ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ನೆಪದಲ್ಲಿ ಹಣ ವಸೂಲಿ – ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
![ಗೃಹಲಕ್ಷ್ಮೀ, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ನೆಪದಲ್ಲಿ ಹಣ ವಸೂಲಿ – ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು](https://suddiyaana.com/wp-content/uploads/2023/06/Cyber.jpg)
5 ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಾರಿಗೆ ಸರ್ಕಾರ ತಯಾರಿ ನಡೆದಿದೆ. ಹೊಸ ಌಪ್ ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಆದರೆ ಅದಾಗಲೇ ಕೆಲ ಖದೀಮರು ಅರ್ಜಿ ಸಲ್ಲಿಕೆ ನೆಪದಲ್ಲಿ ಜನರಿಂದ ವಸೂಲಿ ಆರಂಭಿಸಿದ್ದಾರೆ. ರಾಜ್ಯದ ಹಲವೆಡೆ ಮಹಿಳೆಯರು ಹಣ ಕಳೆದುಕೊಂಡಿದ್ದಾರೆ.
ಗೃಹಜ್ಯೋತಿ (Gruha Jyothi Scheme) ಮತ್ತು ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಹೆಸರಿನಲ್ಲಿ ಜನರಿಗೆ ವಂಚನೆ ಎಸಗಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಲಾಭ ಕೊಡಿಸುವ ಹೆಸರಿನಲ್ಲಿ ಜನರ ಬಳಿ ಬಂದು ಅರ್ಜಿ ಸಲ್ಲಿಕೆ ನೆಪದಲ್ಲಿ ಮಹಿಳೆಯರಿಂದ ಹಣ ವಸೂಲಿ ಮಾಡುತ್ತಿದ್ದ ವಂಚಕನನ್ನ ಸಾರ್ವಜನಿಕರು ಹಿಡಿದ ಪೊಲೀಸರಿಗೆ ಒಪ್ಪಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಇದನ್ನೂ ಓದಿ : ಆಧಾರ್-ಪ್ಯಾನ್ ಲಿಂಕ್ ಮಾಡಲು ಒಂದೇ ದಿನ ಬಾಕಿ – ಕಾರ್ಡ್ ನಿಷ್ಕ್ರೀಯವಾಗುವುದಕ್ಕೂ ಮುನ್ನ ಲಿಂಕ್ ಮಾಡಿ
ಬೆಂಗಳೂರು ಮೂಲದ ನಬೀರ್ ಹುಸೇನ್ ಎಂಬಾತ ಬಳ್ಳಾರಿಯ ಅಹಂಭಾವಿಯಲ್ಲಿ ಮನೆ ಮನೆಗೆ ಹೋಗಿ ಆನಲೈನ್ನಲ್ಲಿ ಅರ್ಜಿ ಅಪ್ ಲೋಡ್ ಮಾಡುವ ಭರವಸೆ ನೀಡಿ ಮಹಿಳೆಯರಿಂದ 150 ರೂಪಾಯಿಂದ 200 ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದ. ಅಲ್ಲದೆ, ದಿಶಾ ಒನ್ ಹೆಸರಿನಲ್ಲಿ ಬಿಲ್ ನೀಡುತ್ತಿದ್ದನು. ಅನುಮಾನಗೊಂಡ ಸ್ಥಳೀಯರು ನಬೀರ್ನನ್ನು ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಬಳ್ಳಾರಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ವಿಚಾರಣೆ ಆರೋಪಿ ನಾನು ಜನರಿಗೆ ಮೋಸ ಮಾಡುತ್ತಿಲ್ಲ. ಜನರ ಬಳಿಗೆ ಬಂದು ಅರ್ಜಿ ಅಪ್ ಲೋಡ್ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾನೆ. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನ ಮನೆ ಮನೆಗೆ ತಲುಪಿಸಲು ಅರ್ಜಿಗಳನ್ನ ಅಪ್ಲೋಡ್ ಮಾಡುತ್ತಿದ್ದೇನೆ. ಎಲ್ಲರಿಗೂ ಸೈಬರ್ ಸೆಂಟರ್ಗೆ ಬಂದು ಅರ್ಜಿ ಸಲ್ಲಿಸಲು ಆಗಲ್ಲ. ಹಾಗಾಗಿ ನಾನೇ ಮನೆ ಮನೆಗೆ ತೆರಳಿ ಅರ್ಜಿ ಅಪಲೋಡ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.