ಟಿವಿ ರಿಮೋಟ್‌ಗಾಗಿ ಅಣ್ಣ, ತಮ್ಮಂದಿರ ಮಧ್ಯೆ ಜಗಳ – ತಂದೆಯ ಸಿಟ್ಟಿಗೆ ಮಗನೇ ಬಲಿ!

ಟಿವಿ ರಿಮೋಟ್‌ಗಾಗಿ ಅಣ್ಣ, ತಮ್ಮಂದಿರ ಮಧ್ಯೆ ಜಗಳ – ತಂದೆಯ ಸಿಟ್ಟಿಗೆ ಮಗನೇ ಬಲಿ!

ಮನೆಯಲ್ಲಿ ಮಕ್ಕಳಿದ್ರೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳವಾಡುತ್ತಾರೆ. ಪ್ರತಿಯೊಂದು ವಿಚಾರಕ್ಕೂ ವಾಗ್ವಾದ ಆಗುತ್ತೆ. ಇನ್ನೂ ಮನೆಯಲ್ಲಿ ಟಿವಿ ಇದ್ರೆ ಕೇಳಬೇಕೇ. ನನಗೆ ಆ ಚಾನಲ್‌ ಬೇಕು.. ಈ ಚಾನಲ್‌ ಬೇಕು. ಟಿವಿ ರಿಮೋಟ್‌ ನನಗೆ ಬೇಕು ಅಂತಾ ಅಣ್ಣ – ತಮ್ಮ, ಅಕ್ಕ – ತಂಗಿ ಮಧ್ಯೆ ಜಗಳವಾಗುವುದು ಸಾಮಾನ್ಯ. ಇಲ್ಲೂ ಕೂಡ ಅಣ್ಣ – ತಮ್ಮಂದಿರ ಮಧ್ಯೆ ಜಗಳವಾಗಿದ್ದು, ಅಣ್ಣ ದುರಂತ ಅಂತ್ಯ ಕಂಡಿದ್ದಾನೆ.

ಏನಿದು ಘಟನೆ?

ಚಿತ್ರದುರ್ಗದ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.  ಟಿವಿ ರಿಮೋಟ್‌ಗಾಗಿ ಅಣ್ಣ-ತಮ್ಮಂದಿರ ನಡುವೆ ಗಲಾಟೆ ನಡೆಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ತಂದೆ ಹಿರಿಮಗನ ಮೇಲೆ ಕತ್ತರಿ ಎಸೆದಿದ್ದಾರೆ. ಇದರ ಪರಿಣಾಮ ತೀವ್ರ ರಕ್ತಸ್ರಾವದಿಂದ ಹಿರಿಮಗ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: 40 ವರ್ಷ ಕಾದ್ರೂ ಸಿಕ್ಕಿಲ್ಲ ರೈಟ್‌ ಪರ್ಸನ್‌! –  ತನ್ನನ್ನು ತಾನೇ ಮದುವೆಯಾದ ಮಹಿಳೆ

ಹಿರಿಮಗ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೃತ ಚಂದ್ರಶೇಖರ್ ಹಾಗೂ ತಮ್ಮ ಪವನ್ (14) ರಿಮೋಟ್‌ಗಾಗಿ ಗಲಾಟೆ ಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ತಂದೆ ಲಕ್ಷ್ಮಣ್‌ಬಾಬು ತನ್ನ ಹಿರಿಮಗನಾದ ಚಂದ್ರಶೇಖರ್ ಮೇಲೆ ಕತ್ತರಿ ಎಸೆದು ಹೆದರಿಸಲು ಮುಂದಾಗಿದ್ದಾರೆ. ಹಲವು ದಿನಗಳಿಂದ ಪಾರ್ಶ್ವವಾಯು ಕಾಯಿಲೆಯಿಂದ ಬಳಲುತ್ತಿರುವ ಲಕ್ಷ್ಮಣ್‌ಬಾಬು ಮಕ್ಕಳ ಜಗಳದಿಂದ ಸಿಟ್ಟಿಗೆದ್ದು ಹಿರಿಮಗನ ಕಡೆಗೆ ಕತ್ತರಿ ಎಸೆದಿದ್ದಾರೆ.

ದುರಾದೃಷ್ಟವಶಾತ್ ಕತ್ತರಿ ಏಟು ಬಾಲಕನ ಕಿವಿಯ ಹಿಂಭಾಗಕ್ಕೆ ಜೋರಾಗಿ ಬಿದ್ದ ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಚಂದ್ರಶೇಖರ್ (16) ಸಾವನ್ನಪ್ಪಿದ್ದಾನೆ. ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Shwetha M