ಸೋತರೂ ಮನೆ ಮನೆಗೆ ತೆರಳಿ ಜನರಿಗೆ ಧನ್ಯವಾದ ಸಲ್ಲಿಕೆ – ನಿಖಿಲ್ ನಡೆಗೆ ವ್ಯಾಪಕ ಮೆಚ್ಚುಗೆ!

ಸೋತರೂ ಮನೆ ಮನೆಗೆ ತೆರಳಿ ಜನರಿಗೆ ಧನ್ಯವಾದ ಸಲ್ಲಿಕೆ – ನಿಖಿಲ್ ನಡೆಗೆ ವ್ಯಾಪಕ ಮೆಚ್ಚುಗೆ!

ಮಾಜಿ ಪ್ರಧಾನಿ ಮೊಮ್ಮೊಗ. ಮಾಜಿ ಮುಖ್ಯಮಂತ್ರಿಯ ಮಗ. ಲೋಕಸಭಾ ಚುನಾವಣೆಯಲ್ಲಿ ಸೋತರೂ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅಮ್ಮ ಸ್ಪರ್ಧಿಸಿ ಗೆದ್ದಿದ್ದ ಕ್ಷೇತ್ರದಲ್ಲೇ ಪುತ್ರ ಸೋಲೊಪ್ಪಿಕೊಂಡಿದ್ದಾರೆ. ಸೋಲಿನ ಸಂಕಟದಲ್ಲೂ ಎಲ್ಲರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ.

ಹೌದು. ಗೆಲ್ಲುವ ಅಭ್ಯರ್ಥಿ ಎಂದೇ ನಿರೀಕ್ಷೆ ಹುಟ್ಟಿಸಿದ್ದ ನಟ, ಜೆಡಿಎಸ್ ಯುವನಾಯಕ ನಿಖಿಲ್ ಕುಮಾರ್ ಸ್ವಾಮಿ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ (Assembly Election) ಸೋಲುಂಡಿದ್ದಾರೆ. ಈಗಲೂ ರಾಮನಗರದ (Ramanagara) ಹಲವರಿಗೆ ಈ ಸೋಲನ್ನು(Defeat) ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ನಿಖಿಲ್ ಪರ ಅನೇಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿನ ವಿಡಿಯೋ ಹಾಕುತ್ತಿದ್ದಾರೆ. ತಾವು ರಾಮನಗರದಲ್ಲಿ ಸೋತರೂ ಕ್ಷೇತ್ರಕ್ಕೆ ತೆರಳಿದ್ದ ನಿಖಿಲ್ ಮನೆ ಮನೆಗೆ ತೆರಳಿ ಧನ್ಯವಾದ ತಿಳಿಸಿದ್ದಾರೆ. ಅವರ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ : ‘ನನ್ನ ಬಿಜೆಪಿಯಿಂದ ಹೊರ ಕಳಿಸಿದ್ದಕ್ಕೆ ಜನ ಕ್ಷೇತ್ರದಿಂದ್ಲೇ ಹೊರ ಕಳಿಸಿದ್ದಾರೆ – ಸಿ.ಟಿ ರವಿ ವಿರುದ್ಧ ಎಂ.ಪಿ ಕುಮಾರಸ್ವಾಮಿ ವ್ಯಂಗ್ಯ!

2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ (Sumalatha) ಅವರ ಎದುರು ಸೋತಿದ್ದ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ, ಆ ವಿಶ್ವಾಸ ಹುಸಿಯಾಗಿದೆ. ಈ ಕ್ಷೇತ್ರವನ್ನು ನಿಖಿಲ್ ಅವರ ತಾಯಿ ಅನಿತಾ ಕುಮಾರಸ್ವಾಮಿ ಬಿಟ್ಟುಕೊಟ್ಟಿದ್ದರು. ಮಗನ ಮೇಲೆ ಅತೀವ ನಿರೀಕ್ಷೆ ಕೂಡ ಇಟ್ಟುಕೊಂಡಿದ್ದರು. ರಾಮನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿಖಿಲ್‌ ಕುಮಾರಸ್ವಾಮಿ, ಕಾಂಗ್ರೆಸ್‌ (Congress) ಅಭ್ಯರ್ಥಿ ಇಕ್ಬಾಲ್ ಹುಸೇನ್ ಎದುರು 10,715 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಿಖಿಲ್‌ ಕುಮಾರಸ್ವಾಮಿ ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಬರೆದುಕೊಂಡಿದ್ದಾರೆ.

ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜೊತೆಯಲ್ಲೇ ಇರುತ್ತೇನೆ. ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಹೆಚ್.ಡಿ ದೇವೇಗೌಡ, ತಂದೆ ಹೆಚ್.ಡಿ ಕುಮಾರಸ್ವಾಮಿ ಅವರಿಂದ ಕಲಿತ ಪಾಠ. ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನ ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಃ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು ಎಂದು ಬರೆದುಕೊಂಡಿದ್ದಾರೆ.

suddiyaana