ವಿಶ್ವಗೆದ್ದ ರೋಹಿತ್ ಹೆಗಲಲ್ಲಿ ಮಗಳು  – ಮೈದಾನದಲ್ಲೇ ಮಗುವಾದ ವಿರಾಟ್!
ಬೂಮ್ರಾ ಭಾವುಕ, ಪಾಂಡ್ಯ ಕಾಲ್ ಮಾಡಿದ್ಯಾರಿಗೆ?

ವಿಶ್ವಗೆದ್ದ ರೋಹಿತ್ ಹೆಗಲಲ್ಲಿ ಮಗಳು  – ಮೈದಾನದಲ್ಲೇ ಮಗುವಾದ ವಿರಾಟ್!ಬೂಮ್ರಾ ಭಾವುಕ, ಪಾಂಡ್ಯ ಕಾಲ್ ಮಾಡಿದ್ಯಾರಿಗೆ?

ವಿಶ್ವಗೆದ್ದ ಭಾರತ ಕೋಟಿ ಕೋಟಿ ಅಭಿಮಾನಿಗಳ ಮನಸ್ಸು ಗೆದ್ದಿದೆ. ವಿಶ್ವಕಪ್ ಗೆಲುವಿನಲ್ಲಿ ಭಾವುಕ ಕ್ಷಣಗಳಿವೆ, ಸಂತಸದ ಕಣ್ಣೀರಿದೆ, ನಿರಾಶೆಯನ್ನು ಗೆದ್ದ ಸಂಭ್ರಮವಿದೆ. ಇದು ಒಂದೆರೆಡು ವರ್ಷಗಳ ತಪಸ್ಸಲ್ಲ. 14 ವರ್ಷಗಳ ಕಠಿಣ ಪರಿಶ್ರಮ. ಕೊನೆಗೂ ಕಂಡ ಕನಸು, ಅಭಿಮಾನಿಗಳಿಟ್ಟ ನಿರೀಕ್ಷೆ ನಿಜವಾಗಿದೆ. ವಿಶ್ವಕಪ್ ಗೆಲ್ಲುತ್ತಿದ್ದಂತೆ ಆಟಗಾರರು ಸಂಭ್ರಮಿಸಿದ ರೀತಿಗೆ ಫ್ಯಾನ್ಸ್ ಅಂತು ಖುಷಿಯಲ್ಲಿ ಮೈಮರೆತಿದ್ರು. ಇದೇ ಕ್ಷಣದಲ್ಲಿ ಟೀಮ್ ಇಂಡಿಯಾ ಆಟಗಾರರು ತಮ್ಮ ಕುಟುಂಬದ ಜೊತೆ ಭಾವುಕ ಕ್ಷಣಗಳನ್ನು ಕಳೆದ್ರು. ಕಿಂಗ್ ಕೊಹ್ಲಿ ಮುದ್ದಿನ ಮಡದಿ, ಮಕ್ಕಳಿಗೆ ಕಾಲ್‌ ಮಾಡಿದ್ರು.. ಇತ್ತ ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದ ಜಸ್ಪ್ರೀತ್ ಬೂಬ್ರಾ ಮೈದಾನದಲ್ಲೇ ಪತ್ನಿಯನ್ನು ತಬ್ಬಿಕೊಂಡ್ರು.. ರೋಹಿತ್ ಶರ್ಮಾ ಮಗಳನ್ನು ಹೆಗಲ ಮೇಲೆ ಹೊತ್ತು ಮೆರೆದಾಡಿದ್ರು. ರವೀಂದ್ರ ಜಡೇಜಾ ಮುದ್ದು ಮಗಳ ಕೈಹಿಡಿದು ಜಗತ್ತನ್ನೇ ಗೆದ್ದ ಖುಷಿಯಲ್ಲಿ ಹೆಜ್ಜೆ ಹಾಕಿದ್ರು. ಅತ್ತ ಹಾರ್ದಿಕ್ ಪಾಂಡ್ಯ ಪತ್ನಿ ಪಂದ್ಯಕ್ಕೂ ಮುನ್ನ ನಿಗೂಢ ಪೋಸ್ಟ್ ಹಾಕಿದ್ರೆ, ಪಾಂಡ್ಯ ಕಾಲ್ ಮಾಡಿದ್ದು ಯಾರಿಗೆ ಅನ್ನೋ‌ ಕುತೂಹಲ ಮೂಡಿದೆ.

