ದ್ವಾರಕೀಶ್ ಮತ್ತು ವಿಷ್ಣುವರ್ದನ್ ನಡುವೆ ಸ್ನೇಹದಲ್ಲಿ ಬಿರುಕು ಮೂಡಿದ್ದು ಹೇಗೆ?
ಸ್ನೇಹಕ್ಕೆ ಸವಾಲ್ ಹಾಕಿ ಸೋತರೂ ಕೈ ಬಿಡಲಿಲ್ಲ ಆಪ್ತಮಿತ್ರ

ದ್ವಾರಕೀಶ್ ಮತ್ತು ವಿಷ್ಣುವರ್ದನ್ ನಡುವೆ ಸ್ನೇಹದಲ್ಲಿ ಬಿರುಕು ಮೂಡಿದ್ದು ಹೇಗೆ?ಸ್ನೇಹಕ್ಕೆ ಸವಾಲ್ ಹಾಕಿ ಸೋತರೂ ಕೈ ಬಿಡಲಿಲ್ಲ ಆಪ್ತಮಿತ್ರ

ಸ್ಯಾಂಡಲ್‌ವುಡ್ ಪ್ರಚಂಡ ಕುಳ್ಳನ ಚಂದನವನಕ್ಕೆ ನೀಡಿದ ಕೊಡುಗೆ ಅಪಾರ. ನಟನಾಗಿ, ಹಾಸ್ಯನಟನಾಗಿ, ಪೋಷಕ ನಟನಾಗಿ, ನಿರ್ದೇಶಕ, ನಿರ್ಮಾಪಕ ಹೀಗೆ ಕನ್ನಡಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದವರು ದ್ವಾರಕೀಶ್. ಹಿರಿಯ ನಟನ ಅಗಲಿಕೆ ಸಂದರ್ಭದಲ್ಲಿ ನೆನಾಪಾಗೋದೇ ಸಾಹಸಸಿಂಹ ವಿಷ್ಣುವರ್ದನ್ ಅವರು. ಹೌದು.  ರಕ್ತ ಸಂಬಂಧಕ್ಕಿಂತ ದೊಡ್ಡದಾಗಿತ್ತು ಇವರಿಬ್ಬರ ಸ್ನೇಹ ಸಂಬಂಧ.

ಇದನ್ನೂ ಓದಿ: 

