ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಪತ್ನಿ ಮೇಲೆ ಸಿಟ್ಟಾದ ಪತಿ – ಪೊಲೀಸ್ ಠಾಣೆಯಲ್ಲಿ ಕಂದಮ್ಮನನ್ನ ಕೊಲ್ಲಲು ಯತ್ನಿಸಿದ ಪಾಪಿ
![ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಪತ್ನಿ ಮೇಲೆ ಸಿಟ್ಟಾದ ಪತಿ – ಪೊಲೀಸ್ ಠಾಣೆಯಲ್ಲಿ ಕಂದಮ್ಮನನ್ನ ಕೊಲ್ಲಲು ಯತ್ನಿಸಿದ ಪಾಪಿ](https://suddiyaana.com/wp-content/uploads/2023/09/Pilce.jpg)
ಮೊದಲೆಲ್ಲಾ ಗಂಡ ಹೆಂಡತಿ ಜಗಳ ಅಂದ್ರೆ ಉಂಡು ಮಲಗುವ ತನಕ ಅನ್ನೋ ಮಾತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಜಗಳ ಸಾವಿನವರೆಗೂ ಬಂದು ನಿಲ್ಲುತ್ತೆ. ಹೀಗೆಯೇ ಮಂಗಳೂರಿನಲ್ಲೂ ದಂಪತಿ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪತ್ನಿ ಮೇಲಿದ್ದ ಸಿಟ್ಟಿಗೆ ಪಾಪಿಯೊಬ್ಬ ತನ್ನ ಮಗುವನ್ನೇ ಕೊಲ್ಲಲು ಮುಂದಾಗಿದ್ದ. ಪೊಲೀಸರ ಮುಂದೆಯೇ ದುಷ್ಕೃತ್ಯಕ್ಕೆ ಯತ್ನಿಸಿದ್ದಾನೆ.
ಇದನ್ನೂ ಓದಿ : ಮದುವೆ ಹಾಲ್ನಲ್ಲಿ ಭೀರಕ ಅಗ್ನಿ ದುರಂತ – 100ಕ್ಕೂ ಹೆಚ್ಚು ಮಂದಿ ಸಜೀವ ದಹನ
ಗಂಡ ಹೆಂಡತಿ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆತನ ಪತ್ನಿ, ಮಂಗಳೂರು ಪೂರ್ವ ಪೊಲೀಸ್ ಠಾಣೆ(Mangalore East Police Station)ಗೆ ಹೋಗಿ ‘ನನ್ನ ಪತಿ ಜಗಳ ಮಾಡುತ್ತಿದ್ದಾನೆ. ನನ್ನ ಹಾಗೂ ಮಕ್ಕಳನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಈ ವೇಳೆ ಮಹಿಳೆ ಗಾಬರಿಯಲ್ಲಿ ತನ್ನ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದು, ಕೂಡಲೇ ಪೊಲೀಸರು 112 ಗೆ ಕರೆ ಮಾಡಿ ತಮ್ಮ ಸಿಬ್ಬಂದಿಗೆ ಘಟನಾ ಸ್ಥಳಕ್ಕೆ ಹೋಗಿ, ಆಕೆಯ ಪತಿ ಹಾಗೂ ಆತನ ಇಬ್ಬರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಅದರಂತೆ ಆತನ ಜೊತೆ ಮಕ್ಕಳನ್ನು ಕರೆತಂದಿದ್ದಾರೆ. ಈ ವೇಳೆ ನನ್ನ ಮೇಲೆಯೇ ದೂರು ನೀಡುತ್ತಿಯಾ ಎಂದು ಪತ್ನಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಜೊತೆಗೆ ಪೊಲೀಸ್ ಮುಂದೆಯೇ ತನ್ನ ಸ್ವಂತ ಮಕ್ಕಳನ್ನೇ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾನೆ.
ಪೊಲೀಸ್ ಠಾಣೆಯಲ್ಲಿ ಗಲಾಟೆ ವೇಳೆ ಚಿಕ್ಕ ಮಗುವನ್ನು ನೆಲಕ್ಕೆ ಎಸೆದು ಹಲ್ಲೆ ಮಾಡಿದ್ದರಿಂದ ಕುತ್ತಿಗೆ ಮತ್ತು ತಲೆಗೆ ಗಾಯಗಳಾಗಿತ್ತು. ಈ ವೇಳೆ ರಾತ್ರಿ ಪಾಳಿಯಲ್ಲಿದ್ದ ಪಿಎಸ್ಐ ಪ್ರತಿಭಾ ಅವರನ್ನು ಠಾಣೆಗೆ ಕರೆಸಿ, ಅವರ ಜೊತೆ ತಾಯಿ ಹಾಗೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಪೊಲೀಸರು ಪತಿ ಮಹೇಶ್ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.