ಬೆಂಕಿ ಕೆನ್ನಾಲಗೆಗೆ ಹೊತ್ತಿ ಉರಿಯುತ್ತಿತ್ತು ಕಾಡು – ಹಸಿರು ಉಳಿಸಲು ಹೋದವನ ದುರಂತ ಸಾವು..!
7ಕಿ.ಮೀ ಹೊತ್ತು ತಂದರೂ ಉಳೀಲಿಲ್ಲ ಜೀವ.. ಮೂವರ ಜೀವನ್ಮರಣ ಹೋರಾಟ!

ಬೆಂಕಿ ಕೆನ್ನಾಲಗೆಗೆ ಹೊತ್ತಿ ಉರಿಯುತ್ತಿತ್ತು ಕಾಡು – ಹಸಿರು ಉಳಿಸಲು ಹೋದವನ ದುರಂತ ಸಾವು..!7ಕಿ.ಮೀ ಹೊತ್ತು ತಂದರೂ ಉಳೀಲಿಲ್ಲ ಜೀವ.. ಮೂವರ ಜೀವನ್ಮರಣ ಹೋರಾಟ!

ಕಾಡಿಗೆ ಹೊತ್ತಿದ್ದ ಬೆಂಕಿ ನಂದಿಸಲು ಹೋಗಿ ಅರಣ್ಯ ಸಿಬ್ಬಂದಿ ಸಾವನ್ನಪ್ಪಿರುವ ಭೀಕರ ಘಟನೆ ಹಾಸನದಲ್ಲಿ ನಡೆದಿದೆ. ಪಶ್ಚಿಮ ಘಟ್ಟದ ಕಾಡಿಗೆ ತಗುಲಿದ ಆಕಸ್ಮಿಕ ಬೆಂಕಿ ನಂದಿಸುವಾಗ ದುರಂತ ಸಂಭವಿಸಿದೆ. ಹಾಗೇ ಡಿಆರ್‌ಎಫ್‌ಒ, ಫಾರೆಸ್ಟ್ ಗಾರ್ಡ್ ಹಾಗೂ ಇಬ್ಬರು ವಾಚರ್‌ಗಳು ಸೇರಿ ಒಟ್ಟು 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ : ದೇಶದಲ್ಲೇ ಮೊದಲ ಬಾರಿಗೆ ಪರ್ವತ ಪ್ರದೇಶಗಳಿಗೆ ಔಷಧಿ ತಲುಪಿಸಲು ಡ್ರೋನ್ ಬಳಕೆ

ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ ಕಬ್ಬಿನೆಲೆ ಎಸ್ಟೇಟ್ ಸಮೀಪ ಕಾಡಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿತ್ತು. ಈ ವೇಳೆ ಬೆಂಕಿ ನಂದಿಸಲು ತೆರಳಿದ್ದ ಸುಂದರೇಶ್​ಗೆ ಶೇ.80ರಷ್ಟು ಸುಟ್ಟ ಗಾಯಗಳಾಗಿದ್ದವು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಸುಂದರೇಶ್ ಮೃತಪಟ್ಟಿದ್ದಾರೆ.

