ಪಡಿತರಕ್ಕಾಗಿ ಇನ್ನುಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಬೇಕಿಲ್ಲ! – ಮನೆಬಾಗಿಲಿಗೆ ಬರುತ್ತೆ ಅನ್ನಭಾಗ್ಯ ಪಡಿತರ ಅಕ್ಕಿ!

ಪಡಿತರಕ್ಕಾಗಿ ಇನ್ನುಮುಂದೆ ನ್ಯಾಯಬೆಲೆ ಅಂಗಡಿಗೆ ತೆರಳಬೇಕಿಲ್ಲ! – ಮನೆಬಾಗಿಲಿಗೆ ಬರುತ್ತೆ ಅನ್ನಭಾಗ್ಯ ಪಡಿತರ ಅಕ್ಕಿ!

ಬೆಂಗಳೂರು: ಮಹಿಳೆಯರು, ಹಿರಿಯ ನಾಗರಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿರುವ ಕರ್ನಾಟಕ ಸರ್ಕಾರ ಈಗ ಪಡಿತರ ವಿತರಣೆಗೆ ಹೊಸ ಯೋಜನೆ ಹಾಕಿಕೊಳ್ಳುತ್ತಿದೆ. ಮುಖ್ಯವಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಇನ್ನುಮುಂದೆ ಅನ್ನಭಾಗ್ಯ ಯೋಜನೆಯಡಿ ಮನೆ ಬಾಗಿಲಿಗೆ ಪಡಿತರ ಅಕ್ಕಿ ವಿತರಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದ್ದು, ಹಲವಾರು ಸಭೆಗಳಲ್ಲಿ ಚರ್ಚಿಸಲಾಗಿದೆ. ವಯೋವೃದ್ಧರಿಗೆ ನೇರವಾಗಿ ಅಕ್ಕಿ ತಲುಪಿಸಲು ಈಗಾಗಲೇ ನಿರ್ಧರಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಕೊಡಬೇಕಾದ ಅಕ್ಕಿ ಹಾಗೂ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿರುವ 5 ಕೆಜಿ ಅಕ್ಕಿಯನ್ನು ಪಡಿತರ ಇಲಾಖೆಯ ಸಿಬ್ಬಂದಿಯೇ ನೇರವಾಗಿ ವಯೋವೃದ್ಧರ ಮನೆ ಬಾಗಿಲಿಗೆ ತಲುಪಿಸುವಂಥ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾರಿನಲ್ಲಿತ್ತು 10 ಅಡಿ ಉದ್ದದ ಕಾಳಿಂಗ ಸರ್ಪ! – ನೂರಾರು ಕಿ.ಮೀ  ಪ್ರಯಾಣಿಸಿದ್ರು ಗೊತ್ತೇ ಆಗಲಿಲ್ಲ!

ಇನ್ನು ಈ ಸೌಲಭ್ಯವನ್ನು ಪಡೆಯಲು ಪಡಿತರ ಚೀಟಿಯಲ್ಲಿರುವ ಮನೆಯ ಯಜಮಾನರು 90 ವರ್ಷ ದಾಟಿರಬೇಕು. ಹಾಗಿದ್ದರೆ, ಮಾತ್ರ ಈ ಸೌಲಭ್ಯ ಅವರಿಗೆ ಉಚಿತವಾಗಿ ಸಿಗುತ್ತದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ತಿಂಗಳಿಂದಲೇ ಈ ಯೋಜನೆ ಜಾರಿಗೆ ಬರಲಿದೆ.

90 ವರ್ಷ ಮೇಲ್ಪಟ್ಟವರ ಮನೆಗೆ ಅನ್ನಭಾಗ್ಯ ಅಕ್ಕಿ ವಿತರಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಆದರೆ, ಆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿರುವ ಬಗ್ಗೆ ಮಾಹಿತಿಯಿಲ್ಲ. ಇನ್ನೂ, ಆಹಾರ ಇಲಾಖೆಗೆ ಆ ಬಗ್ಗೆ ಆದೇಶ ಬಂದಿಲ್ಲ. ಬಹುಶಃ ಈ ತಿಂಗಳೊಳಗೆ ಆದೇಶ ಬಂದರೆ, ನವೆಂಬರ್ ನಿಂದಲೇ ಈ ಹೊಸ ಸೌಲಭ್ಯ ಜಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M