IAS ಅಧಿಕಾರಿಯನ್ನೇ ಒತ್ತೆಯಾಳಾಗಿರಿಸಿಕೊಂಡು ಹಲ್ಲೆ – ಅಕ್ರಮ ಬಯಲಿಗೆಳೆಯಲು ಹೋದಾಗ ಅಟ್ಟಹಾಸ!

IAS ಅಧಿಕಾರಿಯನ್ನೇ ಒತ್ತೆಯಾಳಾಗಿರಿಸಿಕೊಂಡು ಹಲ್ಲೆ – ಅಕ್ರಮ ಬಯಲಿಗೆಳೆಯಲು ಹೋದಾಗ ಅಟ್ಟಹಾಸ!

ಅಕ್ರಮ ಬಯಲಿಗೆಳೆಯಲು ಹೋದ ಐಎಎಸ್ ಅಧಿಕಾರಿಯನ್ನೇ ಒತ್ತೆಯಾಳಾಗಿ ಇರಿಸಿಕೊಂಡು ಹಲ್ಲೆ ಮಾಡಿರುವ ಭಯಾನಕ ಘಟನೆ ಗುಜರಾತ್​ನಲ್ಲಿ ನಡೆದಿದೆ. ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿದ್ದ ಗುಂಪೊಂದು ಐಎಎಸ್ ಅಧಿಕಾರಿ ಮೇಲೆ ದರ್ಪ ಮೆರೆದಿದೆ.

ಗುಜರಾತ್‌ನ ಸಬರ್‌ಕಾಂತ್ ಜಿಲ್ಲೆಯ ಧರೋಯ್ ಅಣೆಕಟ್ಟಿನ ಬಳಿ ಇಂಥಾದ್ದೊಂದು ಅಟ್ಟಹಾಸ ನಡೆದಿದ್ದು,  ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಮೀನುಗಾರಿಕಾ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಅಕ್ರಮಗಳನ್ನು ಪತ್ತೆ ಹಚ್ಚಲು ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ : ಶಾರುಖ್ ಖಾನ್ ಮನೆಯಲ್ಲಿ 8 ಗಂಟೆ ಅವಿತಿದ್ದ ಆಗಂತುಕರು!

ಮೀನುಗಾರಿಕಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನಿತಿನ್ ಸಾಂಗ್ವಾನ್ ಅವರು ಸೋಮವಾರ ಧರೋಯ್ ಅಣೆಕಟ್ಟಿನ ಬಳಿ ಅಕ್ರಮ ನಡೆಯುತ್ತಿದೆ ಎನ್ನಲಾದ ಸ್ಥಳಕ್ಕೆ ತಮ್ಮ ಅಧೀನ ಅಧಿಕಾರಿಗಳ ಜೊತೆ ತೆರಳಿದ್ದರು. ಈ ವೇಳೆ ಅಲ್ಲಿನ ಮೀನುಗಾರರು ಹಲ್ಲೆ ನಡೆಸಿದ್ದು ಗಾಯಗೊಂಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಮತ್ತು ಸಿಬ್ಬಂದಿ ಸಾಬರಮತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಧರೋಯ್ ಡ್ಯಾಂನ ಸಮೀಪ ಇರುವ ಅಂಬಾವಾಡ ಗ್ರಾಮಕ್ಕೆ ಮೀನುಗಾರಿಕಾ ಯೋಜನೆಯ ಪರಿಶೀಲನೆಗಾಗಿ ತೆರಳಿದ್ದರು. ಇದರಲ್ಲಿ ರಾಜ್ಯ ಸರ್ಕಾರವು ಸ್ಥಳೀಯ ಗುತ್ತಿಗೆದಾರರಿಗೆ ಅಣೆಕಟ್ಟಿನ ನೀರಿನಲ್ಲಿ ‘ಕೇಜ್ ಕಲ್ಚರ್ ಮೀನುಗಾರಿಕಾ’ ಪ್ರಾರಂಭಿಸಲು ಪ್ರೋತ್ಸಾಹಧನವನ್ನೂ ನೀಡುತ್ತಿದೆ.

ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೀನುಗಾರಿಕಾ ಯೋಜನೆಯ ಗುತ್ತಿಗೆದಾರ ಬಾಬು ಪರ್ಮಾರ್ ಎಂಬಾತ ಅಧಿಕಾರಿ ನಿತಿನ್ ಸಾಂಗ್ವಾನ್ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ವಾಗ್ವಾದ ಮಿತಿ ಮೀರಿದಾಗ ಆತನೇ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ ನಲ್ಲಿ ಉಲ್ಲೇಖಿಸಲಾಗಿದೆ.

ಐಎಎಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ಬಂಧಿಸುತ್ತೇವೆ. ಆರೋಪಿಗಳ ಪತ್ತೆಗೆ ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

suddiyaana