2ಗಂಟೆ ಮೇಕಪ್, ರಿಯಲ್ ಫೇಸ್ ಡಿಲೀಟ್! – ದೃಷ್ಟಿಬೊಟ್ಟು ಯಾರಿಗೆ?
ವಿಜಯ್ ಸೂರ್ಯ ಕಮ್‌ಬ್ಯಾಕ್

2ಗಂಟೆ ಮೇಕಪ್, ರಿಯಲ್ ಫೇಸ್ ಡಿಲೀಟ್! – ದೃಷ್ಟಿಬೊಟ್ಟು ಯಾರಿಗೆ?ವಿಜಯ್ ಸೂರ್ಯ ಕಮ್‌ಬ್ಯಾಕ್

ಅಗ್ನಿಸಾಕ್ಷಿ ಸೀರಿಯಲ್ ನಂತರ ಕಲರ್ಸ್ ಕನ್ನಡ ಕುಟುಂಬಕ್ಕೆ ನಟ ವಿಜಯ್ ಸೂರ್ಯ ಗ್ರೇಟ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಹೊಸ ಕಥೆ, ಹೊಸ ಗೆಟಪ್‌ನಲ್ಲಿ ವಿಜಯ್ ಸೂರ್ಯ ಭರ್ಜರಿಯಾಗಿಯೇ ಎಂಟ್ರಿ ಕೊಡ್ತಿದ್ದಾರೆ. ರಗಡ್ ಪಾತ್ರದಲ್ಲಿ ಸಿದ್ದು ಎಂಟ್ರಿ ನೋಡಲು ವೀಕ್ಷಕರು ಕೂಡಾ ಕಾಯ್ತಿದ್ದಾರೆ. ರೂಪ ಇವನಿಗೆ ಕೋಪ, ರೂಪ ಇವಳಿಗೆ ಶಾಪ ಅನ್ನೋ ಹೊಸ ಕಥೆಯನ್ನ ವಿಭಿನ್ನವಾಗಿ ಹೊತ್ತು ತರೋ ‘ದೃಷ್ಟಿಬೊಟ್ಟು’ ಸೀರಿಯಲ್ ಹೀರೋ ಆಗಿ ವಿಜಯ್ ಸೂರ್ಯ ಕಾಣಿಸಿಕೊಂಡಿದ್ದಾರೆ. ಈ ಸೀರಿಯಲ್ ನ ಸ್ಟೋರಿ ಏನು? ಈ ಧಾರಾವಾಹಿಯ ವಿಶೇಷತೆಯೇನು? ಯಾರೆಲ್ಲಾ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ಕಾಣಿಸಿಕೊಳ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮ್ಯಾಕ್ಸಿಗೆ ಪುಟ್ಟಕ್ಕನ ಮಗಳ ಮೇಲೆ ಲವ್‌? – ಸಹನಾಗೆ ಕಾಳಿಯೇ ಬೆಸ್ಟ್‌!

