ರಸ್ತೆಯಲ್ಲಿ ಹೋಗುವವರೇ ಇವನ ಟಾರ್ಗೆಟ್‌..! – ಮೈಯೆಲ್ಲಾ ಪರಚಿ, ಕಚ್ಚುತ್ತಿದ್ದವನು ಕೊನೆಗೂ ಅಂದರ್!

ರಸ್ತೆಯಲ್ಲಿ ಹೋಗುವವರೇ ಇವನ ಟಾರ್ಗೆಟ್‌..! – ಮೈಯೆಲ್ಲಾ ಪರಚಿ, ಕಚ್ಚುತ್ತಿದ್ದವನು ಕೊನೆಗೂ ಅಂದರ್!

ಇದು ಸಾಮಾನ್ಯ ಕೋತಿಯಲ್ಲ.. ರೌಡಿ ಕೋತಿ.. ಕಪಿಚೇಷ್ಠೆ ಮಾಡಿಕೊಂಡು ಕಾಲ ಕಳೆಯೋದು ಬಿಟ್ಟು, ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತೆ.. ಯಾರನ್ನಾದ್ರೂ ಟಾರ್ಗೆಟ್‌ ಮಾಡ್ತು ಅಂದ್ರೆ ಸಾಕು ಅವರ ಮೇಲೆ ಎಗರುತ್ತಾ ಮೈಯೆಲ್ಲಾ ಪರಚಿ, ಕಚ್ಚಿ, ದೂಡಿ ಹೋಗುತ್ತಿತ್ತು. ಕಪಿರಾಯನ ರೌಡಿಸಂನಿಂದಾಗಿ ಮನೆಯಿಂದ ಹೊರಬರಲು ಹೆದರುತ್ತಿದ್ದ ಗ್ರಾಮದ ಜನರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ರೌಡಿ ಕೋತಿ ಕೊನೆಗೂ ಸೆರೆಯಾಗಿದೆ..

ದಾವಣಗೆರೆ ನಗರದ ಹಳೇ ಕುಂದುವಾಡದಲ್ಲಿ ಕೋತಿಯೊಂದು ರೌಡಿಸಂ ತೋರಿಸಿದೆ. ಹಾದಿಯಲ್ಲಿ ಬರುವವರ ಮೇಲೆಲ್ಲಾ ದಾಳಿ ಮಾಡುತ್ತಿತ್ತು. ಈ ಕೋತಿಯ ದಾಳಿಗೆ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಬೋನಿನೊಳಗೆ ಬಂದು ಜಸ್ಟ್ ಮಿಸ್ ಆಗಿ ತಪ್ಪಿಸಿಕೊಂಡು ಹೋಗಿದ್ದ ಕೋತಿ ಕೊನೆಗೂ ಬೋನಿಗೆ ಬಿದ್ದು ಲಾಕ್ ಆಗಿದೆ.

ಇದನ್ನೂ ಓದಿ:‌ 20ಕ್ಕೂ ಹೆಚ್ಚು ಜನರ ಮೇಲೆ ದಾಳಿ – ಮೋಸ್ಟ್‌ ವಾಂಟೆಡ್‌ ʼಮಂಗʼ ಅರೆಸ್ಟ್‌!

ಕಳೆದ ಕೆಲವು ದಿನಗಳಿಂದ ಈ ರೌಡಿ ಕೋತಿ ಇಪ್ಪತ್ತಕ್ಕೂ ಹೆಚ್ಚು ಜನರಿಗೆ, ಮಕ್ಕಳಿಗೆ ಕಚ್ಚಿ ಘಾಸಿಗೊಳಿಸಿತ್ತು. ಮಕ್ಕಳು ಶಾಲೆಗೆ ಹೋಗಲು, ವಾಪಾಸ್ ಮನೆಗೆ ತೆರಳಲು ಭಯಪಡಿಸುತ್ತಿದ್ದರು. ಕೋತಿ ಬೈಕ್ ಸವಾರರನ್ನೆ ಹೆಚ್ಚು ಟಾರ್ಗೆಟ್ ಮಾಡುತ್ತಿತ್ತು. ಬೈಕ್ ನಲ್ಲಿ ಹೋಗುತ್ತಿದ್ದವರ ಹೆಗಲ ಮೇಲೆ ಓಡಿ ಬಂದು ಕೂತು ಕಚ್ಚುತ್ತಿತ್ತು. ಇದರಿಂದ ಹೆದರಿ ಎಷ್ಟೊ ಜನ ಬೈಕ್ ನಿಂದ ಬಿದ್ದು ಗಾಯಗೊಂಡಿದ್ದರು. ಹೀಗಾಗಿ ಬೈಕಿನಲ್ಲಿ ಓಡಾಡುವಾಗ ಇದು ಎದುರು ಸಿಕ್ಕಿ ಏನು ಅನಾಹುತವಾಗಿಬಿಡುತ್ತದೋ ಎಂಬ ಭಯದಿಂದ ಜನರು ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇಷ್ಟೆಲ್ಲಾ ಸಾಲದೆಂಬಂತೆ ನಿಂತಿದ್ದ ಬೈಕ್ ಗಳನ್ನು ಸಹ ಕಾಲಿನಿಂದ ದೂಡಿ ಬೀಳಿಸುತ್ತಿತ್ತು. ಈ ರೌಡಿ ಮುಷ್ಯನ ಕೀಟಲೆಯಿಂದ ಜನರು ಬೇಸತ್ತು ಹೋಗಿದ್ದರು. ಹೀಗಾಗಿ ಅರಣ್ಯ ಇಲಾಖೆಯವರ ಬಳಿ ಕೋತಿ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.

