ಬಿಎಂಟಿಸಿ ಚಿಲ್ಲರೆ ರಗಳೆ ಅಂತ್ಯವಾಗೋ ಕಾಲ ಬಂದೇ ಬಿಡ್ತಾ? – ಏನಿದು ಹೊಸ ಪ್ಲಾನ್?‌

ಬಿಎಂಟಿಸಿ ಚಿಲ್ಲರೆ ರಗಳೆ ಅಂತ್ಯವಾಗೋ ಕಾಲ ಬಂದೇ ಬಿಡ್ತಾ? – ಏನಿದು ಹೊಸ ಪ್ಲಾನ್?‌

ಇದು ಡಿಜಿಟಲ್‌ ಯುಗ.. ಕೈಯಲ್ಲಿ ಫೋನ್‌ ಒಂದು ಇದ್ರೆ ಸಾಕು.. ಎಲ್ಲಾ ಕೆಲಸಗಳು ಕುಳಿತಲ್ಲೇ ಆಗುತ್ತೆ. ಎಲ್ಲಾ ಕಡೆಗಳಲ್ಲೂ ಫೋನ್‌ ಪೇ, ಗೂಗಲ್‌ ಪೇ ಇದ್ದೇ ಇರುತ್ತೆ. ಹೀಗಾಗಿ ಕೈಯಲ್ಲಿ ಪರ್ಸ್‌ ತೆಗೆದುಕೊಂಡು ಹೋಗುವ ಅವಶ್ಯಕತೆ ಇರಲ್ಲ. ಇನ್ನುಮುಂದೆ ಬಿಎಂಟಿಸಿ ಬಸ್‌ಗಳಲ್ಲೂ ಕ್ಯೂಆರ್ ಕೋಡ್​ನ ಚಮತ್ಕಾರ ಮಾಡಲಿದೆ.

ಹೌದು, ಬಿಎಂಟಿಸಿಯಲ್ಲಿ ಹೀಗೊಂದು ಕಾಲ ಇತ್ತು ಟಿಕೆಟ್​.. ಟಿಕೆಟ್​ ಅಂತ ಕಂಡಕ್ಟರ್​ ಜನರ ಬಳಿ ಬರ್ತಾ ಇದ್ರು.. ಆದ್ರೆ ಬಿಎಂಟಿಸಿಯಲ್ಲಿ ಈ ಸಮಸ್ಯೆ ಅಂತ್ಯವಾಗೋ ಲಕ್ಷಣ ಕಾಣಿಸ್ತಿದೆ. ಇದಕ್ಕೆಲ್ಲಾ ಕಾರಣ ಕ್ಯೂಆರ್ ಕೋಡ್​ನ ಚಮತ್ಕಾರ. ಬಿಎಂಟಿಸಿಯಲ್ಲಿ ಅಧಿಕ ಪ್ರಯಾಣಿಕರು ಕ್ಯೂಆರ್ ಕೋಡ್ ಬಳಸಿಯೇ ಪ್ರಯಾಣಿಸುತ್ತಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಸ್ಮಾರ್ಟ್‌ ಫೋನ್‌ ಗೀಳು! – ಆಹಾರ ಬದಲು ಐಪ್ಯಾಡ್ ರೋಸ್ಟ್ ಮಾಡೇ ಬಿಟ್ಳು!