ಇದನ್ನೂ ಓದಿ: ಒಂದು ಜಾಹೀರಾತಿನಿಂದ ಬದಲಾಯ್ತು ಬದುಕು! – ರೋಹಿತ್ ಶರ್ಮಾ ಕೆಣಕಿದ್ಯಾರು? | ಹೊಟ್ಟೆಯಿಂದಲೇ ಹುಟ್ಟಿದ ಕಿಚ್ಚು!!

ಗೆಲುವಿನ ಕ್ಷಣ ಬಂದಾಗ ಎಲ್ಲರೂ ಸಂಭ್ರಮಿಸಲು ಇಷ್ಟಪಡುತ್ತಾರೆ.. ಅದು ಕ್ರಿಕೆಟ್ ಅಭಿಮಾನಿಗಳೇ ಅಗಿರ್ಲಿ ಅಥವಾ ಕ್ರಿಕೆಟಿಗರೇ ಆಗಿರಲಿ, ಟಿ-20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ನಂತರ ಇದೇ ರೀತಿಯ ಸಂಭ್ರಮ ಕಂಡು ಬಂದಿದೆ. ಟೀಂ ಇಂಡಿಯಾ ಗೆಲ್ತಿದ್ದಂತೆ ಕ್ರಿಕೆಟರ್ಸ್ ಸಂಭ್ರಮಕ್ಕೆ ಮಿತಿಯೇ ಇರ್ಲಿಲ್ಲ..

ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮುತ್ತಿದ್ದಂತೆ ಕಿಂಗ್ ಕೊಹ್ಲಿ  ಮೈದಾನದಿಂದಲೇ ಅನುಷ್ಕಾ ಶರ್ಮಾಗೆ ವಿಡಿಯೋ ಕಾಲ್ ಮಾಡಿ ಎಲ್ಲರ ಮುಂದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಫುಟ್ಟ ಮಗುವನ್ನು ವಿಡಿಯೋ ಕಾಲ್ ನಲ್ಲಿ ಮುದ್ದಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ.. ಅಷ್ಟೇ ಅಲ್ಲ, ಮಗಳ ಜೊತೆ ಮಗುವಾದ ಕಿಂಗ್ ಕೊಹ್ಲಿ ಅದೆಷ್ಟೋ ಅಪ್ಪಂದಿರಿಗೆ ಸ್ಪೂರ್ತಿಯ ಸೆಲೆಯಾಗಿ ಕಂಡುಬಂದ್ರು.

ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ  ತ್ರಿವರ್ಣ ಧ್ವಜ ಮತ್ತು ಟ್ರೋಫಿಯೊಂದಿಗೆ ವಿರಾಟ್ ಕೊಹ್ಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ‘ನಾನು ಈ ವ್ಯಕ್ತಿಯನ್ನು ಪ್ರೀತಿಸುತ್ತೇನೆ. ನಾನು ನಿನ್ನನ್ನು ನನ್ನ ಮನೆಯವನು ಎಂದು ಕರೆಯುವುದು ನನ್ನ ಅದೃಷ್ಟ ಎಂದು ಭಾವುಕವಾಗಿ ಪೋಸ್ಟ್ ಮಾಡಿದ್ರು… ‘ನಾವೂ ಈ ವ್ಯಕ್ತಿಯನ್ನು ಪ್ರೀತಿಸುತ್ತೇವೆ’ ಎಂದು ಅಭಿಮಾನಿಗಳು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ವೇಗಿ ಜಸ್ಪ್ರೀತ್ ಬುಮ್ರಾ ಅವರು ತಾನೆಷ್ಟು ಭಾವುಕ ಅನ್ನೋದನ್ನು ತೋರಿಸಿಕೊಟ್ರು. ಕಪ್ ಗೆದ್ದ ನಂತರ ಸಂದರ್ಶನದಲ್ಲಿ ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸಲು ವಿಫಲರಾದರು. ಟಿವಿ ಆ್ಯಂಕರ್​, ಪತ್ನಿ ಸಂಜನಾ ಗಣೇಶನ್  ಸಂದರ್ಶನ ಮಾಡುತ್ತಿದ್ದಾರೆ ಅನ್ನೋದನ್ನ ಮರೆತು ಗೆಲುವಿನ ಖುಷಿಯಲ್ಲಿ ಮುದ್ದಿನ ಮಡದಿಯನ್ನು ಬಾಚಿ ತಬ್ಬಿಕೊಂಡಿದ್ದಾರೆ. ಹೌದು, ಭಾರತ ತಂಡದ ವೇಗಿ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್ ಅವರು ಟಿವಿ ನಿರೂಪಕಿ. ಟಿ -20 ವಿಶ್ವಕಪ್‌ನಲ್ಲಿ ಅವರು ನಿರಂತರವಾಗಿ ಟಿವಿ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಮೊನ್ನೆ‌ ನಡೆದ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಸೋಲಿಸಿದಾಗ, ಸಂಜನಾ ಗಣೇಶನ್ ಕೂಡ ಪಂದ್ಯದ ನಂತರದ ಸಂಭ್ರಮಾಚರಣೆಯನ್ನು ಕವರ್ ಮಾಡುತ್ತಿದ್ದರು. ಏತನ್ಮಧ್ಯೆ, ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜಸ್ಪ್ರೀತ್ ಬುಮ್ರಾ ಅವರನ್ನು ಸಂಜನಾ ಸಂದರ್ಶಿಸಲು ಪ್ರಾರಂಭಿಸಿದರು. ಆರಂಭದಲ್ಲಿ ಸಂದರ್ಶನವೇನೋ‌ ನಡೀತು. ಗೆಲುವಿನ ಬಗ್ಗೆ ಬುಮ್ರಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸಂದರ್ಶನದ ನಂತರ ಬುಮ್ರಾ ತನ್ನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.   ಜಸ್ಪ್ರೀತ್ ಬುಮ್ರಾ ಅಂತಿಮ ಕಾಮೆಂಟ್ ಕೊಟ್ಟ ಕೂಡಲೇ ತಮ್ಮ ಪತ್ನಿ ಟಿವಿ ಆಂಕರ್ ಸಂಜನಾ ಅವರನ್ನು ತಬ್ಬಿಕೊಂಡರು.

