ಗಣೇಶೋತ್ಸವದ ಲಾಟರಿ ಟಿಕೆಟ್‌ ಖರೀದಿಸಲು ಮುಗಿಬಿದ್ದ ಜನ – ಒಂದು ದಿನದಲ್ಲಿ ಬರೋಬ್ಬರಿ 1 ಲಕ್ಷ ಟಿಕೆಟ್‌ ಸೇಲ್!‌

ಗಣೇಶೋತ್ಸವದ ಲಾಟರಿ ಟಿಕೆಟ್‌ ಖರೀದಿಸಲು ಮುಗಿಬಿದ್ದ ಜನ – ಒಂದು ದಿನದಲ್ಲಿ ಬರೋಬ್ಬರಿ 1 ಲಕ್ಷ ಟಿಕೆಟ್‌ ಸೇಲ್!‌

ಲಾಟರಿ ಟಿಕೆಟ್ ಅನ್ನೋದೇ ಹಾಗೆ. ಕಡುಬಡವನನ್ನ ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡುತ್ತದೆ. ಒಂದೊತ್ತಿನ ಊಟಕ್ಕೆ ಪರದಾಡುತ್ತಿದ್ದವರು ದಿಢೀರ್ ಶ್ರೀಮಂತರಾಗಿಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಲಾಟರಿ ಗೆದ್ದಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಗಳಾಗಿರುವ ಬಗ್ಗೆ ನಾವು ಕೇಳಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ – ಗಣೇಶ ಹಬ್ಬ ಬರುತ್ತಿದೆ. ಹಲವು ಸಂಘ-ಸಂಸ್ಥೆಗಳು ಜನರನ್ನು ಸೆಳೆಯಲು ಹಬ್ಬದ ವಿಶೇಷವಾಗಿ ಲಾಟರಿ ಸಹ ಇಟ್ಟು ಹಬ್ಬ ಮುಗಿದ ನಂತರ ಡ್ರಾ ಮಾಡಿ ಬಹುಮಾನ ಘೋಷಿಸುತ್ತಿವೆ. ಇದೀಗ ಗೌರಿ – ಗಣೇಶ ಹಬ್ಬದ ಅಂಗವಾಗಿ ಲಾಟರಿಯನ್ನು ಇಟ್ಟು ದೊಡ್ಡ ಮಟ್ಟದ ಬಹುಮಾನವನ್ನು ಘೋಷಿಸಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಸಾವಿರಾರು ಜನರು ಕೆಲಸ ಕಾರ್ಯಬಿಟ್ಟು ಟಿಕೆಟ್‌ ಖರೀದಿಸಲು ಜಮಾಯಿಸಿದ್ದಾರೆ.

ಗೋವಾ ರಾಜ್ಯದ ಪಣಜಿಯ ಕೆಪೆಮ್ ನಲ್ಲಿ ಪ್ರತಿ ವರ್ಷ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ಗಣೇಶೋತ್ಸವ ಆಚರಿಸುತ್ತದೆ. ಈ ವೇಳೆ ಬರುವ ಭಕ್ತರಿಗೆ ಲಾಟರಿಯನ್ನು ಇಟ್ಟು ದೊಡ್ಡ ಮೊತ್ತದ ಬಹುಮಾನ ನೀಡುತ್ತಾ ಬಂದಿದೆ.  ಈ ಬಾರಿ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ 36 ನೇ ವಾರ್ಷಿಕ ಗಣೇಶೋತ್ಸವ ಆಚರಣೆ ಮಾಡುತ್ತಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಈ ಸಮಿತಿ ಲಾಟರಿ ಬಹುಮಾನವನ್ನು ಇಟ್ಟಿದೆ. ಲಾಟರಿ ಟಿಕೆಟ್‌ ಖರೀದಿಸಲು ರಾಜ್ಯ, ಹೊರರಾಜ್ಯಗಳಿಂದ ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಬಾಲ ತುಳಿದ ಸಿಟ್ಟೋ.. ಬಾಲಕನ ಮೇಲೆ ದ್ವೇಷವೋ? – ಹುಡುಕಿಕೊಂಡು ಬಂದು 9 ಬಾರಿ ಕಚ್ಚಿಹೋದ ವಿಷಸರ್ಪ..!

