ಜಂಬೂಸವಾರಿಗೆ ಹೊಸ ಆನೆಗಳ ಹುಡುಕಾಟ – ಆಗಸ್ಟ್ 23ರಿಂದ ಗಜಪಯಣ ಆರಂಭ

ಜಂಬೂಸವಾರಿಗೆ ಹೊಸ ಆನೆಗಳ ಹುಡುಕಾಟ –  ಆಗಸ್ಟ್ 23ರಿಂದ ಗಜಪಯಣ ಆರಂಭ

ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ನಡೆಯಲಿರುವ ವಿಜಯದಶಮಿ ಮೆರವಣಿಗೆಗೆ ಇನ್ನೂ 60 ದಿನಗಳು ಬಾಕಿಯಿವೆ. ಹೀಗಾಗಿ ಜಂಬೂ ಸವಾರಿಗಾಗಿ ಆನೆಗಳ ಮೊದಲ ತಂಡ ಇನ್ನೊಂದು ತಿಂಗಳ ಒಳಗಾಗಿ ಮೈಸೂರು ನಗರಕ್ಕೆ ಆಗಮಿಸಲಿವೆ. ಹುಣಸೂರಿನ ವೀರನಹೊಸಹಳ್ಳಿಯಿಂದ ದಸರಾ ಆನೆಗಳ ‘ಗಜಪಯಣ’ ಆಗಸ್ಟ್ 23ರಿಂದ ಆಗಸ್ಟ್ 25ರ ನಡುವೆ ನಡೆಯಲಿದೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ!

ಅಕ್ಟೋಬರ್ 24ರಂದು ವಿಜಯ ದಶಮಿ ಮೆರವಣಿಗೆ ನಡೆಯಲಿದೆ. ಹಿಂದಿನ ವರ್ಷದಂತೆ ಅಭಿಮನ್ಯುವೇ ಚಿನ್ನದ ಅಂಬಾರಿ ಹೊತ್ತು ಸಾಗುವ ನಿರೀಕ್ಷೆ ಇದೆ. ಅರ್ಜುನ ಈ ಬಾರಿಯ ದಸರಾ ಮೆರವಣಿಗೆಗೆ ಹಾಜರಾಗುವುದು ಅನುಮಾನ. ಇವನ ಜೊತೆಗೆ ಗೋಪಾಲಸ್ವಾಮಿ, ಗಜೇಂದ್ರ ಕೂಡ ಕೂಡ ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ. ದಸರಾ ಮೆರವಣಿಗೆಗಾಗಿ ಹೊಸ ಆನೆಗಳ ಹುಡುಕಾಟ ಮುಂದುವರೆದಿದೆ. ಡಿಸಿಎಫ್ (ವನ್ಯಜೀವಿ) ಸೌರಭ್ ಕುಮಾರ್ ಮತ್ತು ಇತರ ಅರಣ್ಯಾಧಿಕಾರಿಗಳನ್ನು ಒಳಗೊಂಡ ತಂಡವು ಕಳೆದ ವರ್ಷ ದಸರಾ ಆಚರಣೆಯಲ್ಲಿ ಭಾಗವಹಿಸಿದ್ದ ಆನೆಗಳನ್ನು ಪರಿಶೀಲಿಸಲು ಆನೆ ಶಿಬಿರಗಳಿಗೆ ಭೇಟಿ ನೀಡುತ್ತಿದೆ. ಸಂಭಾವ್ಯ ಹೊಸ ಆನೆಗಳ ಬಗ್ಗೆ ಅಧಿಕಾರಿಗಳು ಮಾವುತರಿಂದ ಪ್ರತಿಕ್ರಿಯೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ನಾಗರಹೊಳೆ ಮೀಸಲು ಅರಣ್ಯದ ಭೀಮನಕಟ್ಟೆ ಮತ್ತು ಮತ್ತಿಗೋಡು ಆನೆ ಶಿಬಿರಗಳಿಗೆ ಭೇಟಿ ನೀಡಿ ಕಳೆದ ವರ್ಷದ ದಸರಾದಲ್ಲಿ ಪಾಲ್ಗೊಂಡಿದ್ದ ಆನೆಗಳ ಪರಿಶೀಲನೆ ನಡೆಸಲಾಗಿದೆ. ಬಂಡೀಪುರದ ರಾಮಾಪುರ ಆನೆ ಶಿಬಿರ ಹಾಗೂ ಕೊಡಗಿನ ದುಬಾರೆ ಶಿಬಿರಕ್ಕೂ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಲಿದೆ. ಈ ಮಧ್ಯೆ, ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷೆ ನಡೆಸುವಂತೆ ಶಿಬಿರದ ವೈದ್ಯರಿಗೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

suddiyaana