ಶಿವ ಶಿವ ಎಂದರೆ ಭಯವಿಲ್ಲ – ಮಹಾಶಿವರಾತ್ರಿ ಆಚರಣೆ, ಉಪವಾಸದ ಹಿನ್ನೆಲೆ ನಿಮಗೆ ಗೊತ್ತಾ?

ನಾಡಿನೆಲ್ಲೆಡೆ ಶಿವರಾತ್ರಿ ಹಬ್ಬದ ಸಂಭ್ರಮ. ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿದೆ. ಭಕ್ತರೆಲ್ಲಾ ಪರಮೇಶ್ವರನ ಜಪತಪದಲ್ಲಿ ಮುಳುಗಿದ್ದು ಉಪವಾಸ ಮಾಡ್ತಿದ್ದಾರೆ. ಈ ಮಹಾಶಿವರಾತ್ರಿಗೆ ಹಿಂದೂಧರ್ಮದಲ್ಲಿ ಪವಿತ್ರ ಸ್ಥಾನಮಾನವಿದೆ.
ಇದನ್ನೂ ಓದಿ: ಫೆಬ್ರವರಿ 15 ಕ್ಕೆ ಮಹಾಶಿವರಾತ್ರಿ – ಹೇಗಿರಬೇಕು ವ್ರತ?, ನಿಯಮಗಳೇನು?
ಶಿವರಾತ್ರಿಯ ದಿನ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಶಿವ ಮತ್ತು ಪಾರ್ವತಿಯನ್ನು ಪೂಜಿಸುತ್ತಾರೆ. ಉಪವಾಸ ಆಚರಿಸಿ ಶಿವನ ಆಶೀರ್ವಾದವನ್ನು ಪಡೆಯುತ್ತಾರೆ. ಆದರೆ ಶಿವರಾತ್ರಿಯ ಹಿಂದಿನ ಕಥೆ ಏನು, ಈ ದಿನ ಏಕೆ ಇಷ್ಟು ಮಹತ್ವ ಎಂಬ ವಿವರ ಹೀಗಿದೆ, ಒಂದು ದಂತಕಥೆಯ ಪ್ರಕಾರ, ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ ಶಿವನು ಮಹಾ ಶಿವರಾತ್ರಿಯ ಮಧ್ಯರಾತ್ರಿಯಲ್ಲಿ ಬ್ರಹ್ಮನ ಕೃಪೆಯಿಂದ ರುದ್ರನಾಗಿ ಅವತರಿಸುತ್ತಾನೆ. ಶಿವನು ತನ್ನ ಸತಿಯ ದಹನದ ಸುದ್ದಿಯನ್ನು ಕೇಳಿದಾಗ ಸೃಷ್ಟಿ, ಸಂರಕ್ಷಣೆ ಮತ್ತು ವಿನಾಶದ ಸಂಕೇತವಾದ ಶಿವತಾಂಡವ ಮಾಡಿದ ಎನ್ನಲಾಗುತ್ತದೆ. ಇನ್ನೊಂದು ಪಂಚಾಂಗದ ಪ್ರಕಾರ, ಸಾಗರದ ಮಂಥನದ ಸಮಯದಲ್ಲಿ ಸಮುದ್ರದಿಂದ ವಿಷವು ಹೊರಬಂದಿತು. ಅದು ಇಡೀ ಸೃಷ್ಟಿಯನ್ನು ನಾಶಮಾಡುವ ಶಕ್ತಿಯನ್ನು ಹೊಂದಿತ್ತು. ಆದರೆ, ಶಿವನು ವಿಷವನ್ನು ಕುಡಿದು ಇಡೀ ಪ್ರಪಂಚವನ್ನು ಸರ್ವನಾಶದಿಂದ ರಕ್ಷಿಸಿದ. ಆದ್ದರಿಂದ, ಬ್ರಹ್ಮಾಂಡವನ್ನು ಸಂರಕ್ಷಿಸಿದ್ದಕ್ಕಾಗಿ ಮಹಾ ಶಿವರಾತ್ರಿಯಂದು ಶಿವನ ಆರಾಧನೆ ಮಾಡಲಾಗುತ್ತದೆ ಎಂಬ ನಂಬಿಕೆ ಇದೆ. ಇದಷ್ಟೇ ಅಲ್ಲದೆ ಶಿವರಾತ್ರಿಯ ಬಗ್ಗೆ ಅನೇಕ ಕಥೆಗಳಿದೆ. ಈ ದಿನವನ್ನು ಶಿವ ಪಾರ್ವತಿ ದೇವಿಯನ್ನು ಮದುವೆಯಾದ ದಿನ ಎನ್ನಲಾಗುತ್ತದೆ.
