ಹಲ್ಲು ನೋವೆಂದು ಆಸ್ಪತ್ರೆಗೆ ಹೋದಾಕೆಗೆ ಅನಸ್ತೇಶಿಯಾ ನೀಡಿದ ವೈದ್ಯರು! – ಕೋಮಾಗೆ ಜಾರಿದ ಮಹಿಳೆ

ಹಲ್ಲು ನೋವೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ಕೋಮಾಗೆ ಜಾರಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ತಾಂಡವ್ ಕ್ಷಮಿಸಿದ ಭಾಗ್ಯ.. ಕಟ್ಟಡದಿಂದ ಹಾರಿದ ಶ್ರೇಷ್ಠಾ ಬದುಕಲ್ಲ? – ಪ್ರಮುಖ ಪಾತ್ರವೇ ಎಂಡ್?
ಕಲಬುರಗಿ ಜಿಲ್ಲೆಯ ಜೇವರ್ಗಿಯಲ್ಲಿ ಈ ಘಟನೆ ನಡೆದಿದೆ. ಖಾಜಾ ಕಾಲೋನಿಯ ನಿವಾಸಿ ನಾಜಿಯಾ ಬೇಗಂ ಹಲ್ಲುನೋವೆಂದು ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಮಹಿಳೆಯ ಹಲ್ಲು ಕೀಳಬೇಕೆಂದು ವೈದ್ಯರು ಸೂಚಿಸಿದ್ದಾರೆ. ಹಲ್ಲು ಕೀಳಲು ವೈದ್ಯರು ಅನಸ್ತೇಶಿಯಾ ನೀಡುತ್ತಿದ್ದಂತೆ ನಾಜಿಯಾ ಕೋಮಾಗೆ ಜಾರಿದ್ದಾರೆ. ಜನವರಿ 1 ರಂದು ನಾಜಿಯಾ ಕೋಮಾಗೆ ಜಾರಿದ್ದು, ಅಂದಿನಿಂದ ಇಲ್ಲಿಯವರೆಗೆ ನಾಜೀಯಾ ಬೇಗಂ ಆಸ್ಪತ್ರೆ ಬೆಡ್ ಮೇಲೆ ಕೋಮಾ ಸ್ಥಿತಿಯಲ್ಲಿಯೇ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು ಯಾವಾಗ ನಾಜೀಯಾ ಬೇಗಂ ಆರೋಗ್ಯದಲ್ಲಿ ಏರುಪೇರಾಗಿ ಕೋಮಾಗೆ ಹೋದರೋ ಆಗ ಆಡಳಿತ ಮಂಡಳಿ ಎಚ್ಚೆತ್ತುಕೊಂಡು, ಆಕೆಯ ಕುಟುಂಬ ಸದಸ್ಯರಿಂದ ಒಂದು ರೂಪಾಯಿಯನ್ನು ಸಹ ಪಡೆಯದೇ ಸುಮಾರು 45 ದಿನಗಳಿಂದ 8 ಲಕ್ಷಕ್ಕೂ ಅಧಿಕ ಹಣವನ್ನು ಸಂಸ್ಥೆಯವರೇ ಭರಿಸಿ ಆಕೆಗೆ ಚಿಕಿತ್ಸೆ ಕೊಡುತ್ತಿದ್ದಾರೆ. ಆದರೆ ಈಕೆಯ ಆರೋಗ್ಯದಲ್ಲಿ ಮಾತ್ರ ಯಾವುದೇ ಹೇಳಿಕೊಳ್ಳುವ ಬದಲಾವಣೆಯಾಗಿಲ್ಲ. ಹೀಗಾಗಿ ಇದೀಗ ಆಸ್ಪತ್ರೆಯ ವೈದ್ಯರು ನಾಜೀಯಾಗೆ ಫಿಜಿಯೋಥೆರಫಿ ಚಿಕಿತ್ಸೆ ಬೇಕು ಅದು ನಮ್ಮ ಬಳಿ ಇಲ್ಲ ಹೀಗಾಗಿ ಬೆಂಗಳೂರು ಅಥವಾ ಹೈದ್ರಾಬಾದ್ನ ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಅಂತಾ ಹೇಳುತ್ತಿದ್ದಾರೆ. ಇದೀಗ ನಾಜಿಯಾ ಈ ಸ್ಥಿತಿಗೆ ಕಾರಣ ಅಂತಾ ಪೊಷಕರು ಆರೋಪಿಸಿದರೆ, ಇದರಲ್ಲಿ ವೈದ್ಯರ ತಪ್ಪಿಲ್ಲ ಅಂತಾ ಖಾಸಗಿ ಆಸ್ಪತ್ರೆ ವೈದ್ಯರು ಹೇಳುತ್ತಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದ ನಾಜಿಯಾ ಎರಡು ಮಕ್ಕಳನ್ನು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ ನಾಜಿಯಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಪುಟಾಣಿ ಮಕ್ಕಳ ಭವಿಷ್ಯದ ಕತೆಯೇನು ಎಂಬ ಪ್ರಶ್ನೆ ಎದುರಾಗಿದೆ.

ನೋಡಿರಿ