ಇನ್ನು ಫೈನಲ್ ಪಂದ್ಯದಲ್ಲಿ ಟರ್ನಿಂಗ್ ಪಾಯಿಂಟ್ ನೀಡಿದ್ದೇ ಸೂರ್ಯ ಕುಮಾರ್ ಯಾದವ್.  ಪಂದ್ಯದ 19ನೇ ಓವರ್​ನಲ್ಲಿ ಅದ್ಬುತ ಕ್ಯಾಚ್​ ಹಿಡಿದು ಪಂದ್ಯಕ್ಕೆ ನಿರ್ಣಾಯ ತಿರುವು ಕೊಟ್ಟ ಸೂರ್ಯಕುಮಾರ್ ಯಾದವ್ ಗೆಲುವನ್ನ ಪತ್ನಿ ಜೊತೆ ಸಂಭ್ರಮಿ‌ಸಿದ್ದಾರೆ ಸ್ಕೈ ಹಾಗೂ ಪತ್ನಿ ದೇವಿಶಾ ಶೆಟ್ಟಿ ಅವರು ರಾತ್ರಿಯಲ್ಲಿ ಟಿ 20 ವಿಶ್ವಕಪ್ ಟ್ರೋಫಿ ಬೆಡ್​ ಮೇಲೆ ಇಟ್ಟು ಮಲಗಿದ್ದಾರೆ. ಈ ಫೋಟೋಸ್ ಭಾರಿ ವೈರಲ್‌ ಆಗಿದೆ.

ವಿಶ್ವಕಪ್ ಗೆದ್ದ ನಾಯಕ ರೋಹಿತ್ ಶರ್ಮಾ ಮುದ್ದಿನ ಮಗಳನ್ನು ಹೆಗಲ ಮೇಲೆ ಹೊತ್ತು ಮೆರೆಸಿದ್ದರು. ಹಿಟ್‌ಮ್ಯಾನ್ ಮೈದಾನದ ಸುತ್ತ ತನ್ನ ಸಹ ಆಟಗಾರರ ಜೊತೆ ರೌಂಡ್ಸ್ ಹೊಡೆಯುವಾಗ ಮಗಳನ್ನು ಹೆಗಲೇ ಮೇಲೆ ಹೊತ್ತುಕೊಂಡು ಹೆಜ್ಜೆ ಹಾಕಿದ್ದರು. ರೋಹಿತ್ ಶರ್ಮಾ ಅವರು ತಾನೊಬ್ಬ ಅಪ್ಪ, ತಾನೂ ಭಾವುಕತೆಯ ಸಾಹುಕಾರ ಅಂತಾ ತೋರಿಸಿಕೊಟ್ಟಿದ್ದರು. ಹಿಟ್ ಮ್ಯಾನ್ ಮಗಳನ್ನು ಮುದ್ದಿಸೋ ರೀತಿಗೆ ಫ್ಯಾನ್ಸ್ ಖುಷಿಗೆ ಪಾರವೇ ಇರಲಿಲ್ಲ.

