‘ಕೊಟ್ಟರೆ ಸಿಎಂ ಹುದ್ದೆ ನೀಡಿ.. ನಾನಂತೂ ಸಚಿವನಾಗಲ್ಲ’ – ಡಿಕೆಶಿ ಹಠದಿಂದ ಹೈಕಮಾಂಡ್ ಗೆ ತಲೆಬಿಸಿ!

‘ಕೊಟ್ಟರೆ ಸಿಎಂ ಹುದ್ದೆ ನೀಡಿ.. ನಾನಂತೂ ಸಚಿವನಾಗಲ್ಲ’ – ಡಿಕೆಶಿ ಹಠದಿಂದ ಹೈಕಮಾಂಡ್ ಗೆ ತಲೆಬಿಸಿ!

ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿದ್ರೂ ಕೂಡ ಕಾಂಗ್ರೆಸ್ ಗೆ ಸಿಎಂ ಆಯ್ಕೆ ವಿಚಾರ ಕಬ್ಬಿಣದ ಕಡಲೆಯಾದಂತಾಗಿದೆ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಹಠದಿಂದಾಗಿ ಹೈಕಮಾಂಡ್ ಕೂಡ ಅಡಕತ್ತರಿಯಲ್ಲಿ ಸಿಲುಕಿದೆ. ಡಿ.ಕೆ ಶಿವಕುಮಾರ್ ಅಂತೂ ಸಿಎಂ ಕುರ್ಚಿ ಮೇಲೆ ಕೂರಲೇಬೇಕು ಎಂದು ಪಣ ತೊಟ್ಟಿದ್ದು ಶತಾಯಗತಾಯ ಕಸರತ್ತು ನಡೆಸುತ್ತಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯ ಸಾಧಿಸಿದೆ. ಆದರೆ, ‌ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಪೈಪೋಟಿ ನಡೆಯುತ್ತಿದೆ. ಸಿಎಂ ಸ್ಥಾನ ಮಾತ್ರ ನನಗೆ ಬೇಕೆ ಬೇಕು ಎಂದು ಡಿಕೆ ಶಿವಕುಮಾರ್‌ ಪಟ್ಟು ಹಿಡಿದಿರುವುದು ಹೈಕಮಾಂಡ್‌ಗೆ ತಲೆನೋವು ತಂದಿದೆ. ಇತ್ತ ಸಿದ್ದರಾಮಯ್ಯ ಕೂಡ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಸಿಎಂ ಕುಸ್ತಿ ನಡುವೆಯೇ ಡಿಸಿಎಂ, ಸಚಿವ ಸ್ಥಾನಕ್ಕೆ ಲಾಬಿ – ಕಾಂಗ್ರೆಸ್ ಪಾಳಯದಲ್ಲಿ ಜೋರಾಯ್ತು ಫೈಟ್!

ಕೊಟ್ಟರೇ ಮುಖ್ಯಮಂತ್ರಿ ಹುದ್ದೆ ನೀಡಿ, ಇಲ್ಲದಿದ್ದರೆ ಯಾವುದೇ ಸಚಿವ ಸ್ಥಾನ ಬೇಡ. ಸಿಎಂ ಸ್ಥಾನ ಇಲ್ಲದಿದ್ದರೆ ಸರ್ಕಾರದ ಭಾಗವಾಗಲ್ಲ. ಸಿಎಂ ಹುದ್ದೆಯ ಖಚಿತ ಭರವಸೆ ನೀಡಿದರೆ ಮಾತ್ರ ರಾಷ್ಟ್ರ ರಾಜಧಾನಿ ದಿಲ್ಲಿಗೆ ಬರುತ್ತೇನೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಡ್ಡಿ ಮುರಿದಂತೆ ಹೇಳಿರುವ ಮಾತು.

ಇಬ್ಬರ ನಡುವೆ ಅಧಿಕಾರ ಹಂಚಿಕೆ ಸೂತ್ರವನ್ನು ಹೈಕಮಾಂಡ್‌ ಪ್ರಸ್ತಾಪಿಸಿದೆ. ಆದರೆ, ಅಧಿಕಾರ ಹಂಚಿಕೆ ಸೂತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಒಪ್ಪುತ್ತಿಲ್ಲ. ಛತ್ತೀಸ್‌ಗಢ ಹಾಗೂ ರಾಜಸ್ಥಾನದ ಉದಾಹರಣೆಗಳನ್ನು ಡಿಕೆ ಶಿವಕುಮಾರ್‌ ಹೈಕಮಾಂಡ್‌ಗೆ ನೀಡುತ್ತಿದ್ದಾರೆ. ಅಲ್ಲಿ ಕೂಡ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆಯಾಗಿತ್ತು. ಆದರೆ, ಶಾಸಕರ ಬೆಂಬಲ ಇದೆ ಎಂದು ಅಲ್ಲಿನ ಮುಖ್ಯಮಂತ್ರಿಗಳು ಬೇರೆಯವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿಲ್ಲ ಎಂದು ಡಿ.ಕೆ ಶಿವಕುಮಾರ್‌ ಹೈಕಮಾಂಡ್‌ ಮುಂದೆ ವಾದ ಮಂಡಿಸುತ್ತಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಒಲವಿದೆ. ಆದ್ದರಿಂದ ಶಾಸಕರ ಅಭಿಪ್ರಾಯ, ಸಮುದಾಯದ ಬೆಂಬಲ ಆಧರಿಸಿ ತೀರ್ಮಾನ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ಭವಿಷ್ಯದ ದೃಷ್ಟಿಯಿಂದ ಸಿದ್ದರಾಮಯ್ಯ ಅವರನ್ನು ಬಿಟ್ಟು ಬೇರೆಯವರನ್ನು ಸಿಎಂ ಸ್ಥಾನ ಮಾಡಬೇಕೆಂಬ ಆಸಕ್ತಿ ಇದೆ ಎಂದು ಮೂಲಗಳು ತಿಳಿಸಿವೆ. ಆದ್ದರಿಂದ ಡಿಕೆ ಶಿವಕುಮಾರ್‌ ಅವರ ಮೇಲೆ ಖರ್ಗೆ ಒಲವು ಇದೆ ಎಂದು ಹೇಳಲಾಗುತ್ತಿದೆ.

suddiyaana