ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪನೆ?

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇಂದಿರಾ ಕ್ಯಾಂಟೀನ್‌ ಸ್ಥಾಪನೆ?

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ ಮತ್ತೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂದಿರಾ ಕ್ಯಾಂಟೀನ್​ಗಳಿಗೆ ಜಾಸ್ತಿ ಕಾಳಜಿ ತೋರಿಸುತ್ತಿರುವ ಸರ್ಕಾರ ಮೆನುವಿನಲ್ಲೂ ಸಾಕಷ್ಟು ಬದಲಾವಣೆ ಮಾಡಿದೆ. ಅಷ್ಟೇ ಅಲ್ಲದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಇಂದಿರಾ ಕ್ಯಾಂಟೀನ್‌ ಗಳನ್ನು ಸ್ಥಾಪಿಸಲು ಮುಂದಾಗಿದೆ. ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕೆಟ್ ಫ್ರೆಂಡ್ಲಿ ಇಂದಿರಾ ಕ್ಯಾಂಟೀನ್ ಗಳ ತೆರಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.

ವಿಮಾನ ನಿಲ್ದಾಣದ ಒಳಗೆ ಸಿಗುವ ಆಹಾರಗಳು ಭಾರಿ ದುಬಾರಿಯಾಗಿರುತ್ತದೆ. ಇದು ಮಧ್ಯಮ ವರ್ಗದ ಜನರ ಪಾಲಿಗೆ ವಿಮಾನ ನಿಲ್ದಾಣದಲ್ಲಿ ಸಿಗುವ ಆಹಾರ ಪದಾರ್ಥಗಳು ತುಂಬಾ ದುಬಾರಿಯಾಗಿದೆ. ಈ ಹಿನ್ನೆಲೆ ಕಳೆದ ಸೋಮವಾರ ವಿವಿಧ ಖಾಸಗಿ ಕ್ಯಾಬ್ ಯೂನಿಯನ್‌ಗಳ ಪ್ರತಿನಿಧಿಗಳು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಿ, ವಿಮಾನ ನಿಲ್ದಾಣದ ಹೊರಗೆ ಇಂದಿರಾ ಕ್ಯಾಂಟೀನ್ ಗಳ ತೆರೆಯುವಂತೆ ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ: ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 1 ವರ್ಷ ಹೆರಿಗೆ ರಜೆ – ಮಗುವಿನ ತಂದೆಗೂ 1 ತಿಂಗಳು ಲೀವ್‌!

ಖಾಸಗಿ ಕ್ಯಾಬ್ ಯೂನಿಯನ್‌ಗಳ ಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ ಅವರು ವಿಮಾನ ನಿಲ್ದಾಣದ ಹೊರಗೆ ಒಂದು ಅಥವಾ ಎರಡು ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆದರೆ, ಕೇಲವ ಕ್ಯಾಬ್ ಚಾಲಕರು ಮಾತ್ರವಲ್ಲ, ಇತರರಿಗೂ ಪ್ರಯೋಜನವಾಗಲಿದೆ. ಎಲ್ಲರ ಹಿತದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಕೈಗೆಟಕುವ ದರದಲ್ಲಿ ಆಹಾರವನ್ನು ಒದಗಿಸಲು ನಾವೂ ಕೂಡ ಬಯಸುತ್ತಿದ್ದೇವೆ. ಕ್ಯಾಂಟೀನ್‌ಗಳ ಸ್ಥಾಪನೆಗೆ ಜಾಗವನ್ನು ಮೀಸಲಿಡಲು ಬಿಬಿಎಂಪಿ ಮೂಲಕ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮನವಿ ಮಾಡುತ್ತೇವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಈ ನಡುವಲ್ಲೇ ಪ್ರತಿಕ್ರಿಯೆ ನೀಡಿಲುವ ಬಿಬಿಎಂಪಿ, ವಿಮಾನ ನಿಲ್ದಾಣವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಿತಿಯ ಅಡಿಯಲ್ಲಿ ಬರುವುದಿಲ್ಲ. ಆದರೂ, ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನ ಪಡೆಯುವುದಾದ್ದರಿಂದ “ಸ್ಪೆಷಲ್ ಕೇಸ್” ಎಂದು ಪರಿಗಣಿಸಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಬಹುದು ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸಾರಿಗೆ ಸಚಿವರು ಯಾವುದೇ ಮಾತುಕತೆಗಳನ್ನು ನಡೆಸಿಲ್ಲ. ಸಚಿವರು ಸೂಚನೆ ನೀಡಿದ್ದೇ ಆದರೆ, ಅದನ್ನು ಪರಿಗಣಿಸಲಾಗುವುದು. ಪ್ರಸ್ತುತ ನಿಯಮಗಳ ಪ್ರಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ತೆರೆಯಬಹುದು, ಆದರೆ, ವಿಮಾನ ನಿಲ್ದಾಣವು ಬಿಬಿಎಂಪಿ ಮಿತಿಯಲ್ಲಿ ಬರುವುದಿಲ್ಲ. ಹೆಚ್ಚೆಚ್ಚು ಜನರು ಸೇರುವ ಪ್ರದೇಶಗಳಲ್ಲಿ ಕ್ಯಾಂಟೀನ್ ಗಳ ತೆರೆಯಲು ನಮಗೆ ಅನುಮತಿ ಇದೆ. ಕೆಲವು ಆಸ್ಪತ್ರೆಗಳ ಆವರಣದಲ್ಲೂ ಇಂದಿರಾ ಕ್ಯಾಂಟೀನ್ ಗಳ ತೆರೆಯಲು ಚಿಂತನೆಗಳ ನಡೆಸಲಾಗುತ್ತಿದೆ. ಅದೇ ರೀತಿ ವಿಮಾನ ನಿಲ್ದಾಣಗಳಲ್ಲಿಯೂ ಸ್ಥಾಪನೆ ಮಾಡುವಂತೆ ಮನವಿ ಬಂದಿದ್ದೇ ಆದರೆ, ಸ್ಪೆಷಲ್ ಕೇಸ್ ಎಂದು ಪರಿಗಣಿಸಿ ಸ್ಥಾಪಿಸಬೇಕಾಗುತ್ತದೆ ಎಂದು ಹೇಳಿದರು.

suddiyaana