ಫಾರ್ಮ್ ಹೌಸ್​ನಲ್ಲಿ ವಿದೇಶಿ ಹಕ್ಕಿಗಳು – ನಟ ದರ್ಶನ್ ವಿರುದ್ಧ ಕೇಸ್ ದಾಖಲು..!

ಫಾರ್ಮ್ ಹೌಸ್​ನಲ್ಲಿ ವಿದೇಶಿ ಹಕ್ಕಿಗಳು – ನಟ ದರ್ಶನ್ ವಿರುದ್ಧ ಕೇಸ್ ದಾಖಲು..!

ಮೈಸೂರು : ಫಾರ್ಮ್ ಹೌಸ್​ನಲ್ಲಿ ವಿದೇಶಿ ಹಕ್ಕಿಗಳನ್ನ ಸೆರೆ ಇಟ್ಟಿದ್ದ ವಿಚಾರವಾಗಿ ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದ್ದ ವಿಡಿಯೋದಲ್ಲಿ ವಿದೇಶಿ ಹಕ್ಕಿಗಳನ್ನ ಸೆರೆ ಇಟ್ಟಿರೋದು ಖಚಿತವಾಗಿತ್ತು. ಹೀಗಾಗಿ ಅರಣ್ಯಾಧಿಕಾರಿಗಳು ಫಾರ್ಮ್ ಹೌಸ್ ಮೇಲೆ ರೇಡ್ ನಡೆಸಿದ್ರು. ಈ ಸಂಬಂಧ ದರ್ಶನ್, ಫಾರ್ಮ್ ಹೌಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ‘ವಿಧಾನಸೌಧದ ಗೋಡೆಗೆ ಕಿವಿ ಇಟ್ರೆ ಲಂಚ ಲಂಚ ಅನ್ನುತ್ತೆ’ – ಬಿಜೆಪಿಗೆ ಸಿದ್ದು ಸಖತ್ ಟಾಂಗ್!

ಮೈಸೂರಿನ ಟಿ. ನರಸೀಪುರದಲ್ಲಿ ನಟ ದರ್ಶನ್ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದು, ಈಗ ಸಂಕಷ್ಟ ಎದುರಾಗಿದೆ. ದರ್ಶನ್‌ ಅವರ ಫಾರ್ಮ್ ಹೌಸ್‌ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಸಂಚಾರ ದಳ ಸಿಬ್ಬಂದಿ ಮಂಗೋಲಿಯಾ ಮೂಲದ ವಲಸೆ ಹಕ್ಕಿಗಳಾದ ನಾಲ್ಕು ಪಟ್ಟೆ ತಲೆ ಹೆಬ್ಬಾತು (ಬಾರ್‌ ಹೆಡ್ಡೆಡ್‌ ಗೂಸ್‌)ಗಳನ್ನು ವಶಕ್ಕೆ ಪಡೆದಿದ್ದರು.

ಕರ್ನಾಟಕ ಸರ್ಕಾರ ಕಳೆದ ವರ್ಷ ನವೆಂಬರ್​ನಲ್ಲಿ ನಟ ದರ್ಶನ್ ಅವರನ್ನು ಕರ್ನಾಟಕ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯರನ್ನಾಗಿ ನೇಮಿಸಿದೆ. ಅದರ ಜೊತೆಯಲ್ಲೇ ಅವರನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ರಾಯಭಾರಿಯೂ ಆಗಿ ನೇಮಿಸಲಾಗಿದೆ. ಅವರ ಈ ಸದಸ್ಯತ್ವದ ಅವಧಿ ಇದೇ ಈ ವರ್ಷದ ಅಂದ್ರೆ 2023ರ ಅಕ್ಟೋಬರ್ 23ರವರೆಗೂ ಇರಲಿದೆ. ಸಾಲದ್ದಕ್ಕೆ ಅವರು ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯೂ ಕೂಡ. ಇಂಥ ಗುರುತರ ಜವಾಬ್ದಾರಿ ಹೊತ್ತಿರುವ ದರ್ಶನ್ ಫಾರ್ಮ್ ಹೌಸ್ ನ ಮೇಲೆಯೇ ರೈಡ್ ಆಗಿ, ಅಲ್ಲಿ ನಾಲ್ಕು ವಿದೇಶಿ ಹಕ್ಕಿಗಳನ್ನು ವಶಪಡಿಸಿಕೊಳ್ಳಲಾಗಿರುವುದು ಅಚ್ಚರಿ ಮೂಡಿಸಿದೆ.

