ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿರುವ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಳ!

ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿರುವ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರ ಹರಿವು ಹೆಚ್ಚಳ!

ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಕಾವೇರಿ ಕಿಚ್ಚು ತೀವ್ರಗೊಳ್ಳುತ್ತಿರುವ ನಡುವೆಯೇ ಕೆಆರ್‌ಎಸ್‌ ಅಣೆಕಟ್ಟೆಯಿಂದ ಹೊರಹರಿವು ಹೆಚ್ಚಳವಾಗಿದೆ ಎಂದು ವರದಿಯಾಗಿದೆ.

ಕಾವೇರಿ ನೀರಿಗಾಗಿ ಒಂದೆಡೆ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಬಿಡುಗಡೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಭಾನುವಾರ ಕೆಆರ್‌ಎಸ್‌ ಡ್ಯಾಂನಿಂದ 6,874 ಕ್ಯೂಸೆಕ್ ನೀರು ಬಿಡಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ನಿರ್ದೇಶನಗಳಿಗೆ ಬದ್ಧವಾಗಿ ಬಿಡುಗಡೆಯಾದ ನೀರಿನ ನಿಖರವಾದ ಪ್ರಮಾಣದ ಬಗ್ಗೆ ಕಾವೇರಿ ನೀರಾವರಿ ನಿಗಮ ಲಿಮಿಟೆಡ್ ನ ಅಧಿಕಾರಿಗಳು ಮತ್ತು ನೀರಾವರಿ ಅಧಿಕಾರಿಗಳು ಮಾಹಿತಿ ನೀಡದಿದ್ದರೂ ಅಧಿಕೃತ ಅಂಕಿಅಂಶಗಳ ಪ್ರಕಾರ 3,838 ಕ್ಯೂಸೆಕ್ ನೀರನ್ನು ನದಿಗೆ  ಮತ್ತು 3,036 ಕ್ಯೂಸೆಕ್ ನೀರನ್ನು ನಾಲೆಗೆ ಬಿಡಲಾಗಿದೆ. ಸೆಪ್ಟೆಂಬರ್ 27 ರವರೆಗೆ ಪ್ರತಿದಿನ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ: ಕಾವೇರಿದ ಕಾವೇರಿ ಕಿಚ್ಚು – ಸೆ. 26 ರಂದು ಸ್ತಬ್ಧವಾಗಲಿದೆ ರಾಜ್ಯ ರಾಜಧಾನಿ

ಹೊರಹರಿವು 6,874 ಕ್ಯುಸೆಕ್ ಇದ್ದರೆ, ಅಣೆಕಟ್ಟಿನ ಒಳಹರಿವು 6,156 ಕ್ಯೂಸೆಕ್ಕೆ ಕಡಿಮೆಯಾಗಿದೆ. ಕಳೆದ ವರ್ಷ ಸೆಪ್ಟೆಂಬರ್ 24 ರಂದು ಅಣೆಕಟ್ಟಿನ ನೇರ ಸಾಮರ್ಥ್ಯ 40.40 ಟಿಎಂಸಿ ಅಡಿಯಾಗಿದ್ದರೆ, ಭಾನುವಾರದಂದು 96. 80 ಅಡಿ ನೀರಿನ ಪ್ರಮಾಣದೊಂದಿಗೆ 12.02 ಟಿಎಂಸಿ ಅಡಿ ಗಳಷ್ಟಿತ್ತು. ಕಳೆದ ವರ್ಷ ಇದೇ ದಿನ 124.38 ಅಡಿಗಳಷ್ಟು ನೀರಿದ್ದು ಅಣೆಕಟ್ಟು ತುಂಬಿತ್ತು.  ಕೆಆರ್‌ಎಸ್ ಅಣೆಕಟ್ಟೆ ಮಾತ್ರವಲ್ಲದೆ ಕಬಿನಿ ಅಣೆಕಟ್ಟೆಯಿಂದಲೂ ನೀರು ಬಿಡಲಾಗಿದೆ. ಭಾನುವಾರ 4,890 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಅದರಲ್ಲಿ 2,500 ಕ್ಯೂಸೆಕ್ ನದಿಗೆ ಹಾಗೂ 2,390 ಕ್ಯೂಸೆಕ್ ನಾಲೆಗಳಿಗೆ ಬಿಡಲಾಗಿದೆ ಎಂದು ವರದಿಯಾಗಿದೆ.

Shwetha M