ಗ್ರಾಮದ ಜನರು ಅರಣ್ಯ ಇಲಾಖೆ ಉಪ ಸಂರಕ್ಷಣಾ ಅಧಿಕಾರಿ ಶಶಿಧರ್ ಅವರಿಗೆ ದೂರು ನೀಡಿದ್ದರು. ಈ ಹಿನ್ನಲೆ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ನಾಲ್ಕೈದು ದಿನದಿಂದ ಬೋನಿಟ್ಟು ಕಾದಿತ್ತು. ಬೋನಿನೊಳಗೆ ಬಾಳೆಹಣ್ಣು, ಬಿಸ್ಕೆಟ್ ಇಡಲಾಗಿತ್ತು. ಬಾಳೆಹಣ್ಣು ತಿನ್ನುತ್ತಾ ಬೋನಿನೊಳಗೆ ಕೋತಿ ಹೋಗುತ್ತಿತ್ತು. ಆದರೆ ಕೂಡಲೇ ಎಚ್ಚೆತ್ತ ಕೋತಿ ಲಾಕ್ ಬೀಳುವ ಮೊದಲೇ ಎಸ್ಕೇಪ್ ಆಗುತ್ತಿತ್ತು. ಅರಣ್ಯ ಇಲಾಖೆಗೆ ಕರೆ ಮಾಡಿ ಹೆಚ್ಚಿನ ಸಿಬ್ಬಂದಿ ಕಳುಹಿಸುವಂತೆ ಮನವಿ ಮಾಡಿದ ಹಿನ್ನಲೆ ಕೋರಿಕೆಗೆ ಸ್ಪಂದಿಸಿದ ಇಲಾಖೆ, ನಾಲ್ಕು ಮಂದಿಯ ತಂಡವನ್ನು ಕಳುಹಿಸಿತ್ತು. ಒಮ್ಮೆ ಒಂದು ಸ್ಥಳದಲ್ಲಿ ತಪ್ಪಿಸಿಕೊಂಡು ಹೋದರೆ ಮತ್ತೆ ಆ ಸ್ಥಳಕ್ಕೆ ಬರುತ್ತಿರಲಿಲ್ಲ. ಇದು ಅರಣ್ಯಾಧಿಕಾರಿಗಳ ತಲೆನೋವಿಗೆ ಕಾರಣವಾಗಿತ್ತು. ಹೀಗಾಗಿ ಇನ್ನೊಂದು ಪ್ರದೇಶದಲ್ಲಿ ಬೋನಿಟ್ಟು ಮತ್ತೆ ಹಣ್ಣುಗಳನ್ನು ಇಟ್ಟು ಜೊತೆಗೆ ಮಿರರ್ ಅನ್ನು ಸಹ ಇಡಲಾಗಿತ್ತು. ಆ ಕೋತಿಗೆ ಗ್ರಹಚಾರ ಬೋನಿನ ಮೂಲಕ ಕಾದು ಕೂತಿತ್ತೇನೋ, ಹಣ್ಣು ತಿನ್ನುತ್ತಾ ಬೋನಿನ ಒಳಗೆ ಹೋದ ತಕ್ಷಣ ಸಿಬ್ಬಂದಿ ಬೋನ್ ಲಾಕ್ ಮಾಡಿದ್ದಾರೆ. ಸಾಕಷ್ಟು ಬಾರಿ ತಪ್ಪಿಸಿಕೊಂಡಿದ್ದ ರೌಡಿ ಕೋತಿ ಕೊನೆಗೂ ಸೆರೆಯಾಗಿದೆ. ರೌಡಿ ಕೋತಿ ಸೆರೆಯಾದ ಹಿನ್ನೆಲೆ ಗ್ರಾಮದ ಜನರು ನಿಟ್ಟುಸಿರು ಬಿಟ್ಟಿದ್ದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ. ಇನ್ನೂ ಸೆರೆಸಿಕ್ಕ ಕೋತಿಯನ್ನ ಕಾಡಿಗೆ ಬಿಡಲು ಸಿದ್ದತೆ ನಡೆಸಲಾಗಿದೆ.

suddiyaana