KPSC ಅಕ್ರಮ ಕೇಸ್‌ – ಶಿವಶಂಕರಪ್ಪ ಸಾಹುಕಾರ್ ಮನೆ ಹಾಗೂ KPSC ಕಚೇರಿ ಮೇಲೆ ED ರೈಡ್

KPSC ಅಕ್ರಮ ಕೇಸ್‌ – ಶಿವಶಂಕರಪ್ಪ ಸಾಹುಕಾರ್ ಮನೆ ಹಾಗೂ KPSC ಕಚೇರಿ ಮೇಲೆ ED ರೈಡ್

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (KPSC) ಅಕ್ರಮ ನೇಮಕಾತಿ ಆರೋಪ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇಂದು (ಆಗಸ್ಟ್ 18) ಕೆಪಿಎಸ್‌ಸಿ ಕಚೇರಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.ಬೆಂಗಳೂರಿನಲ್ಲಿರುವ ಕೆಪಿಎಸ್‌ಸಿ ಮುಖ್ಯ ಕಚೇರಿ, ಅಮಾನತುಗೊಂಡಿರುವ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ನಿವಾಸ ಹಾಗೂ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಅವರ ನಿವಾಸ ಸೇರಿದಂತೆ ಕರ್ನಾಟಕ ಮತ್ತು ಅಹಮದಾಬಾದ್‌ನ ಒಟ್ಟು 21 ಸ್ಥಳಗಳ ಮೇಲೆ ಇಡಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಇದನ್ನೂ ಓದಿ: ರಾಜ್ಯದ ಜನರಿಗೆ ಮತ್ತೊಂದು ಬಿಗ್ ಶಾಕ್ – BMTC, KSRTC ಬಸ್ ದರ ಏರಿಕೆ ಸಾಧ್ಯತೆ

ಕೆಪಿಎಸ್‌ಸಿ ನಡೆಸಿದ ಪಶುವೈದ್ಯಾಧಿಕಾರಿಗಳ ನೇಮಕಾತಿ ಮತ್ತು ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಹುದ್ದೆಗಳ ನೇಮಕಾತಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ, ಒಎಂಆರ್ ಶೀಟ್ ತಿದ್ದುಪಡಿ, ಸ್ವಜನಪಕ್ಷಪಾತ ಹಾಗೂ ಅಕ್ರಮ ಹಣ ವರ್ಗಾವಣೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಡಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಡಿಜಿಟಲ್ ಮೌಲ್ಯಮಾಪನದ ಹೊಣೆ ಹೊತ್ತಿದ್ದ ‘ಎಡುಟೆಸ್ಟ್ ಸಲ್ಯೂಷನ್ಸ್’ ಸಂಸ್ಥೆ ಹಾಗೂ ಮಧ್ಯವರ್ತಿಗಳ ಮನೆಗಳ ಮೇಲೂ ದಾಳಿ ನಡೆದಿದೆ.

ಇನ್ನು ಈಗಾಗಲೇ ರಾಜ್ಯ ಸರ್ಕಾರವು ಈ ಸಂಬಂಧ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಇದೀಗ ಅಕ್ರಮ ಹಣ ವರ್ಗಾವಣೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಕೂಡ ಪ್ರಕರಣ ದಾಖಲಿಸಿಕೊಂಡು ತೀವ್ರ ಶೋಧ ನಡೆಸುತ್ತಿದೆ.

ಕೆಪಿಎಸ್ ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​ಗೆ ಇಂದು ಡಬಲ್ ಶಾಕ್ ಎದುರಾಗಿದೆ. ಒಂದ್ಕಡೆ ಇವತ್ತು ಹೈಕೋರ್ಟ್ ನಲ್ಲಿ ರಾಜ್ಯಪಾಲರ ಆದೇಶ ಪ್ರಶ್ನಿಸಿದ ಅರ್ಜಿ ಆದೇಶ ಹೊರಬೀಳಲಿದೆ.  ಮತ್ತೊಂದ್ಕಡೆ ಸದ್ದಿಲ್ಲದೆ ಸಿಐಡಿ ತನಿಖೆ ನಡುವೆ ಮಾಹಿತಿ ಕಲೆ ಹಾಕಿ ಇಡಿ ರೇಡ್ ಮಾಡಿದೆ.
 

Kishor KV

Leave a Reply

Your email address will not be published. Required fields are marked *