ಬಿಎಂಟಿಸಿ ಬಸ್‌ನಲ್ಲಿ ನಿತ್ಯ 35 ಲಕ್ಷಕ್ಕೂ ಅಧಿಕ‌ ಜನ ಸಂಚರಿಸ್ತಿದ್ದಾರೆ. ಈ ಪೈಕಿ 20 ಲಕ್ಷ ಮಹಿಳೆಯರು ನಿತ್ಯ ಉಚಿತವಾಗಿ ಸಂಚರಿಸಿದ್ರೆ. ಉಳಿದ 15 ಲಕ್ಷ ಜನ ಹಣ ಕೊಟ್ಟು ಟಿಕೆಟ್ ಪಡೆದು ಓಡಾಡ್ತಿದ್ದಾರೆ. ಇದರಲ್ಲಿ ಒಂದು ಲಕ್ಷ ಜನ ಟಿಕೆಟ್ ಪಡೆಯಲು ಯುಪಿಐ ಮೊರೆ ಹೋಗಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆಯಿಲ್ಲದೆ ಟಿಕೆಟ್ ಪಡೆಯಬಹುದು ಅಂತಾರೆ ಪ್ರಯಾಣಿಕರು. ಯುಪಿಐ ಪೇಮೆಂಟ್ ಶುರು ಮಾಡಿದಾಗಿನಿಂದ ಜನರಿಂದ ಅದ್ಭುತ ರೆಸ್ಪಾನ್ಸ್ ವ್ಯಕ್ತವಾಗ್ತಿದ್ದು ಆದಾಯವೂ ಹೆಚ್ಚಾಗ್ತಿದೆಯಂತೆ.

ನವೆಂಬರ್​ನಲ್ಲಿ ಯುಪಿಐ ಟಿಕೆಟ್ ಖರೀದಿಯಿಂದ ₹5.54 ಕೋಟಿ ಆದಾಯ ಬಿಎಂಟಿಸಿಗೆ ಸಂಗ್ರಹವಾಗಿದೆ. ಇದು‌ ಡಿಸೆಂಬರ್​ನಲ್ಲಿ ₹5.91ಕೋಟಿ ಏರಿಕೆಯಾಗಿತ್ತು. ಕಳೆದ ತಿಂಗಳು ₹5.96ಕೋಟಿ ಡಿಜಿಟಲ್ ಪೇಮೆಂಟ್ ಮೂಲಕ ಆದಾಯ ಬಂದಿದೆ. ಟಿಕೆಟ್ ಖರೀದಿಯ ಜೊತೆ ದಿನದ ಹಾಗೂ ತಿಂಗಳ ಪಾಸ್ ಖರೀದಿಯ ವೇಳೆಯೂ ಪ್ರಯಾಣಿಕರು ಹೆಚ್ಚಾಗಿ ಡಿಜಿಟಲ್ ಪೇಮೆಂಟ್ ಮಾಡ್ತಿದ್ದಾರಂತೆ. ಪ್ರತಿ ತಿಂಗಳು ಒಂದು ಲಕ್ಷ ತಿಂಗಳ ಪಾಸ್ ನೀಡಲಾಗುತ್ತೆ. ಈ ವೇಳೆ 50 ಸಾವಿರ ಜನ ಯುಪಿಐ ಪೇಮೆಂಟ್ ಮಾಡ್ತಿದ್ದು, ಇನ್ನೂ, ಕೆಲವು ಕಡೆ ಚಿಲ್ಲರೆ ಸಮಸ್ಯೆಯಿದ್ದು, ಇದಕ್ಕೆ ಮುಕ್ತಿ ಹಾಡಲು ಶೀಘ್ರದಲ್ಲಿಯೇ ಇಟಿಎಂ ಮೆಷಿನ್ ನಲ್ಲಿ ಕ್ಯೂಆರ್ ಕೋಡ್ ಜನರೇಟ್ ಮಾಡಲು ಬಿಎಂಟಿಸಿ ತಯಾರಿ ನಡೆಸ್ತಿದೆ. ಇದರಿಂದ ಜನರಿಗೆ ಹಾಗೂ ಕಂಡೆಕ್ಟರ್​ಗೆ ಮತ್ತಷ್ಟು ಅನುಕೂಲವಾಗಲಿದ್ದು, ಇನ್ನೂ ಹೆಚ್ಚಿನ ಜನ ಡಿಜಿಟಲ್ ಪೇಮೆಂಟ್ ಮೊರೆಹೋಗೋ ಸಾಧ್ಯತೆಯಿದೆ.

Shwetha M