ಕಳೆದ ಭಾನುವಾರ ಸಂಜೆ ಲಾಟರಿ ಉದ್ಘಾಟನೆ ಮಾಡಲಾಗಿತ್ತು. ಸೋಮವಾರ ಮುಂಜಾನೆಯಿಂದಲೇ ಲಾಟರಿ ಟಿಕೆಟ್‌ ಖರೀದಿಸಲು ಸಾವಿರಾರು ಜನ ಮುಗಿಬಿದ್ದಿದ್ದಾರೆ. ಜನರು ಕೆಲಸ ಕಾರ್ಯ ಬಿಟ್ಟು ಟಿಕೆಟ್‌ ಖರೀದಿಸಲು ಇಡೀ ದಿನ ಕಿಲೋಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

ಲಾಟರಿ ಬಹುಮಾನ ಏನು ಗೊತ್ತಾ?

ಪ್ರತಿ ವರ್ಷದಂತೆ ಈ ವರ್ಷ ಕೂಡ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ಬಂಪರ್‌ ಬಹುಮಾನವನ್ನು ಘೋಷಿಸಿದೆ. ಈ ಬಾರಿಯ ಗಣೇಶೋತ್ಸವದ ಲಾಟರಿಯಲ್ಲಿ 10 ಹೈ ಎಂಡ್ ಕಾರುಗಳು, 10 ಸ್ಕೂಟರ್ ಗಳು, ಜೊತೆಗೆ ಈ 20 ಬಂಪರ್ ಬಹುಮಾನ ಗೆಲ್ಲುವವರಿಗೆ 70 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಘೋಷಣೆ ಮಾಡಿದೆ.

ಒಂದು ದಿನದಲ್ಲಿ ಟಿಕೆಟ್‌ ಖರೀದಿಯಾಗಿದ್ದು ಎಷ್ಟು?

ಗಣೇಶೋತ್ಸವ ಉತ್ಸವ ಸಮಿತಿ ಬಂಪರ್‌ ಬಹುಮಾನ ಘೋಷಿಸುತ್ತಿದ್ದಂತೆ ಸಾವಿರಾರು ಮಂದಿ ಲಾಟರಿ ಟಿಕೆಟ್‌ ಖರೀದಿಸಲು ಜಮಾಯಿಸುತ್ತಿದ್ದಾರೆ. ಒಂದು ಟಿಕೆಟ್‌ಗೆ 300 ರೂಪಾಯಿ ದರ ನಿಗದಿಪಡಿಸಲಾಗಿದೆ. ಒಂದೇ ದಿನದಲ್ಲಿ ಬರೋಬ್ಬರಿ 1 ಲಕ್ಷ ಲಾಟರಿ ಟಿಕೆಟ್‌ ಸೇಲ್‌ ಆಗಿದೆ.

ಜನರು ಇಂದೂ ಕೂಡ ಟಿಕೆಟ್ ಕೊಳ್ಳಲು ಸಮತಿ ಮುಂದೆ ನಿಂತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಸಮಿತಿ ಸದಸ್ಯರು ಹರಸಾಹಸ ಪಡುವಂತಾಯಿತು. ಇನ್ನು ಒಂದು ಲಕ್ಷ ಲಾಟರಿ ಒಂದೇ ದಿನದಲ್ಲಿ ಖರ್ಚಾದ್ದರಿಂದ ಲಾಟರಿ ಮಾರಾಟವನ್ನು ನಿಲ್ಲಿಸಲಾಗಿದ್ದು, ರಾಜ್ಯ ಹೊರ ರಾಜ್ಯದಿಂದಲೂ ಆಗಿಮಿಸಿದ್ದ ಜನ ಲಾಟರಿ ಟಿಕೆಟ್ ಸಿಗದೆ ಹಿಂದಿರುಗಿದ್ದಾರೆ.

suddiyaana