ವಿಧಾನಸೌಧದಲ್ಲಿ 300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕಳ್ಳತನ! – ಸಚಿವರ ಕಚೇರಿಯಲ್ಲಿ ಇಷ್ಟೊಂದು ಚಿನ್ನ ಸಿಕ್ಕಿದ್ದು ಹೇಗೆ?

ಶಕ್ತಿ ಸೌಧ ವಿಧಾನಸೌಧದಲ್ಲಿ ಚಿನ್ನ ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ಸಚಿವ ಸುರೇಶ್ ಅವರ ಕಚೇರಿಯಲ್ಲಿ ಕಳ್ಳತನವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪಿ ಜೈಲಿನಲ್ಲೇ ಹ*ತ್ಯೆ!
ಅಷ್ಟೊಂದು ಚಿನ್ನ ಸಿಕ್ಕಿದ್ದು ಹೇಗೆ?
ನವೀನ್ ಎಂಬವರು ಕೆಲಸದ ನಿಮಿತ್ತ ಸಚಿವರ ಕಚೇರಿಗೆ ಬಂದಿದ್ದರು. ಈ ವೇಳೆ ಚಿನ್ನಾಭರಣ ಹಾಗೂ ನಗದು ತಂದಿದ್ದರು. ಕೆಲಸ ಮುಗಿಸಿ ತೆರಳುವಾಗ ಕೈ ಚೀಲವನ್ನು ಮರೆತು ಹೋಗಿದ್ದರು. ಮಾರನೇ ದಿನ ಬಂದು ನೋಡಿದಾಗ ಕೈ ಚೀಲ ನಾಪತ್ತೆಯಾಗಿತ್ತು. 300 ಗ್ರಾಂ ಚಿನ್ನಾಭರಣ , 1.5 ಲಕ್ಷ ರೂ. ಕ್ಯಾಶ್ ಇದ್ದ ಕೈ ಚೀಲ ಕಳ್ಳತನವಾದ ಬೆನ್ನಲ್ಲೇ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ವಿಧಾನಸೌಧದ ಆಡಳಿತಾತ್ಮಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಯ ಡಿ ಗ್ರೂಪ್ ನೌಕರನ ಪಾತ್ರ ಗೊತ್ತಾಗಿದೆ. ನೌಕರ ಕೈ ಚೀಲ ಹಿಡಿದುಕೊಂಡು ಹೋಗುವುದು ಸಿಸಿಟಿವಿಯಲ್ಲಿ ಪತ್ತೆಯಾದ ಬೆನ್ನಲ್ಲೇ ವಿಧಾನಸೌಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದರೂ ಈಗ ಹಲವು ಪ್ರಶ್ನೆಗಳು ಎದ್ದಿದೆ. ಪರಿಶೀಲನೆ ನಡೆಸದೇ ಚಿನ್ನಾಭರಣ, ನಗದನ್ನು ವಿಧಾನಸೌಧದ ಒಳಗಡೆ ಭದ್ರತಾ ಸಿಬ್ಬಂದಿ ಬಿಟ್ಟಿದ್ದು ಯಾಕೆ? ಮೆಟಲ್ ಡಿಟೆಕ್ಟರ್, ತಪಾಸಣೆ ಕೇವಲ ನೆಪಕ್ಕೆ ಮಾತ್ರ ಇದೆಯೇ? ಸಚಿವರ ಕಚೇರಿಯಲ್ಲಿನ ಕಳ್ಳತನ ಭದ್ರತಾ ವೈಫಲ್ಯದ ಪ್ರತೀಕವೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.

ನೋಡಿರಿ