ಕನ್ನಡ ಚಿತ್ರರಂಗದಲ್ಲಿ 70ರ ದಶಕದಲ್ಲಿ ಸದ್ದು ಮಾಡಿದ ಸಿನಿಮಾ ಕಿಟ್ಟು ಪುಟ್ಟು. ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಮೋಡಿ ಮಾಡಿತ್ತು. 1977ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ವಿಷ್ಣುವರ್ಧನ್ ಕಿಟ್ಟು ಪಾತ್ರದಲ್ಲಿ, ದ್ವಾರಕೀಶ್ ಪುಟ್ಟು ಮತ್ತು ಕುಟ್ಟಿ ಎಂಬ ದ್ವಿಪಾತ್ರದಲ್ಲಿ ನಟಿಸಿದ್ದರು. ತಮ್ಮ ಹಾಸ್ಯದ ಮೂಲಕ ದ್ವಾರಕೀಶ್ ಅವರು ಸಿನಿ ರಸಿಕರ ಮನಸ್ಸು ಗೆದ್ದಿದ್ದರು. ಅಷ್ಟೇ ಅಲ್ಲ, ವಿಷ್ಣುವರ್ದನ್ ಮತ್ತು ದ್ವಾರಕೀಶ್ ಅವರ ನಡುವೆ ಸ್ನೇಹವೆಂಬ ಬಂಧವೂ ಶುರುವಾಗಿತ್ತು. ಇದಕ್ಕೂ ಮೊದಲು ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಒಟ್ಟಾಗಿ ನಟಿಸಿದರು. ಅಲ್ಲಿಂದ ಶುರುವಾದ ಇವರ ಸ್ನೇಹ ಕಿಟ್ಟು ಪುಟ್ಟು ಸಿನಿಮಾದಲ್ಲಿ ಮತ್ತಷ್ಟೂ ಸ್ಟ್ರಾಂಗ್ ಆಯ್ತು. ದ್ವಾರಕೀಶ್ ಮಾಡಿದ 50 ಚಿತ್ರಗಳಲ್ಲಿ 19 ಸಿನಿಮಾಗಳಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಮಾಡಲು ವಿಷ್ಣುವರ್ಧನ್ ಡೇಟ್ಸ್​​​ಗಾಗಿ ನಾಲ್ಕು ವರ್ಷ ಕಾದಿದ್ದರು ದ್ವಾರಕೀಶ್. ಆದರೆ, ಇವರಿಬ್ಬರ ಸ್ನೇಹಕ್ಕೆ ಹುಳಿಹಿಂಡಿದ್ದು ಅದೊಂದು ವರದಿ. ಆಗಷ್ಟೇ ‘ನೀ ತಂದ ಕಾಣಿಕೆ’ ಸಿನಿಮಾ ಬಿಡುಗಡೆ ಆಗಿ ಸೋತಿತ್ತು. ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣುವರ್ಧನ್ ಹೇಳಿರುವುದಾಗಿ ಪತ್ರಿಕೆಯಲ್ಲಿ ವರದಿ ಆಗಿತ್ತು. ಇದರಿಂದ ದ್ವಾರಕೀಶ್ ಮನಸಿಗೆ ಆಘಾತವಾಗಿತ್ತು. ಹಿಂದೆ ಮುಂದೆ ನೋಡದೇ ದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿಯೇ ಬಿಟ್ಟರು. ಅದರಲ್ಲಿ ‘ಮೊದಮೊದಲು, ಅಂಕಲ್ ಅನ್ನುತ್ತಿದ್ದಮ ನಂತರ ಸರ್ ಎನ್ನುತ್ತಿದ್ದ, ಆ ನಂತರ ಏನೋ ದ್ವಾರ್ಕಿ ಎಂದು ನನ್ನ ಹೆಗಲ ಮೇಲೆಯೇ ಕೈ ಹಾಕುವಷ್ಟು ಸಲುಗೆ ಬೆಳಸಿಕೊಂಡ. ನಾನೂ ಕೂಡಾ, ಹುಡುಗ ಬೆಳ್ಳಗೆ ಹ್ಯಾಂಡ್ಸಮ್ ಆಗಿದ್ದಾನೆ, ನನ್ನ ಚಿತ್ರಗಳಿಗೆ ಸೂಕ್ತವಾದ ನಾಯಕನಾಗುತ್ತಾನೆ ಎಂದು ಎಲ್ಲವನ್ನೂ ಸಹಿಸಿಕೊಂಡೆ. ಆದರೆ ಆತನ ನಕರಾಗಳು ದಿನೇ ದಿನೇ ನನ್ನ ತಾಳ್ಮೆಯನ್ನು ಪರೀಕ್ಷಿಸುವಂತೆ ಮಾಡುತ್ತಿತ್ತು.. ರಜನಿಕಾಂತ್ ನಂತೆ ನನಗೂ ಒಂದು ತಮಿಳು ಚಿತ್ರವನ್ನು ಮಾಡು ಎಂದು ಪೀಡಿಸುತ್ತಾನೆ.  