ಅಕ್ರಮವಾಗಿ ಪಕ್ಷಿಗಳನ್ನು ಇರಿಸಿಕೊಂಡಿದ್ದ ನಟ ದರ್ಶನ್‌, ಪತ್ನಿ ವಿಜಯಲಕ್ಷ್ಮೀ ಹಾಗೂ ಫಾರ್ಮ್ ಹೌಸ್ ವ್ಯವಸ್ಥಾಪಕ ನಾಗರಾಜ್‌ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂಕ್ರಾಂತಿ ಹಬ್ಬದ ವೇಳೆ ದರ್ಶನ್‌ ಫಾರ್ಮ್ ಹೌಸ್ ನಲ್ಲಿ ಮಾಡಿದ್ದ ಸಂದರ್ಶನದ ವಿಡಿಯೋದಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಫಾರ್ಮ್ ಹೌಸ್​ನ ಪಂಜರದಲ್ಲಿ ಇರುವುದು ಕಂಡು ಬಂದಿತ್ತು. ಇದನ್ನು ಗಮನಿಸಿದ ಅರಣ್ಯ ಸಂಚಾರ ದಳದ ಸಿಬ್ಬಂದಿ ದಾಳಿ ನಡೆಸಿ, ಪಕ್ಷಿಗಳನ್ನು ರಕ್ಷಣೆ ಮಾಡಿದ್ದಾರೆ.

ಪಟ್ಟೆ ತಲೆ ಹೆಬ್ಬಾತುಗಳು ವಿರಳವಾದ ಪಕ್ಷಿಗಳಾಗಿವೆ. ಈ ಹಕ್ಕಿಗಳು ಮಧ್ಯ ಏಷ್ಯಾದ ಮಂಗೋಲಿಯಾ, ಕಜಕಿಸ್ತಾನ, ಟಿಬೆಟ್‌ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆ ಪ್ರದೇಶದಲ್ಲಿ ಶೀತ ಹೆಚ್ಚಾದಾಗ ರಕ್ಷಣೆಗೋಸ್ಕರ ಹಿಮಾಲಯ ದಾಟಿ ದಕ್ಷಿಣ ರಾಜ್ಯಗಳಿಗೆ ಆಗಮಿಸುತ್ತವೆ. ಇವುಗಳನ್ನು ಸೆರೆ ಹಿಡಿದು ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಕಾರ ಅಪರಾಧ. ಈ ಹಿನ್ನೆಲೆಯಲ್ಲಿ ದರ್ಶನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಸಂಚಾರ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್‌ ತಿಳಿಸಿದ್ದಾರೆ. ಸದ್ಯ ರಕ್ಷಿಸಿದ ಪಕ್ಷಿಗಳನ್ನು ಮೈಸೂರು ತಾಲೂಕಿನ ಹದಿನಾರು ಕೆರೆಗೆ ಬಿಡಲಾಗಿದೆ.

ದಾಳಿಯ ಬಗ್ಗೆ ಮಾಹಿತಿ ನೀಡಿರುವ ಮೈಸೂರು ವಲಯ ಅರಣ್ಯಾಧಿಕಾರಿ (ಆರ್ ಎಫ್ಒ) ವಿವೇಕ್, ಫಾರ್ಮ್ ಹೌಸ್‌ನಲ್ಲಿ ವಲಸೆ ಹಕ್ಕಿಗಳು ಇರುವ ಖಚಿತ ಮಾಹಿತಿ ದೊರೆತ ಕೂಡಲೇ ಅಲ್ಲಿಗೆ ತೆರಳಿ ಹಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಹಕ್ಕಿಗಳು ದರ್ಶನ್‌ ಫಾರ್ಮ್ ಹೌಸ್​ಗೆ ಹೇಗೆ ಬಂತು? ಅವುಗಳನ್ನು ಅವರಿಗೆ ನೀಡಿದವರು ಯಾರು ಎಂಬ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

suddiyaana