ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌: ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಸರ್ವರ್‌ ಡೌನ್‌ – ಟಿಕೆಟ್‌ ಬುಕ್‌ ಆಗದಿದ್ರೂ ಹಣ ಕಟ್‌!

ಫ್ರೀ ಬಸ್‌ ಟಿಕೆಟ್‌ ಎಫೆಕ್ಟ್‌: ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಸರ್ವರ್‌ ಡೌನ್‌ – ಟಿಕೆಟ್‌ ಬುಕ್‌ ಆಗದಿದ್ರೂ ಹಣ ಕಟ್‌!

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾಗಿ ಆರು ದಿನಗಳಾಗಿವೆ. ಈ ಯೋಜನೆಗೆ  ಮಹಿಳೆಯರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಉಚಿತ ಬಸ್‌ ಪ್ರಯಾಣದ ಹಿನ್ನೆಲೆ ಮಹಿಳೆಯರು ಓಡಾಟ ಹೆಚ್ಚಾಗಿದೆ. ಪ್ರವಾಸಿ ತಾಣಗಳಿಗೆ, ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲು ಪೈಪೋಟಿಯಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡುತ್ತಿದ್ದಾರೆ. ಇದೀಗ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಮತ್ತು ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳ ಸರ್ವರ್‌ ಡೌನ್‌ ಆಗಿದೆ. ಬ್ಯಾಂಕ್‌ನಿಂದ ಹಣ ಕಡಿತಗೊಂಡರೂ ಟಿಕೆಟ್‌ ಬುಕ್‌ ಆಗುತ್ತಿಲ್ಲ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋಗಾಗಿ ಮರಗಳ ಮಾರಣ ಹೋಮ! – ಎರಡು ವರ್ಷಗಳಲ್ಲಿ 3,626 ಮರಗಳಿಗೆ ಕೊಡಲಿ ಏಟು

ಶಕ್ತಿ ಯೋಜನೆ ಆರಂಭವಾದಾಗಿಂದ ಮಹಿಳೆಯರ ಓಡಾಟ ಹೆಚ್ಚಿದೆ. ಅಲ್ಲದೇ ಸರ್ಕಾರಿ ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಸಾಮಾನ್ಯ ಬಸ್‌ಗಳಿಗೆ ಮಹಿಳೆಯರಿಗೆ ಟಿಕೆಟ್‌ ಬುಕ್‌ ಮಾಡಲು ಕೆಎಸ್‌ಆರ್‌ಟಿಸಿ ವೆಬ್‌/ಆ್ಯಪ್‌ನಲ್ಲಿ ಅವಕಾಶ ನೀಡಲಾಗಿದೆ. ಇಲ್ಲಿ 20 ರೂಪಾಯಿ ಬುಕ್ಕಿಂಗ್‌ ಶುಲ್ಕ ಪಾವತಿಸಿ ಮಹಿಳೆಯರು ಟಿಕೆಟ್‌ ಬುಕ್‌ ಮಾಡಬಹು​ದಾ​ಗಿ​ದೆ. ಇದೀಗ ಮಹಿಳೆಯರು ಉಚಿತ ಬಸ್‌ ಪ್ರಯಾಣ ಮಾಡಲು ಮುಂಗಡ ಟಿಕೆಟ್‌ ಬುಕ್ ಮಾಡುತ್ತಿದ್ದಾರೆ. ಇದರಿಂದಾಗಿ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಮತ್ತು ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ಗಳ ಸರ್ವರ್‌ ಡೌನ್‌ ಆಗಿದ್ದು, ಟಿಕೆಟ್‌ ಬುಕ್‌ ಆಗದಿದ್ದರೂ ಕೂಡ ಹಣ ಕಟ್‌ ಆಗುತ್ತಿದೆ.  ಈ ಬಗ್ಗೆ ಪ್ರಯಾಣಿಕರು ಟ್ವಿಟರ್‌ ನಲ್ಲಿ ಕೆಎಸ್‌ಆರ್‌ಟಿಸಿ ಖಾತೆಗೆ ಟ್ಯಾಗ್‌ ಮಾಡಿ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

