ಆಪರೇಶನ್ ಮಾಡಿ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಡಾಕ್ಟರ್   

ಆಪರೇಶನ್ ಮಾಡಿ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಡಾಕ್ಟರ್   

ಅಮ್ರೋಹಾ: ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಮಹಿಳೆಯ ಆಪರೇಶನ್ ನಡೆಸಿದ ವೈದ್ಯರೊಬ್ಬರು, ಆಕೆಯ ಹೊಟ್ಟೆಯೊಳಗೆ ಟವೆಲ್ ಮರೆತು ಬಿಟ್ಟ ಘಟನೆ ಉತ್ತರ ಪ್ರದೇಶದ ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ವರದಿಯಾಗಿದೆ.

ನಜ್ರಾನಾ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನಲೆ ಆಕೆಯನ್ನು ಸೈಫೀ ನರ್ಸಿಂಗ್ ಹೋಮ್‌ ನಲ್ಲಿ ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಸಿಬ್ಬಂದಿಯ ನಿರ್ಲಕ್ಷ್ಯದಿಂದ ಟವೆಲ್ ನಜ್ರಾನಾ ಅವರ ಹೊಟ್ಟೆಯೊಳಗೆ ಉಳಿದಿದೆ. ಮಹಿಳೆ ಹೊಟ್ಟೆ ನೋವಿನ ಬಗ್ಗೆ ದೂರು ನೀಡಿದ ನಂತರ, ಅವರು ಅವಳನ್ನು ಇನ್ನೂ ಐದು ದಿನಗಳವರೆಗೆ ಅಡ್ಮಿಟ್ ಮಾಡಿದರು. ಹೀಗೆ ಯಾಕೆ ಅಡ್ಮಿಟ್ ಮಾಡಿದ್ದೀರಿ ಎಂದು ಕೇಳಿದಾಗ ಹೊರಗಿನ ಚಳಿಯಿಂದ ಆಕೆಗೆ ಹೊಟ್ಟೆ ನೋವು ಆಗಿದೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗ ರಿಷಬ್​ ಪಂತ್​ ಮುಂಬೈಗೆ ಶಿಫ್ಟ್ – ಏರ್​ ಆ್ಯಂಬುಲೆನ್ಸ್​​​ ಮೂಲಕ ಆಸ್ಪತ್ರೆಗೆ ರವಾನೆ

ಆಸ್ಪತ್ರೆಯಿಂದ ಡಿಶ್ಚಾರ್ಚ್ ಆಗಿ ಮನೆಗೆ ಬಂದರೂ, ಆಕೆಯ ಆರೋಗ್ಯ ಸುಧಾರಿಸಿರಲಿಲ್ಲ. ಪತಿ ಶಂಶೇರ್ ಅಲಿ ಆಕೆಯನ್ನು ಅಮ್ರೋಹದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ನಜ್ರಾನಾಳ ಹೊಟ್ಟೆ ನೋವಿನ ಹಿಂದಿನ ಸತ್ಯ ಗೊತ್ತಾಗಿದೆ. ಬಳಿಕ ಮತ್ತೊಂದು ಆಪರೇಷನ್ ಮಾಡಿ ಹೊಟ್ಟೆಯಲ್ಲಿದ್ದ ಟವೆಲ್ ಹೊರತೆಗೆಯಲಾಗಿದೆ. ಈ ಖಾಸಗಿ ವೈದ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಕೆಯ ಪತಿ, ಸಿಎಂಒಗೆ ದೂರು ನೀಡಿದ್ದಾರೆ.

“ನಾನು ಘಟನೆಯ ಬಗ್ಗೆ ಮಾಧ್ಯಮ ವರದಿಗಳ ಮೂಲಕ ತಿಳಿದುಕೊಂಡಿದ್ದೇನೆ ಮತ್ತು ಈ ಬಗ್ಗೆ ಪರಿಶೀಲಿಸಲು ನೋಡಲ್ ಅಧಿಕಾರಿ ಡಾ.ಶರದ್ ಅವರನ್ನು ಕೇಳಿದ್ದೇನೆ. ತನಿಖೆ ಪೂರ್ಣಗೊಂಡ ನಂತರವೇ ನಾವು ಹೆಚ್ಚಿನ ವಿವರಗಳನ್ನು ನೀಡಬಹುದು” ಎಂದು ಸಿಎಂಒ ಸಿಂಘಾಲ್ ಮಂಗಳವಾರ ಹೇಳಿದ್ದಾರೆ. ಆದರೆ, ಶಂಶೇರ್ ಅಲಿ ಈ ಬಗ್ಗೆ ಯಾವುದೇ ಲಿಖಿತ ದೂರು ನೀಡಿಲ್ಲ. ವೈದ್ಯರ ನಿರ್ಲಕ್ಷ್ಯ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ರಾಜೀವ್ ಸಿಂಘಾಲ್ ಹೇಳಿದ್ದಾರೆ.

suddiyaana