ರಜನೀಕಾಂತ್ ಎಲ್ಲಿ ಇವನೆಲ್ಲಿ. ಇವನಿಗಾಗಿ ನಾನು ಎಷ್ಟೆಲ್ಲಾ ಮಾಡಿದ್ದೇನೆ. ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು. ‘ನಾನು ರಜನೀಕಾಂತ್ ಶ್ರೀದೇವಿ ಯಂತಹ ಸ್ಟಾರ್ ಕಲಾವಿದರನ್ನು ಹಾಕಿಕೊಂಡು ಹಿಂದಿ, ತಮಿಳು ಸಿನಿಮಾಗಳನ್ನು ಮಾಡಿದ ಪ್ರೊಡ್ಯೂಸರ್. ಇವನಿಲ್ಲದೆಯೂ ನಾನು ಸಿನಿಮಾ ಮಾಡಿ ಗೆಲ್ಲ ಬಲ್ಲೆ. ಆದರೆ ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ. ಅವನು ನನಗೆ ಮಾಡಿದ ದ್ರೋಹವನ್ನೇ ಕಥಾವಸ್ತುವನ್ನಾಗಿ ಇಟ್ಟುಕೊಂಡು ಸ್ಕ್ರಿಪ್ಟ್ ಮಾಡಿಸುತ್ತಿದ್ದೇನೆ ಸ್ಕ್ರಿಪ್ಟ್ ರೈಟರ್ ಕ್ಲೈಮ್ಯಾಕ್ಸ್ ನಲ್ಲಿ ಬೆನ್ನಿಗೆ ಚೂರಿ ಹಾಕುವಂತೆ ಮಾಡಿದ್ದಾರೆ. ಇಲ್ಲ, ನೇರವಾಗಿ ಎದೆಗೇ ಚುಚ್ಚುವಂತೆ ಬದಲಾಯಿಸುತ್ತಿದ್ದೇನೆ. ಚಿತ್ರಕಥೆ ಫೈನಲ್ ಆದ ನಂತರ ಕಲಾವಿದರು ಮತ್ತು ತಾಂತ್ರಿಕ ವರ್ಗದ ಪಟ್ಟಿಯನ್ನು ಬಿಡುಗಡೆ ಮಾಡುತ್ತೇನೆ’ ಎಂದು ದ್ವಾರಕೀಶ್ ಹೇಳಿದ್ದರು. ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು. ವಿಷ್ಣುವರ್ಧನ್ ಇಲ್ಲದೆ ಬೇರೆ ಬೇರೆ ಹೀರೋಗಳ ಜೊತೆ ದ್ವಾರಕೀಶ್ ಅವರು ಸಿನಿಮಾ ಮಾಡಿದ್ರು. ಅಚ್ಚರಿಯೆಂಬಂತೆ ಒಂದರ ಹಿಂದೊಂದರಂತೆ ಸತತವಾಗಿ 18 ಸಿನಿಮಾಗಳು ಕೂಡಾ ಫ್ಲಾಪ್ ಆಯಿತು. ಅವರು ವೃತ್ತಿಬದುಕಿನಲ್ಲಿ ಸೋತು ಸುಣ್ಣವಾಗುವಂತೆ ಮಾಡಿತ್ತು. ದ್ವಾರಕೀಶ್ ಸ್ನೇಹಿತನ ಮೇಲೆ ಸಿಟ್ಟಿನಿಂದ ಎಲ್ಲವನ್ನೂ ಕಳೆದುಕೊಂಡು ಹತಾಶರಾಗಿದ್ದರು. ಆಗ ಜೊತೆಯಾಗಿ ನಿಂತಿದ್ದೇ ಆಪ್ತಮಿತ್ರ ವಿಷ್ಣುವರ್ದನ್.

‘ಆಪ್ತಮಿತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿ ಸಿನಿಮಾ ಸೂಪರ್ ಹಿಟ್ ಆಯಿತು. ದ್ವಾರಕೀಶ್ ಬದುಕಿಗೆ ಹೊಸ ಚೇತನ ನೀಡಿತು. ಸ್ಯಾಂಡಲ್‌ವುಡ್‌ನ ಗೆಳೆಯರಾದ ದ್ವಾರಕೀಶ್ ಮತ್ತು ವಿಷ್ಣುವರ್ದನ್ ಅಂದು ಸ್ನೇಹಕ್ಕೆ ಮಾದರಿಯಾಗಿ ನಿಂತಿದ್ದರು.

Sulekha