ಸಿಲಿಕಾನ್‌ ಸಿಟಿ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ

ಸಿಲಿಕಾನ್‌ ಸಿಟಿ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ಸಿಲಿಕಾನ್‌ ಸಿಟಿ ಜನರ ನಿದ್ದೆಗೆಡಿಸಿದ್ದ ಕಿಲಾಡಿ ಚಿರತೆ ಕೊನೆಗೂ ಸೆರೆಯಾಗಿದೆ. ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಕಳೆದ ಮೂರು ದಿನಗಳಿಂದ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಆ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಅಕ್ಟೋಬರ್‌ 29 ರಂದು ಬೊಮ್ಮನಹಳ್ಳಿ ಭಾಗದ ಕೂಡ್ಲು ಸಮೀಪ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳು ಮೂರು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರು. ಈ ಚಿರತೆ ಒಂದು ಸಲ ಕಣ್ಣಿಗೆ ಕಂಡರೆ ಮತ್ತೊಂದು ಸಲ ಕಾಣದಂತೆ ಮಾಯವಾಗುತ್ತಿದೆ. ಕಟ್ಟಡದಿಂದ ಕಟ್ಟಡಕ್ಕೆ ಜಿಗಿದು ಆಟವಾಡಿಸುತ್ತಿತ್ತು. ಅಷ್ಟೇ ಅಲ್ಲದೇ ಚಿರತೆ ಬುಧವಾರ ಅರವಳಿಕೆ ತಜ್ಞ ಕಿರಣ್‌ ಮೇಲೆ ದಾಳಿ ಮಾಡಿ ಎಸ್ಕೇಪ್‌ ಆಗಿತ್ತು. ಇದೀಗ ಕಿಲಾಡಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ಸೆರೆ ಹಿಡಿಯಲಾಗಿದೆ. ಬಳಿಕ ಲೆಪರ್ಡ್ಸ್ ಟಾಸ್ಕ್‌ಫೋರ್ಸ್‌ ವಾಹನಕ್ಕೆ ಚಿರತೆಯನ್ನು ಶಿಫ್ಟ್ ಮಾಡಿ ಕರೆದೊಯ್ಯಲಾಗಿದೆ.

ಇದನ್ನೂ ಓದಿ: ಬೆಂಗಳೂರು ಜನತೆಯನ್ನು ಕಾಡುತ್ತಿದೆ ಚಿರತೆ ಚಿಂತೆ – ಅರವಳಿಕೆ ಚುಚ್ಚುಮದ್ದು ನೀಡಲು ಹೋಗಿದ್ದ ವೈದ್ಯರ ಮೇಲೆ ದಾಳಿ ಮಾಡಿ ಪರಾರಿ

ಕಾರ್ಯಾಚರಣೆ ನಡೆದಿದ್ದು ಹೇಗೆ..?

ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಅಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೆ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲೂ ಸೆರೆಯಾಗಿತ್ತು.

ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ದಿನವಾದರೂ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು. ಈ ತಂತ್ರಜ್ಞಾನ ಆ ಪ್ರದೇಶದಲ್ಲಿ ಚಿರತೆ ಇರುವುದರ ಸುಳಿವು ನೀಡಿದ್ದರೂ ಸರಿಯಾಗಿ ಗುರುತಿಸಲು ಸಾಧ್ಯವಾಗಿರಲಿಲ್ಲ.

ಮಂಗಳವಾರ ಸಂಜೆಯವರೆಗೂ ಚಿರತೆಗಾಗಿ ಇಡೀ ಕಟ್ಟಡ ಜಾಲಾಡಿದ್ದ ಅಧಿಕಾರಿಗಳಿಗೆ ಹೆಚ್ಚಿನ ಸುಳಿವು ಸಿಕ್ಕಿರಲಿಲ್ಲ. ಆದ್ರೆ ಗೋಡೆಯ ವೇಲೆ ಓಡಾಡಿದ್ದ ಗುರುತು ಪತ್ತೆಯಾಗಿತ್ತು. ಪಾಳು ಬಿದ್ದ ಕಟ್ಟಡದ ಸುತ್ತಮುತ್ತಲಿನ ಕಡೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದರು.

ಮಂಗಳವಾರ ಸಂಜೆ ಕಾರ್ಯಾಚರಣೆಗೆ ವಿರಾಮ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಮುಂಜಾನೆ ಮತ್ತೆ ಶುರು ಮಾಡಿದರು. ಸಾರ್ವಜನಿಕರು ರಸ್ತೆಯಲ್ಲಿ ಓಡಾಡದಂತೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಕೃಷ್ಣಾರೆಡ್ಡಿ ಇಂಡಸ್ಟ್ರಿಯಲ್ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮುಚ್ಚಲಾಗಿತ್ತು.

ಬುಧವಾರದ ಕಾರ್ಯಾಚರಣೆಗೆ ಮೈಸೂರಿನ ವಿಶೇಷ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಹುಣಸೂರಿನಿಂದ ಆಗಮಿಸಿದ ವನ್ಯ ಜೀವಿ ರಕ್ಷಣಾ ತಂಡ ಪಾಳುಬಿದ್ದಿರುವ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಿತ್ತು. ವಿಶೇಷವೇನೆಂದರೆ ವನ್ಯಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಸಹ ಎಂಟ್ರಿ ಕೊಟ್ಟಿದ್ದರು. ಇವರ ಸಹಾಯದಿಂದ ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆಹಿಡಿಯಲಾಗಿದೆ.

Shwetha M