ಹಳ್ಳಿ ಹೈದನ ಗೆಟಪ್ನಲ್ಲಿ ಗಿಲ್ಲಿ ನಟ – ಸರ್ವೇ ನಂಬರ್ 45 ಸಿನಿಮಾದಲ್ಲಿ ಗಿಲ್ಲಿ ಹೀರೋ

ಬಿಗ್ ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ ಈಗ ಸಖತ್ ಬ್ಯುಸಿಯಾಗಿದ್ದಾರೆ. ಮೇಲಿಂದ ಮೇಲೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಗಿಲ್ಲಿ ನಟ ಇದೀಗ ಅಭಿಮಾನಿಗಳಿಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ. ಮೊದಲೇ ಪಕ್ಕಾ ಹಳ್ಳಿ ಶೈಲಿಯಲ್ಲೇ ಮಾತನಾಡುತ್ತಿರುವ ಗಿಲ್ಲಿ ಈಗ ತನ್ನ ಹೊಸ ಸಿನಿಮಾದಲ್ಲೂ ಹಳ್ಳಿ ಹೈದನ ಗೆಟಪ್ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.
ಇದನ್ನೂ ಓದಿ:ಧಕ್ ಧಕ್ ಬೆಡಗಿ ಕನಸಲ್ಲಿ ಕಾಡುತ್ತಿದ್ದ ಕ್ರಿಕೆಟರ್ – ಮಾಧುರಿ ದೀಕ್ಷಿತ್ಗೆ ಸುನಿಲ್ ಗವಾಸ್ಕರ್ ಮೇಲೆ ಕ್ರಷ್
ಕಾಮಿಡಿ ನಟನಾಗಿ.. ಪಕ್ಕಾ ಹಳ್ಳಿ ಹುಡುಗನಾಗಿ, ಇದ್ದದ್ದನ್ನ ಇದ್ದ ಹಾಗೆ ಹೇಳುವ ಗ್ರಾಮೀಣ ಪ್ರತಿಭೆ ಗಿಲ್ಲಿ ನಟ ಬಿಗ್ಬಾಸ್ ವಿನ್ ಆದಮೇಲೆ ಬೇರೆ ಲೆವೆಲ್ಗೆ ಹೋಗಿದ್ದರು. ಗಿಲ್ಲಿ ನಟ ಈಗ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಗಿಲ್ಲಿಯನ್ನು ನೋಡಲು ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಇದರ ಮಧ್ಯೆ ಗಿಲ್ಲಿ ನಟ ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ಕೊಟ್ಟಿದ್ದಾರೆ.
ಹಳ್ಳಿ ಸೊಗಡಿನ ಕಥೆ ಇರುವ ಹೊಸ ಸಿನಿಮಾದಲ್ಲಿ ಗಿಲ್ಲಿ ನಟ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ‘ಸರ್ವೇ ನಂಬರ್ 45’ ಎಂದು ಹೆಸರು ಇಡಲಾಗಿದೆ. ಈ ಸಿನಿಮಾ ಹೀರೋ ಆಗಿರುವ ಗಿಲ್ಲಿ ನಟ ಹಳ್ಳಿ ಹೈದನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರನಂದಿ ಸಿನಿ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆನಂದ್ ಎಸ್.ವಿ. ಮತ್ತು ಹನುಮಂತರೆಡ್ಡಿ ಎಸ್.ಆರ್. ಅವರು ಸಹ-ನಿರ್ಮಾಪಕರಾಗಿದಾರೆ. ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಅವರು ‘ಸರ್ವೇ ನಂಬರ್ 45’ ಸಿನಿಮಾಗೆ ಕಥೆ, ಚಿತ್ರಕಥೆ ಹಾಗೂ ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ವಿಶಾಲ್ ಅಲಾಪ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ದೀಪಕ್ ಕುಮಾರ್ ಜಿ.ಕೆ. ಅವರ ಛಾಯಾಗ್ರಹಣ, ರಾಮಾರ್ಜುನ್ ಅವರ ಸಂಕಲನ, ಚಕ್ರಿ ಕಿರಿಸಾವೆ ಅವರ ಸಂಭಾಷಣೆ, ರಘು ಆರ್.ಜೆ. ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.
ಹುಣಸೂರು ಸುತ್ತಮುತ್ತ ಶೂಟಿಂಗ್ ನಡೆದಿದೆ. ಸಿನಿಮಾದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ. ಕಿರುತೆರೆಯ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್, ಮಹಾನಟಿ ಖ್ಯಾತಿಯ ಪ್ರಾವಲಿಕ, ಮೌನ ಹಾಸನ್, ಕುಮಾರ್ ಅರಸೇಗೌಡ, ಮಾಲತಿ, ಮನು ಕಲ್ಲಹಳ್ಳಿ, ಶಿವಣ್ಣ, ಜ್ಯೂ. ದ್ವಾರಕೀಶ್, ಮಂಜು, ರಾಘವೇಂದ್ರ ಕುಮಾರ್, ವೀರೇಶ್, ಹನುಮಂತಪ್ಪ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರೈತನ ಜಮೀನಿಗೆ ಸರ್ಕಾರವು ಸರ್ವೇ ನಂಬರ್ ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಅನೇಕ ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ ಎಂಬ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ ಎಂಬ ಸಂದೇಶವನ್ನು ಈ ಚಿತ್ರದ ಮೂಲಕ ನೀಡಲಾಗುವುದು ಎಂದು ತಂಡ ಹೇಳಿದೆ.

ನೋಡಿರಿ

