ಹರ್ಷಿತ್ ರಾಣಾ T20Iಯಿಂದ OUT! CSK ಕೋಚ್..20 ಕೋಟಿಗೆ ಡೀಲ್?

ಹರ್ಷಿತ್ ರಾಣಾ T20Iಯಿಂದ OUT! CSK ಕೋಚ್..20 ಕೋಟಿಗೆ ಡೀಲ್?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಇಶಾನ್ ಕಿಶನ್ ಅಬ್ಬರಿಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 270 ರನ್ ಸಿಡಿಸಿದ್ದ ಕಿಶನ್, ಎರಡನೇ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ್ದಾರೆ. ಒಟ್ಟಾರೆ 350 ರನ್‌ಗಳೊಂದಿಗೆ ಫೈನಲ್‌ನಲ್ಲಿ ಅತಿ ಹೆಚ್ಚು ಒಟ್ಟು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಈ ಪ್ರದರ್ಶನದ ಮೂಲಕ ಟೆಸ್ಟ್ ತಂಡಕ್ಕೆ ಕಂಬ್ಯಾಕ್ ಮಾಡುವ ತಮ್ಮ ಆಸೆಯನ್ನು ಮತ್ತಷ್ಟು ಬಲಪಡಿಸಿದ್ದಾರೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಈಸ್ಟ್ ಝೋನ್ ಭರ್ಜರಿ ಮೇಲುಗೈ ಸಾಧಿಸಿದೆ. ಸೌತ್ ಝೋನ್‌ನ್ನು 336 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ, ಈಸ್ಟ್ ಝೋನ್ ಭಾರಿ ಮುನ್ನಡೆ ಪಡೆದಿದೆ. ಇಶಾನ್ ಕಿಶನ್ ನಾಯಕತ್ವದ ತಂಡಕ್ಕೆ ಟ್ರೋಫಿ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಮೊದಲ ಇನ್ನಿಂಗ್ಸ್ ಮುನ್ನಡೆಯೇ ನಿರ್ಣಾಯಕವಾಗುವ ಸಾಧ್ಯತೆಯಿದ್ದು, ಈಸ್ಟ್ ಝೋನ್ ಪ್ರಶಸ್ತಿ ಗೆಲುವಿನ ಹೊಸ್ತಿಲಲ್ಲಿದೆ.

ಇದನ್ನೂ ಓದಿ: ಶ್ರೇಯಸ್ ಗೆ AFG ಅಗ್ನಿಪರೀಕ್ಷೆ – ಸರಣಿ ಗೆದ್ರಷ್ಟೇ ಕ್ಯಾಪ್ಟನ್ಸಿ ರಿಲೀಫ್

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಸೌತ್ ಝೋನ್ ನಾಯಕ ತಿಲಕ್ ವರ್ಮಾ ಶತಕದಂಚಿನಲ್ಲಿ ಎಡವಿದ್ದಾರೆ. ತಿಲಕ್ 99 ರನ್ ಗಳಿಸಿ ಔಟಾಗಿದ್ದಾರೆ. ಎರಡನೇ ಶತಕ ದಾಖಲಿಸುವ ಅವಕಾಶ ಕೇವಲ ಒಂದು ರನ್‌ನಿಂದ ಕೈತಪ್ಪಿದೆ. ಆದರೂ ಟೂರ್ನಿಯಲ್ಲಿ ಅವರ ಸ್ಥಿರ ಪ್ರದರ್ಶನ ಗಮನ ಸೆಳೆದಿದ್ದು, ಟೆಸ್ಟ್ ಕ್ರಿಕೆಟ್ ಆಡುವ ಗುರಿಯತ್ತ ತಿಲಕ್ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಶಾಕ್ ಎದುರಾಗಿದೆ. ಹರ್ಷಿತ್ ರಾಣಾ ಫಿಟ್ನೆಸ್ ಸಮಸ್ಯೆಯಿಂದ ಸರಣಿಯಿಂದ ಹೊರಗುಳಿದಿದ್ದಾರೆ. ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಜಸ್ಪ್ರೀತ್ ಬುಮ್ರಾ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿದ್ದಾರೆ. ರಾಣಾ ಸಂಪೂರ್ಣ ಫಿಟ್​ನೆಸ್​ ಸಾಧಿಸದ ಕಾರಣ, ಅವರಿಗೆ ಮತ್ತಷ್ಟು ವಿಶ್ರಾಂತಿ ನೀಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.

ಹಾರ್ದಿಕ್ ಪಾಂಡ್ಯಾ ಮತ್ತೆ ಭಾರತ ತಂಡಕ್ಕೆ ಮರಳುವ ಸಿದ್ಧತೆಯಲ್ಲಿದ್ದಾರೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಎ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಇಂಡಿಯಾ ಎ ತಂಡದಲ್ಲಿ ಹಾರ್ದಿಕ್‌ರನ್ನು ಆಯ್ಕೆ ಮಾಡಲಾಗಿದೆ. ಆದರೆ ಅವರ ಆಯ್ಕೆ ಸಂಪೂರ್ಣ ಫಿಟ್ನೆಸ್‌ಗೆ ಒಳಪಟ್ಟಿದೆ. ಹೀಗಾಗಿ ಸೆಪ್ಟೆಂಬರ್ 27ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಆಡುವುದಿಲ್ಲ ಎಂದು ವರದಿಯಾಗಿದೆ.

