ವೀರೇಂದ್ರ ಹೆಗ್ಗಡೆಯವರ ಅನುಮತಿ ಪಡೆಯಿರಿ – ಕಾಂತಾರ ಚಿತ್ರತಂಡಕ್ಕೆ ದೈವದ ಅಪ್ಪಣೆ

ವೀರೇಂದ್ರ ಹೆಗ್ಗಡೆಯವರ ಅನುಮತಿ ಪಡೆಯಿರಿ – ಕಾಂತಾರ ಚಿತ್ರತಂಡಕ್ಕೆ ದೈವದ ಅಪ್ಪಣೆ

ಕನ್ನಡದ ಸೂಪರ್ ಹಿಟ್ ಚಿತ್ರ ಕಾಂತಾರ ಹಲವು ದಾಖಲೆಗಳನ್ನ ಸೃಷ್ಟಿ ಮಾಡಿದೆ. ವಿವಿಧ ಚಿತ್ರರಂಗದ ಗಣ್ಯರು ಕೂಡಾ ಕಾಂತಾರ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಾರೆ. ಈಗಲೂ ಕೂಡಾ ಸೆಲೆಬ್ರಿಟಿಗಳು ಕಾಂತಾರ ಚಿತ್ರವನ್ನು ಹೊಗಳುತ್ತಿದ್ದಾರೆ. ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಕೂಡಾ ದೈವ, ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ದಂಪತಿ, ಹಾಗೂ ಕಾಂತಾರ ಚಿತ್ರತಂಡದಿಂದ ಅಣ್ಣಪ್ಪ, ಪಂಜುರ್ಲಿ ದೈವಕ್ಕೆ ನೇಮೋತ್ಸವ ಮಾಡಿಸಲಾಗಿತ್ತು. ಈ ಸಂದರ್ಭದಲ್ಲಿ ದೈವ ಕಾಂತಾರ ಚಿತ್ರತಂಡಕ್ಕೆ ಸಲಹೆ ನೀಡುವ ನುಡಿಯೊಂದು ನೀಡಿದೆ.

ಇದನ್ನೂ ಓದಿ:  ಸ್ವಾತಿ ಮುತ್ತಿನ ಮಳೆ ಹನಿಯೇ ಶೀರ್ಷಿಕೆ ವಿವಾದ – ರಮ್ಯ ವಿರುದ್ಧ ರಾಜೇಂದ್ರ ಸಿಂಗ್ ಬಾಬು ರಾಂಗ್

ದೈವ ನೇಮೋತ್ಸವದಲ್ಲಿ ‘ಕಾಂತಾರ 2’ ಬಗ್ಗೆ ರಿಷಬ್ ಶೆಟ್ಟಿ ದೈವದ ಮುಂದೆ ಪ್ರಶ್ನೆಯಿಟ್ಟಿದ್ದಾರೆ. ಈ ವೇಳೆ ದೈವ ಚಿತ್ರತಂಡಕ್ಕೆ ಅನುಮತಿ ನೀಡಿದೆ. ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆ ಅವರ ಅನುಮತಿಯನ್ನು ಪಡೆಯಲು ದೈವ ನುಡಿದಿದೆ. ಜೊತೆಗೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ ಎನ್ನಲಾಗಿದೆ. ಮೊದಲು ಚಿತ್ರ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ ಹೆಜ್ಜೆ ಇಡಿ ಎಂದು ಅಣ್ಣಪ್ಪ ಪಂಜುರ್ಲಿ ದೈವ ತಿಳಿಸಿದೆ. ಆಚಾರ ವಿಚಾರಗಳ ಜೊತೆಗೆ ಧರ್ಮದ ಪ್ರಕಾರ ಹೋಗಲು ದೈವ ಹೇಳಿದೆ. ‘ಕಾಂತಾರ 2’ ಮಾಡುವ ಮುನ್ನ ಧರ್ಮಾಧಿಕಾರಿ ಅವರ ಬಳಿ ಅನುಮತಿ ಕೇಳಲು ದೈವ ಅಪ್ಪಣೆ ಕೊಟ್ಟಿದೆ ಎನ್ನಲಾಗಿದೆ.

suddiyaana