ಅಪ್ಪನ ಜಾಗಕ್ಕೆ ಮಗಳು ವರ್ಗಾವಣೆ , ತಂದೆ ಕೈಯಿಂದಲೇ ಅಧಿಕಾರ ಸ್ವೀಕಾರ – ಮಂಡ್ಯದ ಪೊಲೀಸ್ ಠಾಣೆಯಲ್ಲಿ ಭಾವುಕ ಕ್ಷಣ..!

ಅಪ್ಪನ ಜಾಗಕ್ಕೆ ಮಗಳು ವರ್ಗಾವಣೆ , ತಂದೆ ಕೈಯಿಂದಲೇ ಅಧಿಕಾರ ಸ್ವೀಕಾರ – ಮಂಡ್ಯದ ಪೊಲೀಸ್ ಠಾಣೆಯಲ್ಲಿ ಭಾವುಕ ಕ್ಷಣ..!

ಹೆಣ್ಣು ಮಕ್ಕಳಿಗೆ ಅಪ್ಪನೇ ಸ್ಪೂರ್ತಿ. ಅಪ್ಪನೇ ಮೊದಲ ಹೀರೋ.. ಅಪ್ಪನೆಂದರೆ ಆಕಾಶ ಎಂದು ಹೇಳುವ ಮಕ್ಕಳಿಗೆ ಅಪ್ಪನಿಗೆ ಕೀರ್ತಿ ತರವು ಛಲವೂ ಇರುತ್ತದೆ. ಇದು ಕೂಡಾ ಅಂಥದ್ದೇ ರಿಯಲ್ ಸ್ಟೋರಿ. ಅಪ್ಪನ ಶಿಸ್ತು, ಅಪ್ಪನ ಕರ್ತವ್ಯನಿಷ್ಠೆ, ಅಪ್ಪನ ದೇಶಭಕ್ತಿಯೇ ಮಗಳಿಗೆ ಪ್ರೇರಣೆಯಾಗಿತ್ತು. ಮಿಲಿಟರಿಯಲ್ಲಿದ್ದ ಅಪ್ಪ ನಂತರ ಪೊಲೀಸ್ ಇಲಾಖೆಗೆ ಸೇರಿದ ರೀತಿಯೇ ಮಗಳಿಗೆ ಸ್ಪೂರ್ತಿಯಾಗಿತ್ತು. ಅಪರೂಪದಲ್ಲಿ ಅಪರೂಪವೆಂಬಂತೆ ಮಗಳು ಅಪ್ಪನ ಕೈಯಿಂದಲೇ ಅಧಿಕಾರ ಸ್ವೀಕರಿಸಿದ್ದು ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ಜಾತಿ, ಧರ್ಮ, ಸಿದ್ಧಾಂತಗಳಿಗೆ ತಳುಕು ಹಾಕದೆ ಮಾನಸಿಕ ಆರೋಗ್ಯಕ್ಕಾಗಿ ಯೋಗ ಮಾಡೋಣ – ಸಿಎಂ ಸಿದ್ದರಾಮಯ್ಯ

ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದ ಬಿ.ಎಸ್.ವೆಂಕಟೇಶ್ ಅವರು ಎಸ್‌ಪಿ ಕಚೇರಿಗೆ ವರ್ಗಾವಣೆಯಾಗಿದ್ದು,  ತಮ್ಮ ಮಗಳಾದ, ನೂತನ ಎಸ್ಐ ಬಿ.ವಿ.ವರ್ಷಾ ಅವರಿಗೆ ಜೂನ್ 20ರ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಒಂದು ಕಡೆ ತಂದೆ ವರ್ಗಾವಣೆಯಾಗುತ್ತಿದ್ದರೆ, ಮತ್ತೊಂದು ಕಡೆ ಅದೇ ಸ್ಥಳಕ್ಕೆ ಮಗಳ ನಿಯೋಜನೆಯಾಗಿದೆ. ತಂದೆ ಕೈಯಿಂದಲೇ ಮಗಳು ಅಧಿಕಾರ ವಹಿಸಿಕೊಂಡಿದ್ದಾಳೆ. ಈ ವೇಳೆ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ್ದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿರುವ ವರ್ಷಾ ಅವರು 2022ರ ಬ್ಯಾಚ್‌ನ ಪಿಎಸ್ಐ ಆಗಿದ್ದಾರೆ. ಇವರು ಗುಲ್ಬರ್ಗಾದಲ್ಲಿ ತರಬೇತಿ ಮುಗಿಸಿ, ಮಂಡ್ಯದಲ್ಲೇ 1 ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಅವರ ಮೊದಲ ಪೋಸ್ಟಿಂಗ್ ಕೂಡ ಮಂಡ್ಯದಲ್ಲೇ ಆಗಿದ್ದು ತಂದೆಯಿಂದಲೇ ಚಾರ್ಚ್ ಪಡೆದು ಪೊಲೀಸ್ ವೃತ್ತಿಜೀವನ ಆರಂಭಿಸಿದ್ದಾರೆ. ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರಾದ ವೆಂಕಟೇಶ್ ಅವರು 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪಾಕಿಸ್ತಾನ, ಚೀನಾ, ಬಾಂಗ್ಲಾದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕಾರ್ಗಿಲ್ ಯುದ್ಧದಲ್ಲೂ ಭಾಗಿಯಾಗಿದ್ದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಮಿಲಿಟರಿ ಸೇವೆಯಿಂದ ನಿವೃತ್ತರಾದ ಬಳಿಕ ಪಿಎಸ್ಐ ಪರೀಕ್ಷೆ ಬರೆದು ಮಿಲಿಟರಿ ಕೋಟಾದಡಿ 2010ರ ಬ್ಯಾಚ್‌ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ಬಾರಿಗೆ ವೃತ್ತಿ ಜೀವನ ಆರಂಭಿಸಿದ್ದರು. ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಿಸಿದ್ದಾರೆ. ಸದ್ಯ ಮಂಡ್ಯದ ಸೆಂಟ್ರಲ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಎಸ್‌ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ತಂದೆ ಕೈಯಿಂದ ಅಧಿಕಾರ ಪಡೆದ ಪಿಎಸ್ಐ ವರ್ಷಾ ಅವರು ತನಗಾದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ನನ್ನ ತಂದೆಯೇ ನನ್ನ ಜೀವನದ ಹೀರೋ. ಅವರು ಮಾಡುತ್ತಿದ್ದ ಕೆಲಸವೇ ನನಗೆ ಪ್ರೇರಣೆ. 16 ವರ್ಷಗಳ ಕಾಲ ನನ್ನ ತಂದೆ ವೆಂಕಟೇಶ್ ದೇಶ ಸೇವೆಯಲ್ಲಿ ತೊಡಗಿದ್ರು. 2010 ರಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರ ಕರ್ತವ್ಯ ನಿಷ್ಠೆ ನನಗೆ ಸ್ಪೂರ್ತಿ. ನಾನು ಕೂಡ ಅವರಂತೆ ಉತ್ತಮ ಕೆಲಸ ನಿರ್ವಹಿಸಿ ಒಳ್ಳೆ ಹೆಸರು ಸಂಪಾದಿಸುವೆ. ನೊಂದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇನೆ. ತಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸೆಂಟ್ರಲ್ ಪೊಲೀಸ್ ಠಾಣೆಗೆ ನಾನು ಪಿಎಸ್ಐಯಾಗಿ ನೇಮಕಗೊಂಡಿದ್ದೇನೆ.. ಇಂದು ನನ್ನ ಮನಸ್ಸಿಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ತಂದೆ ವೆಂಕಟೇಶ್ ಕೂಡಾ ಇದು ನನ್ನ ಜೀವನದ ಹೆಮ್ಮೆಯ ಕ್ಷಣ ಎಂದಿದ್ದಾರೆ.

suddiyaana