ಸಕಲೇಶಪುರ ತಾಲೂಕಿನ ಕಾಡುಮನೆ ಗ್ರಾಮದ ಮಣಿಬೀಡು ದೇವಸ್ಥಾನದ ಸಮೀಪದ ಪಶ್ಚಿಮಘಟ್ಟದ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಕ್ರಮೇಣ ಎಲ್ಲೆಡೆ ವ್ಯಾಪಿಸಲು ಆರಂಭಿಸಿದೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಬರುತ್ತಿದ್ದಂತೆ ಒಟ್ಟು ಆರು ಮಂದಿ ಸಿಬ್ಬಂದಿ ಸುಮಾರು ಏಳು ಕಿ.ಮೀ ನಡೆದು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಆ ವೇಳೆಗಾಗಲೇ ಬೆಂಕಿ ಕೆನ್ನಾಲಗೆ ಬಿರುಗಾಳಿಯಿಂದ ಧಗಧಗಿಸುತ್ತಿತ್ತು. ಅಮೂಲ್ಯ ಅರಣ್ಯ ಬೆಂಕಿಯಿಂದ ಸುಟ್ಟು ಹೋಗುವುದನ್ನು ತಪ್ಪಿಸಬೇಕೆಂದು ಆರು ಮಂದಿ ಮುಂದಾಗಿದ್ದಾರೆ. ಈ ಪೈಕಿ ನಾಲ್ವರಿಗೆ ಬೆಂಕಿ ತಗುಲಿ ಗಾಯಗಳಾಗಿದ್ದರೆ, ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಹಾಗೂ ಪೊಲೀಸರು ಸುಟ್ಟ ಗಾಯಗಳಿಂದ ನರಳುತ್ತಿದ್ದವರನ್ನು ಕಾಡಿನಿಂದ ಸುಮಾರು ಏಳು ಕಿ.ಮೀ ದೂರ ಹೊತ್ತು ತಂದಿದ್ರು. ಬಳಿಕ ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಾಸನದ ಖಾಸಗಿ ಆಸ್ಪತ್ರೆಗೆ ಕರೆ ತಂದರು.​ ಗಾಯಾಳುಗಳಲ್ಲಿ ಮಂಜುನಾಥ್ ಮತ್ತು ಸುಂದರೇಶ್ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ತುಂಗೇಶ್ ಹಾಗೂ ಮಹೇಶ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ಪೈಕಿ ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ಇವರ ಪೈಕಿ ಸುಂದರೇಶ್ ಮೃತಪಟ್ಟಿದ್ದಾರೆ.

ಸದ್ಯ ಗಂಭೀರ ಸ್ಥಿತಿಯಲ್ಲಿರುವ ಮಂಜುನಾಥ್ ಮತ್ತು ಸುಂದ್ರೇಶ್ ಅವರನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಖುದ್ದು ಎಸ್​ಪಿ ಹರಿರಾಂ ಶಂಕರ್ ಅವರೇ ಎಎಸ್​ಪಿ ತಮ್ಮಯ್ಯ, ಡಿವೈಎಸ್​ಪಿ ಉದಯ ಭಾಸ್ಕರ್ ಅವರೊಂದಿಗೆ ಮುಂದೆ ನಿಂತು ಝೀರೋ ಟ್ರಾಫಿಕ್ ಮಾಡಿ ಌಂಬುಲೆನ್ಸ್ ಸಾಗಲು ಅನುವು ಮಾಡಿಕೊಟ್ಟಿದ್ದಾರೆ. ಆಂಬ್ಯುಲೆನ್ಸ್ ಸಾಗುವ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಗಾಯಾಳುಗಳನ್ನು ಹೊತ್ತ ಆಂಬ್ಯುಲೆನ್ಸ್ ಸುಗಮವಾಗಿ ಸಾಗಲು ಗಮನ ಹರಿಸಿ ಎಂದು ಹೇಳಿದರು. ಇದಕ್ಕೂ ಮುನ್ನ ಝೀರೋ ಟ್ರಾಫಿಕ್ ಮೂಲಕ ಹಾಸನ ಜಿಲ್ಲೆಯ ಗಡಿ ದಾಟಿಸಲು ಎಸ್​​ಪಿ ಮತ್ತವರ ಅಧೀನ ಅಧಿಕಾರಿಗಳು ನೆರವಾಗುವ ಮೂಲಕ ಮಾನವೀಯತೆ ಮೆರೆದರು. ಮತ್ತಿಬ್ಬರು ಗಾಯಾಳಾಗಳಾದ ತುಂಗೇಶ್ ಮತ್ತು ಗಂಗೇಶ್ ಹಾಸನದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಕಲೇಶಪುರ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಒಬ್ಬರು ತಮ್ಮ ಯೂನಿಫಾರಂ ಬಿಚ್ಚಿ ಗಾಯಾಳುವಿಗೆ ಸುತ್ತಿಕೊಂಡು ಕರೆದುಕೊಂಡು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಘಟನೆಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಕ್ಷರಶಃ ಗಾಬರಿಗೊಂಡಿದ್ದು ತಮ್ಮ ಸಿಬ್ಬಂದಿ ನರಳಾಟ ಕಂಡು ಎಲ್ಲರ ಕಣ್ಣಾಲಿಗಳು ತೇವವಾದವು.

suddiyaana