ಮಹಿಳಾ ಏಷ್ಯಾಕಪ್‌ನಲ್ಲಿ ಇಂದು ಭಾರತ ಮತ್ತು ಬಾಂಗ್ಲಾದೇಶ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಭಾರತ ಲೀಗ್ ಹಂತದಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಗ್ರಸ್ಥಾನ ಪಡೆದುಕೊಂಡಿದೆ. ಬಾಂಗ್ಲಾದೇಶ ಎರಡನೇ ಸ್ಥಾನ ಪಡೆದು ಸೆಮಿಫೈನಲ್‌ಗೆ ಬಂದಿದೆ. 2018ರ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಭಾರತಕ್ಕೆ ಆಘಾತ ನೀಡಿದ್ದ ಹಿನ್ನೆಲೆ, ಇಂದಿನ ಪಂದ್ಯದಲ್ಲಿ ಭಾರತದ ಮೇಲೆ ವಿಶೇಷ ನಿರೀಕ್ಷೆ ಇದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ದಿನ ಪಾಕಿಸ್ತಾನ ಕೇವಲ 133 ರನ್‌ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಪಾಕಿಸ್ತಾನದ ಬ್ಯಾಟರ್‌ಗಳು ತತ್ತರಿಸಿದ್ದಾರೆ. ಓಲಿ ರಾಬಿನ್ಸನ್ ಮೂರು, ಜೋಶ್ ಟಂಗ್ ನಾಲ್ಕು ಹಾಗೂ ಜೋಫ್ರಾ ಆರ್ಚರ್ ಮೂರು ವಿಕೆಟ್ ಪಡೆದಿದ್ದಾರೆ. ದಿನದ ಅಂತ್ಯಕ್ಕೆ ಇಂಗ್ಲೆಂಡ್ 156/4 ಗಳಿಸಿದ್ದು, 23 ರನ್‌ಗಳ ಮುನ್ನಡೆ ಸಾಧಿಸಿದೆ.

ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನ ಲಾಭದಾಯಕ ಒಪ್ಪಂದವನ್ನು ತಿರಸ್ಕರಿಸಿದ್ದಾರೆ. ರಾಷ್ಟ್ರೀಯ ತಂಡದ ಜವಾಬ್ದಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಭಾರತ ವಿರುದ್ಧದ ಸರಣಿ ಸೇರಿದಂತೆ ಮುಂದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಎರಡು ಟಿ20 ವಿಶ್ವಕಪ್‌ಗಳ ಸಿದ್ಧತೆಯ ಮೇಲೆ ಗಮನ ಹರಿಸುವುದಾಗಿ ಸ್ಯಾಂಟ್ನರ್ ತಿಳಿಸಿದ್ದಾರೆ.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮೋರ್ಗನ್‌ನನ್ನ ಸಿಎಸ್​ಕೆ ತಂಡದ ಮುಖ್ಯ ಕೋಚ್ ಆಗಿಸಲು ತೆರೆಮರೆಯ ಪ್ರಯತ್ನ ನಡೆಯುತ್ತಿದೆ ಎಂದು ವರದಿಯಾಗಿದೆ. ಐಪಿಎಲ್ 2027ರ ಮೆಗಾ ಹರಾಜಿಗೂ ಮುನ್ನವೇ ಕ್ರಿಕೆಟ್ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಇಂಗ್ಲೆಂಡ್ ತಂಡಕ್ಕೆ 2019 ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಈ ಯಶಸ್ವಿ ನಾಯಕ ಇಯಾನ್ ಮೋರ್ಗನ್ ಅವರನ್ನು ಸಿಎಸ್​ಕೆ ಫ್ರಾಂಚೈಸಿ ಸಂಪರ್ಕಿಸಿದ್ದು, ಈ ವೇಳೆ ಅವರು ₹20 ಕೋಟಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.     

ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ಅಂಡರ್-19 ತಂಡಕ್ಕೆ ವಿಚಿತ್ರ ಪರಿಸ್ಥಿತಿ ಎದುರಾಗಿದೆ. ಪೋರ್ಟ್ಸ್‌ಮೌತ್‌ನ ಹೋಟೆಲ್ ಬಳಿ ಸುಮಾರು 40 ಮಂದಿ ಮುಖ ಮುಚ್ಚಿಕೊಂಡ ಪ್ರತಿಭಟನಾಕಾರರು, ತಂಡದ ಆಟಗಾರರನ್ನು ತಪ್ಪಾಗಿ ನಿರಾಶ್ರಿತರೆಂದು ಭಾವಿಸಿ ಜಮಾಯಿಸಿದ್ದರು. ಬಳಿಕ ಅವರು ಕ್ರಿಕೆಟಿಗರು ಎಂಬುದು ತಿಳಿದುಬಂದಿದ್ದು, ಸ್ಥಳೀಯ ಕೌನ್ಸಿಲರ್ ಮಧ್ಯಪ್ರವೇಶದ ನಂತರ ಪ್ರತಿಭಟನೆ ಶಾಂತಿಯುತವಾಗಿ ಅಂತ್ಯಗೊಂಡಿದೆ.

Kishor KV

Leave a Reply

Your email address will not be published. Required fields are marked *