ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ 91ನೇ ಹುಟ್ಟುಹಬ್ಬ – ಮಣ್ಣಿನ ಮಗ ಪ್ರಧಾನಿಯಾಗಿದ್ದೇಗೆ ಗೊತ್ತಾ?

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ 91ನೇ ಹುಟ್ಟುಹಬ್ಬ – ಮಣ್ಣಿನ ಮಗ ಪ್ರಧಾನಿಯಾಗಿದ್ದೇಗೆ ಗೊತ್ತಾ?

ಹೆಚ್.ಡಿ ದೇವೇಗೌಡ. ಪ್ರತಿಯೊಬ್ಬ ಕನ್ನಡಿಗರೂ ಹೆಮ್ಮೆ ಪಡುವಂತಹ ಕನ್ನಡದ ಮಣ್ಣಿನ ಮಗ. ಅವರು ಬರೀ ವ್ಯಕ್ತಿಯಾಗಿ ಉಳಿದಿಲ್ಲ. ಗಟ್ಟಿಯಾದ ಶಕ್ತಿ, ಬಡ ರೈತ ಕುಟುಂಬದಲ್ಲಿ ಜನಿಸಿ ತಾಲೂಕು ಬೋರ್ಡ್ ಸದಸ್ಯರಾಗಿ ನಂತರ ಸ್ವತಂತ್ರ ಶಾಸಕರಾಗಿ, ಅನೇಕ ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ನೀರಾವರಿ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಈ ದೇಶದ ಪ್ರಧಾನ ಮಂತ್ರಿಯಾಗಿ ಸಾಧನೆ ಮಾಡಿದವರು. ಕರುನಾಡಿನ ಕೀರ್ತಿಯನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ ಗಣನೀಯ ನಾಯಕರಲ್ಲಿ ಹೆಚ್.ಡಿ ದೇವೇಗೌಡ ಕೂಡ ಒಬ್ಬರು.  ಇಂತಹ ಮಣ್ಣಿನ ಮಗನಿಗೆ ಇಂದು 91ನೇ ಹುಟ್ಟುಹಬ್ಬ.

ಇದನ್ನೂ ಓದಿ : ಹೈಕಮಾಂಡ್‌ ನಿರ್ಧಾರಕ್ಕೆ ತಲೆ ಬಾಗಲೇಬೇಕು – ಡಿಸಿಎಂ ಸ್ಥಾನದ ಬಗ್ಗೆ ಡಿಕೆಶಿ ಹೇಳಿಕೆ..

ಮೇ 18, 1933ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದ ಹೆಚ್.ಡಿ ದೇವೇಗೌಡರು 1962 ರಲ್ಲಿ ಪ್ರಥಮ ಬಾರಿಗೆ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದರು. ಭಾರತದ 11 ನೇ ಪ್ರಧಾನ ಮಂತ್ರಿಯಾಗಿ ಹಾಗೂ ಕರ್ನಾಟಕದ 14 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1996 ರಿಂದ 97 ರ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಹಾಗೂ 1994 ರಿಂದ 96 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1996 ರಲ್ಲಿ ಸಂಯುಕ್ತ ರಂಗದ ವತಿಯಿಂದ ಇವರು ಭಾರತದ ಪ್ರಧಾನ ಮಂತ್ರಿಗಳಾದರು.

ದೊಡ್ಡೇಗೌಡ ಮತ್ತು ಶ್ರೀಮತಿ ದೇವಮ್ಮ ಅವರ ಪುತ್ರರಾಗಿ ಜನಿಸಿದ ಶ್ರೀದೇವೇಗೌಡರಿಗೆ ತಾವು ಸರಳ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಕ್ಕೆ ಹೆಮ್ಮೆ ಇದೆ. ಶೀಮತಿ ಚೆನ್ನಮ್ಮ ಅವರನ್ನು ವಿವಾಹವಾದ ದೇವೇಗೌಡ ದಂಪತಿಗೆ ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದಾರೆ. ಇನ್ನು ರಾಜಕೀಯ ಪ್ರವೇಶಕ್ಕೂ ಮುನ್ನ ದೇವೇಗೌಡರು ಗುತ್ತಿಗೆದಾರರಾಗಿದ್ದು, ಸಣ್ಣ ಕಾಮಗಾರಿಗಳನ್ನು ನಡೆಸುತ್ತಿದ್ದರು.

ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವಿಟ್​ ಮೂಲಕ ಮಾಜಿ ಪ್ರಧಾನಿ ಮಂತ್ರಿ ಹೆಚ್​ಡಿ ದೇವೇಗೌಡ ಅವರಿಗೆ ಶುಭಾಶಯ ಕೋರಿದ್ದಾರೆ ‘ದೇಶಏ ಹಕ್ಕೆ ನಿಮ್ಮ ಕೊಡುಗೆ ಅಪಾರ, ಆರೋಗ್ಯದಿಂದ ಇನ್ನು ಹೆಚ್ಚು ಕಾಲ ಬದುಕಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಪುತ್ರ ಹೆಚ್.ಡಿ ಕುಮಾರಸ್ವಾಮಿ, ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಎಂಬಿ ಪಾಟೀಲ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.

suddiyaana