ರೂಪವೇ ಶಾಪವಾದ ಹುಡುಗಿಯೊಬ್ಬಳ ಕತೆಯನ್ನು ಮನಮುಟ್ಟುವಂತೆ ಹೇಳಲು ಬರ್ತಿದೆ ಹೊಸ ಧಾರಾವಾಹಿ ‘ದೃಷ್ಟಿಬೊಟ್ಟು’. ಸೆಪ್ಟೆಂಬರ್ 9ರಿಂದ ಈ ಸೀರಿಯಲ್ ಸ್ಟಾರ್ಟ್ ಆಗಲಿದೆ.  ಸೋಮವಾರದಿಂದ ಶನಿವಾರದವರೆಗೆ ಪ್ರತಿ ಸಂಜೆ ಆರೂವರೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಧಾರಾವಾಹಿಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಕುತೂಹಲ ಸೃಷ್ಟಿ ಮಾಡಿದೆ. ನಾಯಕಿಯ ಪಾತ್ರದಲ್ಲಿ ಅರ್ಪಿತಾ ಮೋಹಿತೆ ಎಂಬ ಹೊಸ ನಟಿ ಕಾಣಿಸಿಕೊಳ್ಳಲಿದ್ದಾರೆ. ಈ ಧಾರಾವಾಹಿಯಲ್ಲಿ ಅರ್ಪಿತಾ ಅವರದ್ದು ಮೈನ್ ರೋಲ್. ಈ ಧಾರಾವಾಹಿಯ ಪಾತ್ರಕ್ಕೋಸ್ಕರ 2 ಗಂಟೆಗಳ ಕಾಲ ಮೇಕಪ್ ಮಾಡಿಕೊಳ್ತಿದ್ದಾರೆ ಅರ್ಪಿತಾ. ದೃಷ್ಟಿ ಪಾತ್ರ ಮಾತ್ರ ವೀಕ್ಷಕರ ಮನಸಲ್ಲಿ ಉಳಿಯಬೇಕು ಎಂಬ ಕಾರಣಕ್ಕೆ ಅರ್ಪಿತಾ ತನ್ನ ಒರಿಜಿನಲ್ ಫೇಸ್ ಎಲ್ಲೂ ತೋರಿಸ್ತಿಲ್ಲ. ಇದಕ್ಕಾಗಿಯೇ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡಾ ಡಿಲಿಟ್ ಮಾಡಿದ್ದಾರಂತೆ.

ಹಿರಿಯ ನಟಿ ಅಂಬಿಕಾ ಈ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಡುತ್ತಿದ್ದಾರೆ. ಜೊತೆಗೆ ದೀಪಶ್ರೀ, ರಾಘು ಶಿವಮೊಗ್ಗ, ಅಶೋಕ್ ಹೆಗಡೆ ಸೇರಿದಂತೆ ಅನೇಕ ಕಿರಿ ಹಿರಿ ನಟ-ನಟಿಯರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ಈ ಧಾರಾವಾಹಿಯ ಪ್ರತಿಯೊಂದು ಪಾತ್ರವೂ ವೀಕ್ಷಕರ ಮನಗೆಲ್ಲುವಂತಿದೆ’ ಎನ್ನುತ್ತಾರೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್. ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದು ‘ದೃಷ್ಟಿ ಬೊಟ್ಟು’ ಧಾರಾವಾಹಿಯ ಮತ್ತೊಂದು ಹೆಗ್ಗಳಿಕೆ.

ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಕುತೂಹಲಕರ ಕಥಾನಕವನ್ನು ‘ದೃಷ್ಟಿಬೊಟ್ಟು’ ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪ. ತನ್ನ ರೂಪವನ್ನೇ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ. ಮೊದಲು ಮೆಕಾನಿಕ್ ಆಗಿ ಈಗ ರೌಡಿಯಾಗಿರುವ ಕಥಾನಾಯಕ ದತ್ತ, ಸುಂದರವಾಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ದುರುಳ ಪೋಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. ಆಮೇಲೆ ಕತೆ ಹಲವು ಊಹಿಸಲಾಗದ ತಿರುವುಗಳನ್ನು ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತದೆ. ದೃಷ್ಟಿಗೆ ತನ್ನ ಸೋದರಿ ಸಿಗುತ್ತಾಳಾ? ದತ್ತ ಮತ್ತು ದೃಷ್ಟಿ ಪರಸ್ಪರ ಪ್ರೀತಿಯಲ್ಲಿ ಬೀಳ್ತಾರಾ? ದತ್ತನನ್ನು ಅವನ ದುಷ್ಟ ಸೋದರಿಯರಿಂದ ದೃಷ್ಟಿ ಕಾಪಾಡುತ್ತಾಳಾ? ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ‘ದೃಷ್ಟಿಬೊಟ್ಟು’ ಧಾರಾವಾಹಿ ಕಿರುತೆರೆ ಮೇಲೆ ಬರುತ್ತಿದೆ. ಸೆಪ್ಟೆಂಬರ್ 9ರಿಂದ ಸಂಜೆ 6:30ಕ್ಕೆ ಈ ಧಾರಾವಾಹಿಯನ್ನ ವೀಕ್ಷಕರು ನೋಡಬಹುದು.

Shwetha M

Leave a Reply

Your email address will not be published. Required fields are marked *