ಇದಲ್ಲದೇ, ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಇಳಿದು ಬಂದ ಗಂಗೆಯ ರಭಸವನ್ನು ತಡೆಯಲು ಶಿವ ತನ್ನ ಜಡೆಯಲ್ಲಿ ಗಂಗೆಯನ್ನು ಹಿಡಿದುಕೊಳ್ಳುತ್ತಾನೆ. ಇಲ್ಲದಿದ್ದರೆ ಗಂಗೆಯ ರಭಸಕ್ಕೆ ಇಡೀ ಭೂಲೋಕ ಕೊಚ್ಚಿ ಹೋಗುತ್ತಿತ್ತು. ಶಿವ ಗಂಗೆಯನ್ನು ಹಿಡಿದುಕೊಂಡಿದ್ದು ಕಂಡ ಭಗೀರಥ ಸ್ವಲ್ಪ ಚಿಂತೆಗೆ ಒಳಗಾಗುತ್ತಾನೆ. ಕೊನೆಗೆ ಗಂಗೆಯನ್ನು ಭೂಮಿಗೆ ಹರಿದು ಬಿಡುವಂತೆ ಶಿವನನ್ನು ಬೇಡಿಕೊಳ್ಳುತ್ತಾನೆ. ಭಗೀರಥನ ಭಕ್ತಿಗೆ ಮೆಚ್ಚಿದ ಶಿವ ತನ್ನ ಜಡೆಯಲ್ಲಿದ್ದ ಗಂಗೆಯನ್ನು ಹರಿದು ಬಿಡುತ್ತಾನೆ. ಈ ದಿನವನ್ನೇ ಪುರಾಣಗಳ ಪ್ರಕಾರ ಶಿವರಾತ್ರಿ ಹಬ್ಬ ಎಂದು ಆಚರಿಸಲಾಗುತ್ತದೆ ಎನ್ನುವ ನಂಬಿಕೆ ಸಹ ಇದೆ.
ಇದರ ಜೊತೆಗೆ , ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂದು ಸಹ ಹೇಳಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ, ಮಹಾಶಿವರಾತ್ರಿಯಂದು ಮಾಡುವ ಪೂಜೆಯು ನಮಗೆ ವಿವಿಧ ರೀತಿಯಲ್ಲಿ ಒಳಿತನ್ನ ಮಾಡುತ್ತದೆ. ಈ ದಿನ, ಭಗವಾನ್ ಶಿವನ ಅಭಿಷೇಕದಿಂದ ಎಲ್ಲಾ ದುಃಖ, ನೋವುಗಳು ಮತ್ತು ಎಲ್ಲಾ ರೀತಿಯ ಭಯ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಮಂಗಳಕರ ದಿನದಂದು, ಶಿವ ತಾಂಡವ ಸ್ತೋತ್ರ ಮತ್ತು ಶಿವ ಚಾಲೀಸಾವನ್ನು ಪಠಿಸುವುದು ಸಹ ಮುಖ್ಯವಾಗುತ್ತದೆ. ಈ ಮಂತ್ರಗಳ ಪಠಣದಿಂದ ಶಿವನ ರಕ್ಷೆ ಯಾವಾಗಲೂ ಭಕ್ತರ ಮೇಲೆ ಇರುತ್ತದೆ ಎಂಬುದು ನಂಬಿಕೆ. ಮಹಾದೇವನು ಈ ಅದ್ಭುತ ಸ್ತೋತ್ರಗಳನ್ನು ಪಠಿಸುವ ಮೂಲಕ ತನ್ನ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎಂಬುದು ಹಿಂದಿನಿಂದಲೂ ವಾಡಿಕೆಯಲ್ಲಿರುವ ಶಾಸ್ತ್ರವಾಗಿದೆ.

ನೋಡಿರಿ

