ಊಟವನ್ನು ನೀಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಈ ಬಾರಿ ಡಾಲಿ ಬರ್ತ್​ಡೇ ಗ್ರ್ಯಾಂಡ್​ ಆಗಿದೆ.

ಡಾಲಿ ಧನಂಜಯ್​ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹೀರೋ ಮಾತ್ರವಲ್ಲದೇ ವಿಲನ್​ ಆಗಲೂ ಸೈ ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಕನ್ನಡಕ್ಕಷ್ಟೇ ಡಾಲಿ ಧನಂಜಯ್​ ಸೀಮಿತವಾಗಿಲ್ಲ. ಟಾಲಿವುಡ್​ನಲ್ಲೂ ಅವರು ಹೆಸರು ಮಾಡಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ಅವರು ಮಾಡಿದ ನೆಗೆಟಿವ್​ ಶೇಡ್​ನ ಪಾತ್ರ ಗಮನ ಸೆಳೆದಿದೆ. ‘ಪುಷ್ಪ 2’ ಸಿನಿಮಾದಲ್ಲೂ ಅವರ ಪಾತ್ರ ಮುಂದುವರಿಯಲಿದೆ. ಕನ್ನಡದಲ್ಲಿ ಅವರು ನಟಿಸುತ್ತಿರುವ ‘ಉತ್ತರಕಾಂಡ’ ಚಿತ್ರದ ಟೀಸರ್​ ಬಿಡುಗಡೆಯಾಗಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ.

 

suddiyaana