ಸೇತುವೆ ದುರಂತದಲ್ಲಿ ನದಿಗೆ ಹಾರಿ ಜೀವ ಉಳಿಸಿದವನಿಗೆ ಬಿಜೆಪಿ ಟಿಕೆಟ್!
ಜೀವ ಪಣಕ್ಕಿಟ್ಟು ನದಿಗೆ ಹಾರಿದ ಮಾಜಿ ಶಾಸಕ ಚುನಾವಣಾ ಅಖಾಡಕ್ಕೆ!
![ಸೇತುವೆ ದುರಂತದಲ್ಲಿ ನದಿಗೆ ಹಾರಿ ಜೀವ ಉಳಿಸಿದವನಿಗೆ ಬಿಜೆಪಿ ಟಿಕೆಟ್!ಜೀವ ಪಣಕ್ಕಿಟ್ಟು ನದಿಗೆ ಹಾರಿದ ಮಾಜಿ ಶಾಸಕ ಚುನಾವಣಾ ಅಖಾಡಕ್ಕೆ!](https://suddiyaana.com/wp-content/uploads/2022/11/kanthalal.webp)
ಗಾಂಧಿನಗರ : ಗುಜರಾತ್ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಬಿಜೆಪಿ ಪಕ್ಷ ಅಳೆದು ತೂಗಿ ಗೆಲ್ಲುವ ಸ್ಪರ್ಧಿಗಳಿಗೆ ಮಣೆಹಾಕಿದೆ. ಚುನಾವಣೆಯ ಬಿಸಿ ಏರುತ್ತಿರುವಾಗಲೇ ನಡೆದ ಮೋರ್ಬಿ ಸೇತುವೆ ದುರಂತದ ವಿಚಾರವೂ ರಾಜಕೀಯ ಪಕ್ಷಗಳಿಗೆ ಹೊಸ ದಾಳವಾಗಿ ಸಿಕ್ಕಿದೆ. ಇದನ್ನೇ ಮುಂದಿಟ್ಟುಕೊಂಡು ಸೇತುವೆ ದುರಂತ ನಡೆದ ಸಮಯದಲ್ಲಿ ನದಿಗೆ ಹಾರಿ ಜನರ ಜೀವ ಉಳಿಸಲು ಯತ್ನಿಸಿದ ಮಾಜಿ ಶಾಸಕನೊಬ್ಬನಿಗೆ ಬಿಜೆಪಿ ಮಣೆ ಹಾಕಿದೆ.ದುರಂತದಲ್ಲಿ ಜನರ ಜೀವ ಉಳಿಸಲು ನದಿಗೆ ಹಾರಿದ ಮಾಜಿ ಶಾಸಕನನ್ನು ಬಿಜೆಪಿ ಚುನಾವಣಾ ಕಣಕ್ಕಿಳಿಸಿದೆ
ಇದನ್ನೂ ಓದಿ : ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್?: ಜಡ್ಡು ಪತ್ನಿಗೆ ತಂಗಿಯೇ ಎದುರಾಳಿ!
ಮೋರ್ಬಿ ಸೇತುವೆ ದುರಂತದ ವೇಳೆ ನದಿಗೆ ಬಿದ್ದ ಕೆಲವರು ಜೀವವುಳಿಸಿಕೊಳ್ಳಲು ಹೋರಾಡುತ್ತಿದ್ದರು. ಆಗ ಸ್ಥಳಕ್ಕೆ ಬಂದ ಮಾಜಿ ಶಾಸಕರಾಗಿದ್ದ 60 ವರ್ಷದ ಕಾಂತಿಲಾಲ್ ಅಮೃತಿಯಾ ನದಿಗೆ ಹಾರಿ ಜನರ ಜೀವ ಉಳಿಸಲು ಪ್ರಯತ್ನ ಪಟ್ಟಿದ್ದರು. ಅಂದು ಜನರ ಜೀವ ಉಳಿಸಲು ಯತ್ನಿಸಿದ ಶಾಸಕ ಕಾಂತಿಲಾಲ್ ಅಮೃತಿಯಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡಿದೆ. ಸೇತುವೆ ದುರಂತದ ವೇಳೆ 60 ವಯಸ್ಸಿನ ಮಾಜಿ ಶಾಸಕರಾಗಿದ್ದ ಕಾಂತಿಲಾಲ್ ಅಮೃತಿಯಾ ಅವರು ಲೈಫ್ ಟ್ಯೂಬ್ ಧರಿಸಿ ನದಿಗೆ ಹಾರಿ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವೀಡಿಯೊ ವೈರಲ್ ಕೂಡಾ ಆಗಿತ್ತು.
ಕಾಂತಿಲಾಲ್ ಅಮೃತಿಯಾ ಹೆಸರು ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಇರಲಿಲ್ಲ. ಅವರ ಈ ವಿಡೀಯೋ ವೈರಲ್ ಆಗುತ್ತಿದ್ದಂತೆ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದೆ. ಇದೀಗ ಮೊರ್ಬಿಯ ಹಾಲಿ ಶಾಸಕ ಬ್ರಿಜೇಶ್ ಮೆರ್ಜಾ ಅವರನ್ನು ಚುನಾವಣಾ ಅಖಾಡದಿಂದ ಕೈಬಿಡಲಾಗಿದೆ ಎಂದು ಹೇಳಲಾಗಿದೆ. ಗುಜರಾತ್ ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.