ಕಳೆದ 2 ದಿನಗಳಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಹಾಗೂ ಮೊಬೈಲ್‌ ಬುಕ್ಕಿಂಗ್‌ ಆ್ಯಪ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡಲು ಆಗುತ್ತಿಲ್ಲ. ಬ್ಯಾಂಕ್‌ ಅಕೌಂಟ್‌ನಿಂದ ಹಣ ಕಡಿತಗೊಳ್ಳುತ್ತಿದ್ದರೂ ಟಿಕೆಟ್‌ ಮಾತ್ರ ಬುಕ್‌ ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ. ಕೆಲವರು ಬುಕ್ಕಿಂಗ್‌ನ ರೆಫರೆನ್ಸ್‌ ಸಂಖ್ಯೆಯನ್ನು ಹಾಕಿ, ‘ಟಿಕೆಟ್‌ ಬುಕ್‌ ಆಗದಿದ್ದರೂ ಬ್ಯಾಂಕ್‌ ಖಾತೆಯಿಂದ ಹಣ ಕಡಿತಗೊಂಡಿದೆ. ರೀಫಂಡ್‌ ಮಾಡಿ’ ಎಂದು ಒತ್ತಾಯಿಸಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು 4 ಟಿಕೆಟ್‌ಗಳನ್ನು ಒಟ್ಟಿಗೆ ಬುಕ್‌ ಮಾಡಿದ್ದು, ಅವರ ಬ್ಯಾಂಕ್‌ ಖಾತೆಯಿಂದ ಟಿಕೆಟ್‌ ಮೊತ್ತದಷ್ಟು ಹಣ ಕಡಿತಗೊಂಡಿದೆ. ಆದರೆ, ಟಿಕೆಟ್‌ ಬುಕ್ಕಿಂಗ್‌ ಯಶಸ್ವಿಯಾಗಿಲ್ಲ, ಫೇಲ್‌ ಎಂದು ಬಂದಿದೆ ಎಂದು ಕೆಎಸ್‌ಆರ್‌ಟಿಸಿ ಟ್ವೀಟರ್‌ ಖಾತೆ ಟ್ಯಾಗ್‌ ಮಾಡಿ ಸಮಸ್ಯೆ ಹಂಚಿಕೊಂಡಿದ್ದಾರೆ.

ಪ್ರಯಾಣಿಕರ ದೂರಿನ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ. ‘ನಿಮ್ಮ ಹಣ ಕಡಿತಗೊಂಡಿದ್ದರೆ 5-7 ಬ್ಯಾಂಕ್‌ ವ್ಯವಹಾರಗಳ ದಿನಗಳಲ್ಲಿ ವಾಪಸ್‌ ನಿಮ್ಮ ಖಾತೆಗೆ ಹಣ ಬರಲಿದೆ. ತಾಂತ್ರಿಕ ಕಾರಣಗಳಿಂದ ವೆಬ್‌ಸೈಟ್‌ ಕಾರ್ಯನಿರ್ವಹಿಸುತ್ತಿಲ್ಲ. ಅಡಚಣೆಗಾಗಿ ವಿಷಾದಿಸುತ್ತೇವೆ. ಸ್ವಲ್ಪ ಸಮಯದ ನಂತರ ಮತ್ತೆ ಪ್ರಯತ್ನಿಸಿ’ ಎಂದು ಹೇಳಿದ್ದಾರೆ.

ಪ್ರಯಾಣಿಕರ ದೂರಿನ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಶಕ್ತಿ ಯೋಜನೆಗೂ ಟಿಕೆಟ್‌ ಬುಕ್ಕಿಂಗ್‌ ಆ್ಯಪ್‌ ಕೆಲಸ ಮಾಡದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಶುಕ್ರವಾರ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಯಾವುದೇ ಸಮಸ್ಯೆ ಆಗಿರಲಿಲ್ಲ. ಆದರೆ, ಮೊಬೈಲ್‌ ಆ್ಯಪ್‌ನಲ್ಲಿ ಬುಕಿಂಗ್‌ ಮಾಡಲು ತಾಂತ್ರಿಕ ದೋಷದಿಂದ ಸಮಸ್ಯೆಯುಂಟಾಗಿತ್ತು. ಪ್ರಸ್ತುತ ಸಮಸ್ಯೆ ಇತ್ಯರ್ಥಪಡಿಸಲಾಗಿದೆ ಎಂದು ಹೇಳಿದ್ದಾರೆ.

suddiyaana