ಮತ್ತೊಂದೆಡೆ ರವೀಂದ್ರ ಜಡೇಜಾ ಕೂಡಾ ತನ್ನ ಮುದ್ದು ಮಗಳ ಕೈಹಿಡಿದುಕೊಂಡೇ ಮೈದಾನಕ್ಕೆ ಒಂದು ಸುತ್ತು ಬಂದಿದ್ದರು. ಮಗಳು ಕೂಡಾ ಹೆಮ್ಮೆಯಿಂದ ಅಪ್ಪನ ಕೈ ಹಿಡಿದು ವಿಶ್ವಕಪ್ ಗೆದ್ದ ಖುಷಿಯಲ್ಲಿ ಹೆಜ್ಜೆ ಹಾಕಿದ್ದಳು.

ಇನ್ನೊಂದ್ಕಡೆ ಟೀಮ್ ಇಂಡಿಯಾ ಆಟಗಾರ ಹಾಗೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರ ಡಿವೋರ್ಸ್ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಮಗೆಲ್ಲ ಗೊತ್ತೇ ಇದೆ.  ಸದ್ಯ ಈ ಸುದ್ದಿ ತಣ್ಣಗಾಗಿದೆ. ಟಿ20 ವಿಶ್ವಕಪ್ ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ನತಾಶಾ ಪೋಸ್ಟ್ ಮಾಡಿರುವ ಇನ್ ಸ್ಟಾಗ್ರಾಂ ಸ್ಟೋರಿ ವೈರಲ್ ಆಗಿದೆ.

ಪಂದ್ಯ ಆರಂಭಕ್ಕೂ ಮುನ್ನ ನತಾಶಾ ಜಿಮ್‌ನಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದರು. ವಿಡಿಯೋ ಜತೆಗೆ ನನ್ನ ದಿಗಂತದಲ್ಲಿರುವ ಸೂರ್ಯ ನೀನು ಎಂಬ ಅಡಿಬರಹ ಬರೆದುಕೊಂಡಿದ್ದರು. ತಾವು ಡಾನ್ಸ್ ಮಾಡುತ್ತಿದ್ದ ಹಾಡಿನ ಸಾಲುಗಳನ್ನೇ ನತಾಶಾ ಬರೆದುಕೊಂಡಿದ್ದರು., ಆದ್ರೆ ಈ ಪೋಸ್ಟ್ ನಲ್ಲಿ ಯಾರನ್ನ ಕೂಡ ಟ್ಯಾಗ್ ಮಾಡಿರ್ಲಿಲ್ಲ.. ಇದು ಮತ್ತಷ್ಟು ಅನುಮಾನಗಳಿಗೆ ಕಾರಣ ಆಗಿದೆ.

ಇನ್ನು ಅಭಿಮಾನಿಗಳ ಗಮನ ಸೆಳೆದಿದ್ದು ಮಾತ್ರ ಫೈನಲ್ ಪಂದ್ಯದ ಬಳಿಕ ಪಾಂಡ್ಯ ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಕ್ಷಣ. ಪಂದ್ಯದ ಬಳಿಕ ಪಾಂಡ್ಯ ವಿಡಿಯೋ ಕಾಲ್‌ನಲ್ಲಿ  ಮಾತನಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋ ಕಾಲ್‌ನಲ್ಲಿ ಪಾಂಡ್ಯ ಜತೆ ಮಾತನಾಡಿದ್ದು ಯಾರು ಎಂಬ ಪ್ರಶ್ನೆ ಮೂಡಿದೆ. ಆದರೆ, ನತಾಶಾ ಮಾತ್ರ ಈವರೆಗೂ ಟೀಮ್ ಇಂಡಿಯಾ ವಿಶ್ವಕಪ್ ಜಯಿಸಿದ್ದರ ಬಗ್ಗೆ ಒಂದೇ ಒಂದು ಪೋಸ್ಟ್ ಮಾಡಿಲ್ಲ.

ಹೀಗೆ ವಿಶ್ವ ಕಪ್‌ ಸೆಲೆಬ್ರೆಷನ್ ವೇಳೆ ಕ್ರಿಕೆಟಿಗರು ತಮ್ಮ ಫ್ಯಾಮಿಲಿ ಜೊತೆ ಸಂಭ್ರಮಾಚರಿಸಿದ ರೀತಿ ಅಭಿಮಾನಿಗಳಿಗೆ ಮತ್ತಷ್ಟು ಖು‌ಷಿ ಕೊಟ್ಟಿದೆ.

Shwetha M

Leave a Reply

Your email address will not be published. Required fields are marked *